ಸಿಎಂ ಬದಲಾದರೆ ಹೋರಾಟ: ಅಹಿಂದ ಮುಖಂಡರ ಎಚ್ಚರಿಕೆ
ಮುಖ್ಯಮಂತ್ರಿ ಸಿದ್ಧರಾಮಯ್ಯಪರ ಅಹಿಂದ ಮುಖಂಡರ ಬ್ಯಾಟಿಂಗ್

ಮುಖ್ಯಮಂತ್ರಿ ಬದಲಾವಣೆ ಮಾಡದಂತೆ ಕಾಂಗ್ರೆಸ್ ಹೈಕಮಾಂಡ್ಗೆ ಅಗ್ರಹ
ಕೊಪ್ಪಳ.
ಕಳೆದ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ರಾಜ್ಯದ ಅಹಿಂದ ಮತ್ತು ಶೋಷಿತ ವರ್ಗದ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ನಾವೆಲ್ಲರು ಸ್ವಾಗತಿಸಿ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದೇವೆ. ಆದರೆ ಉತ್ತಮ ಆಡಳಿತ ನೀಡುತ್ತಿರುವ ಸಿಎಂ ಸಿದ್ಧರಾಮಯ್ಯ ಅವರನ್ನು ಈಗ ಕೇವಲ ಎರಡುವರೆ ವರ್ಷಕ್ಕೆ ಬದಲಾವಣೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಸಿಎಂ ಸಿದ್ಧರಾಮಯ್ಯ ಅವರನ್ನು ಯಾವುದೇ ಕಾರಣಕ್ಕೆ ಬದಲಾವಣೆ ಮಾಡಬಾರದು. ಒಂದುವೇಳೆ ಬದಲಾವಣೆ ಮಾಡಿದರೆ ರಾಜ್ಯದ ಅಹಿಂದ ವರ್ಗ ಮತ್ತು ಶೋಷಿತ ಸಮುದಾಯ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ನಡೆಸಲು ಮುಂದಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಘಟಕದ ಮುಖಂಡರಾದ ಟಿ.ರತ್ನಾಕರ್, ಯಮನಪ್ಪ ವಿಠಲಾಪುರ, ಸಿದ್ಧಪ್ಪ ನಿರಲೂಟಿ, ನಾಗಪ್ಪ ಉಪ್ಪಾರ್, ನಾಗಪ್ಪ ಹುಗ್ಗಿ ಮತ್ತಿತರ ಎಚ್ಚರಿಕೆ ನೀಡಿದರು.
ಶನಿವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಅವರು ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್ ಹೈಕಮಾಂಡ್ಗೆ ಎಚ್ಚರಿಕೆ ನೀಡಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಎರಡುವರೆ ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡಿ ಸರಕಾರದ ಯೋಜನೆಗಳನ್ನು ಎಲ್ಲಾ ಸಮುದಾಯಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎಂ ಸಿದ್ಧರಾಮಯ್ಯ ಆಡಳಿತದಿಂದಾಗಿ ಇಂದು ರಾಜ್ಯದ ಅಹಿಂದ ಮತ್ತು ಶೋಷಿತ ಸಮುದಾಯ ಉತ್ತಮ ಜೀವನ ನಡೆಸುತ್ತಿದೆ. ಪ್ರತಿಯೊಂದು ಕುಟುಂಬಕ್ಕೆ ಸಿದ್ಧರಾಮಯ್ಯ ಸರಕಾರದ ಯೋಜನೆಗಳು ಆಸರೆಯಾಗಿವೆ. ಇಂತಹ ಸಂದರ್ಭದಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಸಿದರೆ ರಾಜ್ಯದ ಅಹಿಂದ ಮತ್ತು ಶೋಷಿತ ಸಮುದಾಯಕ್ಕೆ ಭಾರಿ ಅನ್ಯಾಯ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸಿದ್ಧರಾಮಯ್ಯ ಅವರನ್ನು ಅಧಿಕಾರದಿಂದ ತೆಗೆಯದೇ ಅವರೇ ಇನ್ನು ಎರಡುವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಸಿದ್ಧರಾಮಯ್ಯ ಅವರ ಪರವಾಗಿ ಸಮಸ್ಥ ಅಹಿಂದ ಮತ್ತು ಶೊಷಿತ ಸಮುದಾಯ ಕಾಂಗ್ರೆಸ್ ಪಕ್ಷದೊಂದಿಗೆ ಇದೆ. ಒಂದುವೇಳೆ ಸಿಎಂ ಬದಲಾದರೆ ನಾವೆಲ್ಲರು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದರು. Protests if CM changes: Ahinda leaders warn
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಹನುಮಂತಪ್ಪ ಹಾಲವರ್ತಿ, ಸುಕರಾಜ್ ತಾಳಕೇರಿ, ಶಿವು ಯಲಬುರ್ಗಾ ಮತ್ತಿತರು ಇದ್ದರು.