ರಾಜ್ಯ ಸರಕಾರದ ವಿರುದ್ಧ ಯಾವಾಗ ಪ್ರತಿಭಟಿಸುತ್ತೀರಿ?: ‘ಕೈ’ ನಾಯಕರಿಗೆ ಸಿವಿಸಿ ಪ್ರಶ್ನೆ

ಕೊಪ್ಪಳ: ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಸಾಮಾನ್ಯ ವಸ್ತುಗಳ ದರವನ್ನು ಗಗನಕ್ಕೇರಿಸಿದ ಕಾಂಗ್ರೆಸ್ ಪಕ್ಷ ಬೆಲೆ ಏರಿಕೆ ವಿರುದ್ಧ ಕೊಪ್ಪಳದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದ ಹಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಟೀಕೆಸಿದ್ದಾರೆ.
ಅಂತರಾಷ್ಟ್ರೀಯ ವಿದ್ಯಮಾನಗಳು ಭಾರತದಲ್ಲಿ ತೈಲ ಬೆಲೆಯ ಮೇಲೆ ಪ್ರಭಾವ ಬೀರಿರುವ ಕುರಿತು ಸಾಮಾನ್ಯ ಜ್ಞಾನವೂ ಇಲ್ಲದ ಕೊಪ್ಪಳದ ಕಾಂಗ್ರೆಸ್ ಪಕ್ಷದ ಮುಖಂಡರು ಮೂರು ವರ್ಷಗಳ ಕಾಲ ಸಿದ್ದರಾಮಯ್ಯನವರು ನಿರಂತರವಾಗಿ ಸಾಮಾನ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡುತ್ತಿದ್ದಾಗ ಏಕೆ ಪ್ರತಿಭಟಿಸಲಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ
‘ರಾಜ್ಯ ಸರಕಾರ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 3.50 ರೂಪಾಯಿ ಹೆಚ್ಚಳ ಮಾಡಿತು. ಜನನ ಮತ್ತು ಮರಣ ಪ್ರಮಾಣ ಪತ್ರದ ದರವನ್ನು 100 % ರಷ್ಟು ಹೆಚ್ಚಿಸಿತು. ಈಗ ಮನೆಯ ಕಸದ ಮೇಲೂ ನೂರಾರು ರೂಪಾಯಿ ಸೆಸ್ ವಿಧಿಸುತ್ತಿದೆ. ಸ್ಟಾಂಪ್ ಡ್ಯೂಟಿ ದರವನ್ನು 4 ಪಟ್ಟು ಹೆಚ್ಚಳ ಮಾಡಿದೆ. ವಿದ್ಯುತ್ ದರವನ್ನು ಎರಡು ಸಲ ಹಾಲಿನ ದರವನ್ನು ಮೂರು ಸಲ ಹೆಚ್ಚಳ ಮಾಡಲಾಗಿದೆ. ಸರಕಾರದ ನೀತಿಗಳಿಂದ ಕೃಷಿ ಭೂಮಿ ಮಾರ್ಗಸೂಚಿ ಮೌಲ್ಯವು ಶೇಕಡಾ 50ರಷ್ಟು ಏರಿಕೆಯಾಗಿದೆ.
ನಿವೇಶನಗಳ ಹೆಚ್ಚಳ 30 % ರಷ್ಟು ಹೆಚ್ಚಾಗಿದೆ. ಅಪಾರ್ಟ್ ಮೆಂಟ್ ಮಾರ್ಗಸೂಚಿ ಮೌಲ್ಯವ ಶೇಕಡಾ 20 % ರಷ್ಟು ಏರಿಕೆಯಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ,” ಎಂದು ಹೇಳಿದ್ದಾರೆ.
ಬಿತ್ತನೆ ಬೀಜದ ಬೆಲೆಯಲ್ಲಿ 100% ರಷ್ಟು ಏರಿಕೆಯಾಗಿದೆ. ರೈತರು ತಮ್ಮ ಜಮೀನಿನಲ್ಲಿ ಟ್ರಾನ್ಸಫಾರ್ಮರ್ ಅಳವಡಿಸುವ ಶುಲ್ಕವನ್ನು ರಾಜ್ಯ ಸರಕಾರ 3,00,000 ರೂಪಾಯಿಗಳಷ್ಟು ಹೆಚ್ಚಳ ಮಾಡಿದೆ. ಬಸ್ ದರವನ್ನು 20% ರಷ್ಟು ಹೆಚ್ಚಿಸಲಾಗಿದೆ. ವಿದ್ಯುತ್ ಕಾರು ಖರೀದಿಯ ಮೇಲೆ 10 % ರಷ್ಟು ಜೀವಿತಾವಧಿ ತೆರಿಗೆಯನ್ನು ಹೆಚ್ಚಿಸಲಾಗಿದೆ. ಹೊಸ ವಾಹನ ಖರೀದಿ ಮೇಲೆ 1000 ರೂಪಾಯಿ ಸೆಸ್ ವಿಧಿಸಲಾಗುತ್ತಿದೆ. ಅಬಕಾರಿ ಸುಂಕವನ್ನು ಎರಡು ಬಾರಿ 10% ರಷ್ಟು ಹೆಚ್ಚಿಸಲಾಗಿದೆ.
ಈ ಹೆಚ್ಚಳದಿಂದಾಗಿ ಸಾಮಾನ್ಯ ಜನರ ಮೇಲೆ ಹೊರೆ ಹೆಚ್ಚಾಗುತ್ತಿದ್ದರೂ ಈಗ ಪ್ರತಿಭಟನೆ ನಡೆಸುತ್ತಿರುವವರು ಅಂದು ಏಕೆ ಸುಮ್ಮನಿದ್ದರು? ಈ ಹೆಚ್ಚಳಗಳ ವಿರುದ್ಧ ಯಾವಾಗ ಬೀದಿಗೆ ಇಳಿಯಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಮೊಸಳೆ ಕಣ್ಣೀರು ಸುರಿಸುವ ಬದಲು ಹಾಗೂ ಅಧಿಕಾರಕ್ಕಾಗಿ ಬಾಡಿಗೆ ಪ್ರತಿಭಟನಾಕಾರರಿಂದ ಗಲಾಟೆ ಮಾಡಿಸುವ ಬದಲು ಆಡಳಿತದಲ್ಲಿರುವವರು ಮೂಲಭೂತ ಸೌಕರ್ಯಗಳನ್ನು ಸುಧಾರಿಸುವತ್ತ ಗಮನಹರಿಸಲಿ. ಜಾಗತಿಕ ವಿದ್ಯಮಾನಗಳ ಕುರಿತು ಜ್ಞಾನ ಬೆಳೆಸಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
Comments are closed.