ಹಣ್ಣುಗಳು, ಅಣಬೆ, ಜೇನು ಪ್ರದರ್ಶನ-ಮಾರಾಟ ಮೇಳಕ್ಕೆ ಶಾಸಕರಿಂದ ಚಾಲನೆ

Get real time updates directly on you device, subscribe now.


*
 : ಮಹಾ ಶಿವರಾತ್ರಿ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಕೊಪ್ಪಳ ನಗರದಲ್ಲಿ ಮಾರ್ಚ್ 6 ರಿಂದ ಮಾ.9 ರವರೆಗೆ ಹಮ್ಮಿಕೊಳ್ಳಲಾದ ವಿವಿಧ ಬಗೆಯ ಹಣ್ಣುಗಳು, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಬುಧವಾರ ಚಾಲನೆ ಸಿಕ್ಕಿತು.
ಪ್ರತಿ ವರ್ಷ ಒಂದಿಲ್ಲೊಂದು ಕಾರ್ಯಕ್ರಮದ ಮೂಲಕ ಗಮನ ಸೆಳೆದಿರುವ ಕೊಪ್ಪಳ ತೋಟಗಾರಿಕಾ ಇಲಾಖೆಯು, ಈ ಬಾರಿಯೂ ರೈತರಿಂದ ನೇರ ಗ್ರಾಹಕರಿಗೆ ಎಂಬ ಆಶಯದಡಿ ಆಯೋಜಿಸಲಾದ ಹಣ್ಣುಗಳು ಮತ್ತು ಜೇನು ಹಬ್ಬಕ್ಕೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಶಾಸಕರು ಜೇನು, ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಮತ್ತು ಹಾಗೂ ಉತ್ಪನ್ನಗಳನ್ನು ವಿಕ್ಷೀಸಿದರು. ಬಳಿಕ ಹಣ್ಣುಗಳಿಂದ ಅಲಂಕೃತವಾದ ಫೋಟೋ ಪಾಯಿಂಟ್‌ನಲ್ಲಿ ಫೋಟೋ ತೆಗೆಯಿಸಿಕೊಂಡು, ತೋಟಗಾರಿಕೆ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
*ಸಿಇಓ ಭೇಟಿ:* ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ, ಜೇನು, ಅಣಬೆ ಸೇರಿದಂತೆ ವಿವಿಧ ಹಣ್ಣುಗಳನ್ನು ಮತ್ತು ಹಾಗೂ ಉತ್ಪನ್ನಗಳನ್ನು ವಿಕ್ಷೀಸಿ, ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಈ ಮೇಳದ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ ಸೇರಿದಂತೆ ಜಿಲ್ಲಾ ಕೃಷಿಕ ಸಮಾಜ, ವಿವಿಧ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಗಳ ಅಧ್ಯಕ್ಷರು, ಪ್ರತಿನಿಧಿಗಳು, ಹಲವು ಗಣ್ಯರು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಇಲಾಖೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಮೇಳದಲ್ಲಿ ಎಲ್ಲಾ ಹಣ್ಣುಗಳು ಹಾಗೂ ಅವುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಹಕರ ಆರೋಗ್ಯ ವೃದ್ಧಿ ದೃಷ್ಟಿಯಿಂದ ಮಾರಾಟ ಮಾಡಲಾಗುತ್ತಿದೆ. ಮೇಳದಲ್ಲಿ ರೈತರಿಗೆ ಉಚಿತವಾಗಿ ಸ್ಟಾಲ್‌ಗಳನ್ನು ಹಾಕಲು ಅವಕಾಶ ಕಲ್ಪಿಸಲಾಗಿದ್ದು, 17ಕ್ಕೂ ಹೆಚ್ಚು ಹಣ್ಣು ಬೆಳೆಗಾರರು, 10 ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಕೂಡ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಕೊಪ್ಪಳದ ನೂರಾರು ಸದಸ್ಯ ರೈತರಿಂದ ವಿವಿಧ ಹಣ್ಣುಗಳನ್ನು ಖರೀದಿಸಿ, ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸಿದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
*ಗಮನ ಸೆಳೆದ ಕೃಷಿ ಡ್ರೋನ್:* ಕೃಷಿ ಬೆಳೆಗಳಲ್ಲಿ ರಸಾಯನಿಕ ಔಷಧಿಗಳ ಸಿಂಪಡಿಸಲು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ & ಎರೋ ಸ್ಪೇಸ್ ಕಂಪನಿ, ಬೆಂಗಳೂರು ಇವರ ವತಿಯಿಂದ ಸಿದ್ಧಪಡಿಸಲಾದ ಕೃಷಿ ಡ್ರೋನ್ `ಜೇನು ಮತ್ತು ಹಣ್ಣು’ ಮೇಳದಲ್ಲಿ ಗಮನ ಸೆಳೆಯಿತು. ಭಾರತ ಸರ್ಕಾರದ ಮಾನ್ಯತೆ ಪಡೆದ ಹಾಗೂ ಉನ್ನತ ಕೃಷಿ ಸಂಶೋಧನಾ ಕೇಂದ್ರ ಸಂಸ್ಥೆಯಿಂದ ಅಧ್ಯಯನ ಮಾಡಲಾದ ಈ ಕೃಷಿ ಡ್ರೋನ್ ಕೃಷಿಕರಿಗೆ ಶೇ.50ರಷ್ಟು ಹಣ ಉಳಿತಾಯ ಮಾಡಬಹುದು. ರಸಾಯನಿಕ ಔಷಧಿ ಸಿಂಪಡಿಸಲು ಕೆಲಸಗಾರರ ಅವಲಂಭತೆಯನ್ನು ಕಡಿಮೆ ಮಾಡುವುದಲ್ಲದೇ 5 ನಿಮಿಷದಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಿಸಬಹುದು. ಸಮ ಸಿಂಪಡಣೆಯಿಂದ ಶೇ.20ರಷ್ಟು ಬೆಳೆ ಇಳುವರಿಯನ್ನು ಹೆಚ್ಚಿಸುತ್ತದೆ. ರಸಾಯನಿಕಗಳೊಂದಿಗೆ ನೇರ ಸಂಪರ್ಕದ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ನೀರಿನ ಬಳಕೆಯನ್ನು ಶೇ.90ರಷ್ಟು ಕಡಿಮೆ ಮಾಡುತ್ತದೆ.
ಶಾಸಕರು, ಅಧಿಕಾರಿಗಳಿಗೆ ಮತ್ತು ರೈತರಿಗೆ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಅವಿನಾಶ ಕುಲಕರ್ಣಿ ಅವರು ಕೃಷಿ ಡ್ರೋನ್ ಬಗ್ಗೆ ಮಾಹಿತಿ ನೀಡಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: