ಕುಷ್ಟಗಿ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕನೊಬ್ಬ ನಾಪತ್ತೆಯಾದ ಘಟನೆ ತಾಲೂಕಿನ ವಣಗೇರಿ ಗ್ರಾಮ ಸೀಮಾದಲ್ಲಿ ಬರುವ ಬಿಜಕಲ್ ಕೆರೆಯಲ್ಲಿ ಭಾನುವಾರ ಮದ್ಯಾಹ್ನ ನಡೆದಿದೆ.

ಬೋದೂರು ಗ್ರಾಮದ ಹನುಮಂತ ತಂದೆ ಬಸವರಾಜ ಅಪ್ಪಾಜಿಗೌಡ (17) ನೀರುಪಾಲಾದ ಯುವಕ ಎಂದು ಹೇಳಲಾಗುತ್ತದೆ. ಗ್ರಾಮದ ತನ್ನ ಸ್ನೇಹಿತರು ಸೇರಿ ಒಟ್ಟು ಆರು ಜನ ಯುವಕರೊಂದಿಗೆ ವಣಗೇರಿ ಸೀಮಾದಲ್ಲಿ ಬರುವ ಬಿಜಕಲ್ ಕೆರೆಗೆ ಈಜಾಡಲು ನೀರಿಗೆ ಇಳಿದಿದ್ದಾರೆ. ಈಜುವ ವೇಳೆ ಈ ಯುವಕ ನಾಪತ್ತೆಯಾಗಿದ್ದಾನೆ ಎಂದು ತಿಳಿದಿದೆ.
ತಮ್ಮ ಗೆಳೆಯನನ್ನು ಎಷ್ಟು ಹುಡುಕಿದರೂ ಸಿಗದಿದ್ದಾಗ ಇನ್ನುಳಿದ ಯುವಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಷಯ ತಿಳಿದ ಕುಷ್ಟಗಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ನಿಡಶೇಸಿ ಕೆರೆಯಲ್ಲಿ ಮೀನುಗಾರರು ಬಳಸುವ ತೆಪ್ಪವನ್ನು ಬಳಸಿಕೊಂಡಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ತುಂಬಿದ ಕೆರೆಯಲ್ಲಿ ನಾಪತ್ತೆಯಾದ ಯುವಕನ ಹುಡುಕಾಟ ಆರಂಭಿಸಿದ್ದಾರೆ. ಸಂಜೆ ಏಳು ಗಂಟೆ ಕಳೆದರೂ ನೀರಲ್ಲಿ ನಾಪತ್ತೆಯಾದ ಯುವಕ ಸಿಕ್ಕಿಲ್ಲ. ಕಾರ್ಯಾಚರಣೆ ಮುಂದುವರೆದಿದೆ.
ಮರಳು ದಂಧೆಕೋರರು ಕೆರೆಯೊಡಲು ಬಗೆದು ಎಗ್ಗಿಲ್ಲದೆ ಟಿಪ್ಪರ್ ಗಟ್ಟಲೆ ಮರಳು ಸಾಗಿಸಿದ್ದರಿಂದ ಕೆರೆ ತುಂಬಾ ಆಳವಾಗಿದೆ. ಸದ್ಯ ಕೆರೆ ತುಂಬಿರುವ ಪರಿಣಾಮ ಈಜಲು ಹೋದ ಯುವಕ ಕೆರೆಯಲ್ಲಿ ಮುಳುಗಿದ ಪರಿಣಾಣ ಕೆಸರು ಹೂಳಿನಲ್ಲಿ ಸಿಲುಕಿಕೊಂಡಿರಬಹುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಯುವಕ ಇನ್ನೂ ಪತ್ತೆಯಾಗಿಲ್ಲ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಘಟನೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಬೆಚ್ಚಿಬಿಳಿಸಿದೆ.