ಓದಿದ ಶಾಲೆಗೆ ಸರ್ಕಾರದ ನೆರವು ಒದಗಿಸಿ-ನೂತನ ಸಭಾಂಗಣ ಉದ್ಘಾಟಿಸಿದ ಕೆವಿಪಿ

ಕೋಲಾರ ಫೆ 21:
ಓದಿದ ಶಾಲೆಗೆ ಧನ್ಯತೆ ಅರ್ಪಿಸುವುದು ಎಂದರೆ, ಅಕ್ಷರ
ಸಂಸ್ಕಾರಕ್ಕೆ ನಮಿಸುವುದೇ ಆಗಿದೆ. ಈ ಕಾರಣಕ್ಕೇ ನಾನು ಓದಿದ ಶಾಲೆಗೆ ನಾನು ನೆರವು ಒದಗಿಸಿದ್ದು ನನಗೆ ಸಮಾಧಾನದ ಸಂಗತಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ತಮ್ಮ ಶಾಲಾ ದಿನಗಳನ್ನು ಸ್ಮರಿಸಿ ಗುರುಗಳಿಗೆ ವಂದಿಸಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಇಂದಿನ ಯಶಸ್ಸು, ಶಿಸ್ತು ಮತ್ತು ನಡವಳಿಕೆಯ ಹಿಂದೆ ಶಾಲೆಯ ಮತ್ತು ಗುರುಗಳ ಶ್ರಮ ಮತ್ತು ಕಾಳಜಿ ಇದೆ. ಹೀಗಾಗಿ ಶಾಲೆಗೆ ಧನ್ಯತೆ ಸಲ್ಲಿಸುವುದೆಂದರೆ, ನಾವು ಪಡೆದ ಸಂಸ್ಕಾರವನ್ನು ಗೌರವಿಸುವುದು ಎಂದು ನಾನು ಭಾವಿಸುತ್ತೇನೆ ಎಂದರು.
ನನಗೆ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆ ಒದಗಿ ಬಂದ ತಕ್ಷಣ ನಾನು ಮಾಡಿದ ಮೊದಲ ಕೆಲದ ಎಂದರೆ “ನನಗೆ ಅಕ್ಷರ ದೀಕ್ಷೆ ನೀಡಿದ ಶಾಲೆಗೆ ನನ್ನ ಧನ್ಯತೆ ಅರ್ಪಿಸಿದೆ.
ನನ್ನ ಕಚೇರಿ ಸಿಬ್ಬಂದಿ ಸಮೇತ ಶಾಲೆಗೆ ಆಗಮಿಸಿ ನನಗೆ ಅಕ್ಷರ ದಾಸೋಹ ನೀಡಿದವರಿಗೆಲ್ಲಾ ಗುರುವಂದನೆ ಅರ್ಪಿಸಿ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಇದಕ್ಕೆ ನೆರವಾದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ್ ಜಾಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ನಾವು ಓದಿದ ಶಾಲೆಗೆ ಧನ್ಯತೆ ಅಥವಾ ಕೃತಜ್ಞತೆ ಅರ್ಪಿಸುವುದು ಕೇವಲ ಒಂದು ಸಂಪ್ರದಾಯ ಅಲ್ಲ.
ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಅಕ್ಷರ “ದೇಗುಲ”ಕ್ಕೆ ನಾವು ಸಲ್ಲಿಸುವ ಗೌರವ. ಶಾಲೆಯು ಕೇವಲ ಅಕ್ಷರ ಕಲಿಸುವ ಕೇಂದ್ರವಲ್ಲ, ಅದು ನಮ್ಮ ಬದುಕಿನ ಬುನಾದಿ ಎಂದರು.
ನಾವು
ಎಷ್ಟೇ ಎತ್ತರಕ್ಕೆ ಬೆಳೆದರೂ ನಾನು ನನ್ನ ಬೇರುಗಳನ್ನು ಮಾತ್ರ ಮರೆತಿಲ್ಲ ಎಂದು ಪದೇ ಪದೇ ಹೇಳುತ್ತಿರುತ್ತೇನೆ.
ಓದಿದ ಶಾಲೆಗೆ ಮರಳಿ ಭೇಟಿ ನೀಡುವುದು ಅಥವಾ ಧನ್ಯತೆ ಅರ್ಪಿಸುವುದು ನಮ್ಮ ಹಳೆಯ ನೆನಪುಗಳನ್ನು ಜೀವಂತವಾಗಿರಿಸುತ್ತದೆ ಮತ್ತು ನಾವು ಎಲ್ಲಿಂದ ಬಂದೆವು ಎಂಬುದನ್ನು ನೆನಪಿಸುತ್ತದೆ ಎಂದರು.
ನನ್ನ ಜೊತೆಗೆ ಓದಿದವರು ಎಲ್ಲೆಲ್ಲೋ ಉತ್ತಮ ಸ್ಥಾನದಲ್ಲಿ ಇರಬಹುದು. ಈಗ ಇಲ್ಲಿ ಓದುತ್ತಿರವ ಮಕ್ಕಳೂ ನಾಳೆ ಉತ್ತಮ ಸ್ಥಾನಗಳಿಗೆ ಹೋಗಬಹುದು. ಸಾಧ್ಯವಿರುವ ಎಲ್ಲರೂ ತಮಗೆ ಅಕ್ಷರ ದೀಕ್ಷೆ ನೀಡಿದ ಶಾಲೆಯ ಬಗೆಗಿನ ಮಮತೆಯನ್ನು ಕಾಪಾಡಿಕೊಂಡರೆ ಉತ್ತಮ ಶೈಕ್ಷಣಿಕ ಮತ್ತು ಕಲಿಕೆಯ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಕರೆ ನೀಡಿದರು.
ಶಾಲೆಯ ಅಭಿವೃದ್ಧಿಗೆ ನೆರವಾಗುವುದು ಪುಸ್ತಕ ನೀಡುವುದು, ಕಟ್ಟಡ ದುರಸ್ತಿ, ಅಥವಾ ಬಡ ಮಕ್ಕಳಿಗೆ ಸಹಾಯ ಮಾಡುವುದು ಕೂಡ ನಮ್ಮ ಸಾಮಾಜಿಕ ಬದ್ಧತೆಯನ್ನಾಗಿ ನಾವು ಪಾಲಿಸಬೇಕು.
ನನ್ನ ಹಿಂದಿನವರು ಕಟ್ಟಿ ಬೆಳೆಸಿದ ಈ ಅಕ್ಷರ ಮರದ ನೆರಳಲ್ಲಿ ನಾನು ಅಕ್ಷರ ಕಲಿತೆ ಎಂದು ಸ್ಮರಿಸಿದರು.
ಇಲ್ಲಿ ನಾನು ಕಲಿತದ್ದು ಒಂದು ಸುಂದರ ಪಯಣ.
ಬಾಲ್ಯದ ಆ ಬಣ್ಣದ ದಿನಗಳನ್ನು ನೆನೆದರೆ ಮನಸ್ಸು ಹಗುರಾಗುತ್ತದೆ. ಕಾಲಚಕ್ರ ಉರುಳಿದಂತೆ ನಾವು ಬೆಳೆದಿರಬಹುದು, ಆದರೆ ನಮ್ಮ ವ್ಯಕ್ತಿತ್ವದ ಭದ್ರ ಬುನಾದಿ ಹಾಕಿದ್ದು ಈ ಶಾಲೆ.
ಆದ್ದರಿಂದ ಈ ಕಲಿಕೆಯ ದಿನಗಳಲ್ಲೇ ಶಿಸ್ತು ಮತ್ತು ಶ್ರದ್ಧೆ ರೂಢಿಸಿಕೊಳ್ಳಿ ಎಂದು ಇಲ್ಲಿರುವ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶಾಸಕರಾದ ಕೊತ್ತೂರು ಮಂಜುನಾಥ್, ವಸತಿ ಸಚಿವರ ಮಾಧ್ಯಮ ಸಲಹೆಗಾರರಾದ ಲಕ್ಚ್ಮೀನಾರಾಯಣ್, ವಿಧಾನ ಪರಿಷತ್ ಸದಸ್ಯರು ಮತ್ತು ಕಾಲೇಜಿನ ಪ್ರಾಂಶುಪಾಲರು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
Comments are closed.