ಭರ್ಜರಿ ಮಳೆ ಸೃಷ್ಟಿಸಿದ ಅವಾಂತರ
ಕೊಪ್ಪಳ : ಕಳೆದ ಎರಡು ಮೂರು ದಿನಗಳಿಂದ ಕೊಪ್ಪಳ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಒಂದೆಡೆ ರೈತರಿಗೆ ಸಂತಸವನ್ನು ತಂದರೆ, ನಗರದ ಪ್ರದೇಶದಲ್ಲಿ ಇರುವಂತಹ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿಸಿದೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಮನೆಯೊಳಗೆ ನುಗ್ಗಿದೆ. ಕೊಪ್ಪಳದ ಮುಖ್ಯ ರಸ್ತೆಗಳೆಲ್ಲ ಕಾಲುವೆಗಳಂತಾಗಿದೆ ನದಿಗಳಂತಾಗಿ ರಸ್ತೆ ಮಧ್ಯದಲ್ಲಿಯೇ ನೀರು ಹರಿಯುತ್ತಿದೆ ರಸ್ತೆಯ ಪಕ್ಕದಲ್ಲಿಯೇ ಕಟ್ಟಿರುವಂತ ಚರಂಡಿ, ಗಟಾರುಗಳು ಬ್ಲಾಕ್ ಆಗಿರೋದ್ರಿಂದ ನೀರು ಸರಾಗವಾಗಿ ಹರಿಯಲಾಗದೆ ರಸ್ತೆಯ ಮಧ್ಯದಲ್ಲಿ ಹರಿಯುತ್ತಿದೆ . ನದಿಯಂತಾಗಿರುವ ರಸ್ತೆಗಳಲ್ಲಿಯೇ ವಾಹನ ಸವಾರರು ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಲು ಹಾಗೂ ಪಾದಚಾರಿಗಳು ಅಡ್ಡಾಡುವುದಕ್ಕೂ ಕಷ್ಟ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳದ ಹೇಮರೆಡ್ಡಿ ಮಲ್ಲಮ್ಮ ಗುಡಿಯ ಅಕ್ಕಪಕ್ಕದ ಏರಿಯಾ ಹಾಗೂ ಗಣೇಶ್ ತೆಗ್ಗು, ಕೊಪ್ಪಳದ ಕಿನ್ನಾಳ ರಸ್ತೆಯ ಪ್ರಗತಿ ನಗರದಲ್ಲಿರುವ ಸಣ್ಣ ನೀರಾವರಿ ಕಛೇರಿ, HDFC Bank, ಕಿಲ್ಲೇದಾರ ಪೆಟ್ರೋಲ್ ಬಂಕ್, ಆಸರೆ ಆಸ್ಪತ್ರೆ, ಮಂಜುನಾಥ ಕಾಂಪ್ಲೆಕ್ಸ್ ಮತ್ತಿತರ ಸ್ಥಳಗಳು ಸಂಪೂರ್ಣ ಜಲಾವೃತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ.
ಕೊಪ್ಪಳ ನಗರಸಭೆ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತ್ ವಿಭಜಿಸುವ ಹಳ್ಳವನ್ನು ಸುತ್ತಲಿನ ಕಟ್ಟಡಗಳು ಒತ್ತುವರಿ ಮಾಡಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಈ ಭಾಗದಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕೂಡ ಇಲ್ಲ. ಇದು ಪ್ರತಿಸಲ ಮಳೆಯಾಗಲು ಅನುಭವಿಸುವಂತಹ ಸ್ಥಿತಿಯಾಗಿದೆ ಆದರೆ ಇದುವರೆಗೂ ಇದಕ್ಕೆ ಸಂಬಂಧಪಟ್ಟ ಯಾರೇ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ.
ಲಕ್ಷಾಂತರ ನಷ್ಟ :
ಕೊಪ್ಪಳದ ಪ್ಯಾಡ್ ವುಮನ್ ಖ್ಯಾತಿಯ ಭಾರತಿ ಗುಡ್ಲಾನೂರ್ ಇವರ ಫ್ಯಾಕ್ಟರಿ ಒಳಗಡೆ ನೀರು ನುಗ್ಗಿದೆ. ಇದರಿಂದ ಲಕ್ಷಾಂತರ ಮೌಲ್ಯದ ಪ್ಯಾಡ್ ಗಳು ನೀರು ಪಾಲಾಗಿವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸಾಮಾಜಿಕ ಕೊಡುಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಭಾರತಿ ಗುಡ್ಲಾನೂರ್ ಇವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಅವೈಜ್ಞಾನಿಕವಾಗಿ ಗಟಾರುಗಳ ನಿರ್ಮಾಣ ಮಾಡಿರುವುದಕ್ಕೆ ನಾಗರೀಕರ ಹಿಡಿ ಶಾಪ ಹಾಕುತ್ತಿದ್ದಾರೆ.
ರಾಜ ಕಾಲುವೆ ಒತ್ತುವರಿ ಹಾಗೂ ಹಳ್ಳದ ಒತ್ತುವರಿಯನ್ನು ತೆರವು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಸಂಕಷ್ಟವನ್ನು ಅನುಭವಿಸುವ ಸಮಯ ಬರಲಿದೆ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಒತ್ತುವರಿಯನ್ನು ತೆರವು ಮಾಡಿಸಬೇಕಿದೆ ಹಾಗೂ ಅವೈಜ್ಞಾನಿಕವಾಗಿ ಕಟ್ಟಲಾಗಿರುವ ಗಟರುಗಳ ಸಮೀಕ್ಷೆ ಮಾಡಿ ಬ್ಲಾಕ್ ಆಗುವಂತೆ ಗಟಾರಗಳನ್ನು ಕ್ಲೀನ್ ಮಾಡಿಸಬೇಕಿದೆ
ಗವಿಶ್ರೀನಗರದ ಮೂರನೇ ಕ್ರಾಸಿನ ಪ್ರವೇಶ ಮಾರ್ಗದಲ್ಲಿ ಹರಿದ ನೀರೆಲ್ಲ ಇಲ್ಲಿ ಸಂಗ್ರಹಗೊಂಡು ಫ್ಯಾಕ್ಟರಿಯಲ್ಲಿನ ಮೆಷಿನ್ ಮತ್ತು ಕಚ್ಚಾ ವಸ್ತುಗಳು ಮತ್ತು ತಯಾರಾದ ಪ್ಯಾಡುಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಎಲ್ಲವೂ ನೀರಿನಲ್ಲಿ ತೇಲುತ್ತಿವೆ. ಇದಕ್ಕೆ ಪರಿಹಾರ ಒದಗಿಸಿಕೊಡಲೇಬೇಕು, ನನ್ನ ಬದುಕಿಗೆ ಇದು ಬಹುದೊಡ್ಡ ಹೊಡೆತ ಆಗಿದೆ – ಭಾರತಿ ಗುಡ್ಲಾನೂರ್
Comments are closed.