ಬಲ್ಡೋಟಾ ಕಾರ್ಖಾನೆ : ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗಕ್ಕೆ ಧರಣಿ 

0

Get real time updates directly on you device, subscribe now.

ಬಲ್ಡೋಟಾ ಕಾರ್ಖಾನೆ ಪ್ರಾರಂಭಿಸಲು ರೈತರ ಅಗ್ರಹ
ಒಂದೇ ಕಾರ್ಖಾನೆ ವಿರುದ್ಧ ಹೋರಾಟ ಸರಿಯಲ್ಲ
ಕೊಪ್ಪಳ.
ತಾಲೂಕಿನ ಹಾಲವರ್ತಿ ಹತ್ತಿರ ಸ್ಥಾಪನೆಯಾಗಿರುವ ಬಲ್ಡೋಟಾ ಸ್ಟೀಲ್ ಆಂಡ್ ಪವರ್ ಲಿಮಿಟೆಡ್(ಬಿಎಸ್‌ಪಿಎಲ್) ಕಾರ್ಖಾನೆಯನ್ನು ತಕ್ಷಣ ಪ್ರಾರಂಭಿಸಿ ನಮ್ಮ  ಮಕ್ಕಳ ಉದ್ಯೋಗಕ್ಕೆ ಅವಕಾಶ ನೀಡಬೇಕು ಎಂದು ಕಾರ್ಖಾನೆಗೆ ಭೂಮಿ ನೀಡಿದ ರೈತ ಮುಖಂಡರು ಸರಕಾರಕ್ಕೆ ಅಗ್ರಹಿಸಿದರು.  ಮತ್ತು ಕೆಲವು ಪ್ರಗತಿಪರರ ಹೋರಾಟರಾಗರರು ಇನ್ನು ಪ್ರಾರಂಭವಾಗದ ಬಲ್ಡೋಟಾ ಕಾರ್ಖಾನೆಯಿಂದ ಧೂಳು ಬರುತ್ತಿದೆ.  ಹೀಗಾಗಿ ಅದನ್ನು ಸ್ಥಗಿತಗೊಳಿಸಿ ಎಂದು ಹೋರಾಟ ನಡೆಸುತ್ತಾ ಈ ಭಾಗದಲ್ಲಿ ಈಗಾಗಲೇ ಬೃಹದಾಕಾರವಾಗಿ ತಲೆ ಎತ್ತಿರುವ ಕಾರ್ಖಾನೆಗಳ ಬಗ್ಗೆ ಚಕಾರ ಎತ್ತದೇ ಮಲತಾಯಿ ಧೋರಣೆ ನಡೆಸುತ್ತಿದ್ದಾರೆ.  ಇದರಿಂದ ನಮ್ಮ ರೈತ ಕುಟುಂಬಗಳ ಮಕ್ಕಳ ಬದುಕಿಗೆ ಅಡ್ಡಿಯಾಗುತ್ತಿದೆ.  ನಮ್ಮ ಮಕ್ಕಳ ಉದ್ಯೋಗಕ್ಕಾಗಿ ಬಲ್ಡೋಟಾ ಕಾರ್ಖಾನೆ ತಕ್ಷಣ ಪ್ರಾರಂಭಿಸಲು ಅವಕಾಶ ಮಾಡಿಕೊಡಬೇಕು.  ಇಲ್ಲದಿದ್ದರೆ ನಾವು ಕಾರ್ಖಾನೆ ಪ್ರಾರಂಭಿಸುವಂತೆ ಅಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಭೂಮಿ ಕಳೆದುಕೊಂಡಿರುವ ರೈತರ ಪರವಾಗಿ ಹಾಲವರ್ತಿ ಗ್ರಾಮದ ಹನುಮಂತಪ್ಪ ಕೌದಿ, ನಾಗರಾಜ ಗುರಿಕಾರ, ಹನುಮನಗೌಡ ರೆಡ್ಡೇರ್, ಕಾಮಣ್ಣ ಕಂಬ್ಳಿ, ಅಮರೇಶ ಕಂಬ್ಳಿ ಬಸಾಪುರ ಮತ್ತಿತರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.  ಬಿಎಸ್‌ಪಿಎಲ್ ಕಾರ್ಖಾನೆಗೆ ೨೦೦೬-೦೭ನೇ ಸಾಲಿನಲ್ಲಿ ಹಾಲವರ್ತಿ, ಬಸಾಪುರ ಮತ್ತಿತರ ಗ್ರಾಮಗಳ ಸುಮಾರು ೩೫೯ಕ್ಕೂ ಹೆಚ್ಚು ರೈತರು ಭೂಮಿಯನ್ನು ನೀಡಿದ್ದೇವೆ.  ಆ ಸಮಯದಲ್ಲಿ ಸರಕಾರ ಕೆಐಎಡಿಬಿ ನಮ್ಮ ಭೂಮಿಯನ್ನು ಸ್ವಾಧಿನ ಪಡೆಸಿಕೊಂಡು ಬಿಎಸ್‌ಪಿಎಲ್(ಬಲ್ಡೋಟಾ) ಕಾರ್ಖಾನೆಗೆ ಹಸ್ತಾಂತರಿಸಿದೆ.  ಈ ಸಮಯದಲ್ಲಿ ನಮಗೆ ಭೂಸ್ವಾಧಿನಕ್ಕೆ ಸೂಕ್ತ ಪರಿಹಾರ ನೀಡಿದ್ದು, ಭೂಮಿ ಕೊಟ್ಟ ರೈತ ಕುಟುಂಬದ ಮಕ್ಕಳಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ಭರವಸೆ ಕೆಐಡಿಬಿ ಅಧಿಕಾರಿಗಳು ಮತ್ತು ಕಂಪನಿ ಮಾಲೀಕರು ಭರವಸೆ ನೀಡಿದ್ದಾರೆ.   ಆ ಸಂದರ್ಭದಲ್ಲಿ ನಾವು ಭೂಮಿ ನೀಡುವುದಿಲ್ಲ ಎಂದು ಹೋರಾಟ ನಡೆಸಿದರೂ ಸರಕಾರ ಕೆಐಎಡಿಬಿ ಮೂಲಕ ಒತ್ತಾಯಪೂರ್ವಕವಾಗಿ ನಮ್ಮ ಭೂಮಿಯನ್ನು ಸ್ವಾಧಿನಪಡಿಸಿಕೊಂಡಿದೆ.  ಈ ಕುರಿತು ಕೋರ್ಟ್‌ನಲ್ಲಿ ಹತ್ತು ವರ್ಷ ವ್ಯಾಜ್ಯ ನಡೆದು ಕೊನೆಗೂ ಸುಪ್ರೀಂಕೋರ್ಟ್ ಕಾರ್ಖಾನೆಪರ ತೀರ್ಪು ನೀಡಿದ ನಂತರ ನಾವುಗಳು ಭೂಮಿ ನೀಡಿ ಮಕ್ಕಳಿಗೆ ಉದ್ಯೋಗ ಕೊಡುವಂತೆ ಕೊರಿದ್ದ ಮನವಿಗೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ.  ಆದರೆ ಈಗ ಕಾರ್ಖಾನೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಾರಂಭವಾಗುವ ಹಂತದಲ್ಲಿ ಕೊಪ್ಪಳದ ಕೆಲವು ಪ್ರಗತಿಪರ ಹೋರಾಟಗಾರರು, ರಾಜಕಾರಣಿಗಳು ಬಲ್ಡೋಟಾ ಕಂಪನಿಯನ್ನು ಪ್ರಾರಂಭಿಸಿದಂತೆ ಹೋರಾಟ ನಡೆಸಿದ್ದರಿಂದ ಮುಖ್ಯಮಂತ್ರಿಗಳ ಮೌಖಿಕ ಸೂಚನೆಯಂತೆ ಕಂಪನಿ ಪ್ರಾರಂಭವಾಗಿಲ್ಲ.  ಇದರಿಂದ ನಮ್ಮ ರೈತರ ಮಕ್ಕಳಿಗೆ ಉದ್ಯೋಗ ಇಲ್ಲದೇ ನಿರುದ್ಯೋಗಿಗಳಾಗಿ ಕಾಲ ಕಳೆಯುತ್ತಿದ್ದಾರೆ.  ಕೊಪ್ಪಳ ತಾಲೂಕಿನ ಹೊಸಪೇಟೆ ರಸ್ತೆಯುದ್ದಕ್ಕೂ ಹತ್ತಾರು ಕಾರ್ಖಾನೆಗಳು ಈಗಾಗಲೇ ಪ್ರಾರಂಭವಾಗಿ ಹತ್ತಿಪ್ಪತ್ತು ವರ್ಷಗಳಾಗಿವೆ.  ಈ ಎಲ್ಲಾ ಕಾರ್ಖಾನೆಗಳಿಂದ ಅಪಾರ ಪ್ರಮಾಣದ ಧೂಳು ಬರುತ್ತಿದ್ದು, ಪರಿಸರಕ್ಕೂ ತೊಂದರೆಯಾಗುತ್ತಿದೆ.  ಆದರೆ ಇದನ್ನು ಸರಕಾರ ಅಥವಾ ಹೋರಾಟಗಾರರು ಪರಿಗಣಿಸದೇ ಕೇವಲ ಬಲ್ಡೋಟಾ ಕಾರ್ಖಾನೆಯಿಂದ ಮಾತ್ರ ಧೂಳು ಮತ್ತು ಪರಿಸರ ಹಾನಿಯುಂಟಾಗುತ್ತದೆ ಎಂದು ಹೋರಾಟ ನಡೆಸುತ್ತಿರುವುದು ಅವರ ತಾರತಮ್ಯ ನೀತಿಯಾಗಿದೆ ಎಂದು  ರೈತರು ಬೇಸರ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ರೈತರು ಕಾರ್ಖಾನೆ ಪ್ರಾರಂಭಿಸುವಂತೆ ನಾವು ಈಗಾಗಲೇ ಮುಖ್ಯಮಂತ್ರಿ, ಕೈಗಾರಿಕೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರಿಗೆ ಮನವಿ ಮಾಡಿದ್ದೇವೆ. ಕಾರ್ಖಾನೆ ಪ್ರಾರಂಭಿಸಲು ಅನುಮತಿ ನೀಡುವುದಾಗಿ ಮುಖ್ಯಮಂತ್ರಿಗಳು ನಮಗೆ ಮೌಖಿಕವಾಗಿ ತಿಳಿಸಿದ್ದಾರೆ.  ಆದರೆ ಇದುವರೆಗೂ ಕಾರ್ಖಾನೆ ಪ್ರಾರಂಭವಾಗಿಲ್ಲ.  ಕಾರ್ಖಾನೆ ಪ್ರಾರಂಭವಾದರೆ ಈ ಭಾಗದ ರೈತರ ಮಕ್ಕಳ ಬದುಕಿಗೆ ಆಸರೆಯಾಗುತ್ತದೆ.  ನಮ್ಮ ಮನವಿಯನ್ನು ಮನ್ನಿಸಿ ಸರಕಾರ ಕಾರ್ಖಾನೆ ಪ್ರಾರಂಭಿಸಬೇಕು.  ಇಲ್ಲದಿದ್ದರೆ ಕಾರ್ಖಾನೆಗೆ ಭೂಮಿ ಕಳೆದುಕೊಂಡ ಎಲ್ಲಾ ರೈತರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದರು.

Get real time updates directly on you device, subscribe now.

Leave A Reply

Your email address will not be published.

error: Content is protected !!