ಮುಸ್ಟೂರು ಗ್ರಾಮದಲ್ಲಿ ಜನರ ಸಮಸ್ಯೆ ಆಲಿಸಿದ: ಜಿ.ಪಂ ಸಿಇಓ

0

Get real time updates directly on you device, subscribe now.

ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಗ್ರಾಮಸ್ಥರ ಸಲಹೆ ಮತ್ತು ಸಹಕಾರ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ರತ್ನಂ ಪಾಂಡೇಯ ಅವರು ಹೇಳಿದರು.

ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿಯ ಆವರಣದಲ್ಲಿರುವ ಗ್ರಂಥಾಲಯ ಕಾರ್ಯಾಲಯದಲ್ಲಿ ಮಂಗಳವಾರದಂದು ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮದಲ್ಲಿ ವಿವಿಧ ಯೋಜನೆಯಡಿ ನಿರ್ಮಾಣವಾಗುವ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರ ಅಭಿಪ್ರಾಯ ತುಂಬಾ ಮುಖ್ಯವಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ನಿಮ್ಮ ಹಂತದಲ್ಲಿ ಬಗೆಹರಿಸಿಕೊಂಡು, ಸಾರ್ವಜನಿಕರ ಕೆಲಸಕ್ಕೆ ಕೂಡಲೇ ಸ್ಪಂದಿನೆ ನೀಡಿ ಎಂದರು.

ತುಂಗಭದ್ರಾ ನದಿಯ ಪ್ರವಾಹ ಬಂದು ಸ್ಥಳಾಂತರಗೊಂಡ ಹಳ್ಳಿಗಳ ಬಗ್ಗೆ ಮಾಹಿತಿ ಪಡೆದರು. ಊರಿನಲ್ಲಿ ಹೊಸ ರಸ್ತೆಗಳ ಅಭಿವೃದ್ಧಿ ಪಡಿಸಲು ಸ್ಥಳೀಯರ ವಿರೋಧ ಪಡಿಸುವ ಬಗ್ಗೆ ಚರ್ಚಿಸಿದರು, ಜೆಜೆಎಂ ಕಾಮಗಾರಿ ಅನುಷ್ಠಾನ ಸಂಬಂಧಿಸಿದಂತೆ ನಲ್ಲಿಗಳಲ್ಲಿ ಗ್ರಾಮಸ್ಥರಿಗೆ ದಿನಂಪ್ರತಿ ನೀರು ಸರಬರಾಜು ಆಗುವ ಬಗ್ಗೆ ಗಮನಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಎಇಇ ಅವರಿಗೆ ಸೂಚನೆ ನೀಡಿದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರರ ಸಂಖ್ಯೆ, ಸಕ್ರಿಯ ಜಾಬ್ ಕಾರ್ಡ್ ಗಳ ವಿವರ, ನರೇಗಾದಡಿ ಅನುಷ್ಠಾನವಾದ ಶಾಲಾ ಅಭಿವೃದ್ಧಿ, ವೈಯಕ್ತಿಕ ಕಾಮಗಾರಿಗಳ ವಿವರ ಹಾಗೂ ಅನುಮೋದನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಹಾಗೂ 15 ನೇ ಹಣಕಾಸು ಯೋಜನೆಯಡಿ ಅನುಷ್ಠಾನ ಮಾಡಬೇಕಾದ ಕಾಮಗಾರಿ ಬಗ್ಗೆ ಚರ್ಚಿಸಿದರು.

ಸ್ವಚ್ಛ ಭಾರತ ಮೀಷನ್ ಗ್ರಾಮೀಣ ಯೋಜನೆಯಡಿ ಶೌಚಾಲಯಗಳ ನಿರ್ಮಾಣಕ್ಕೆ ವಿಷಯದ ಬಗ್ಗೆ ಚರ್ಚಿಸಿ, ಕಳೆದ ಸಾಲಿನಲ್ಲಿ ಅನುಷ್ಠಾನವಾದ ಶೌಚಾಲಯಗಳ ಮಾಹಿತಿ, ಈಗಾಗಲೇ ನಿರ್ಮಿಸಿದ ಶೌಚಾಲಯಗಳಿಗೆ ಪಾವತಿಯಾಗಬೇಕಾಗದ ಬಾಕಿ ಹಣದ ಮಾಹಿತಿ ಪರಿಶೀಲಿಸುವಂತೆ ತಿಳಿಸಿದರು. ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ನಿರ್ವಹಣೆ, ಗ್ರಾ.ಪಂ ನಲ್ಲಿ ಸಮಿತಿ ಸಭೆ ಮಾಡಿ, ಕಸ ವಿಲೇವಾರಿ ನಿರ್ವಹಣೆ ಪ್ರಾರಂಭಿಸುವ ಕುರಿತಂತೆ ಸಭಾ ನಡಾವಳಿಗಳಿ ಮಾಡುವಂತೆ ತಿಳಿಸಿದರು.

ಗ್ರಾಮದ ವಿವಿಧೆಡೆ ಪರಿಶೀಲನೆ: ಸಮುದಾಯ ಶೌಚಾಲಯ ಸ್ಥಳ, ರಸ್ತೆಗಳ ಅಭಿವೃದ್ಧಿ ಪರಿಶೀಲನೆ ಮಾಡಿದರು, ನಂತರ ಮುಸ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಜನನ, ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆಗಳ ಮಾಹಿತಿ ಪಡೆದು, ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಜಿ.ಪಂ ಸಿಇಓ ಅವರಿಗೆ ಆಸ್ಪತ್ರೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

ಮುಸ್ಟೂರು ಕ್ಯಾಂಪ್ ಅಂಗನವಾಡಿ ಭೇಟಿ: ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ಹಾಜರಾತಿ ವಹಿಗಳು, ಪೌಷ್ಟಿಕಾಂಶ ಆಹಾರ ವಿತರಣೆ ಸಂಬಂಧಿಸಿದಂತೆ ಚರ್ಚಿಸಿ, ಮಕ್ಕಳ ತೂಕ, ಎತ್ತರದ ಬೆಳವಣಿಗೆ ಕುರಿತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಅಂಗನವಾಡಿ ಕಾರ್ಯಕರ್ತರ ತರಬೇತಿ ಮಾರ್ಗದರ್ಶನ ಕೈಪಿಡಿಯನ್ನು ವಿವಿಧ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿತರಣೆ ಮಾಡಿದರು.

ತಾಮ್ರಪಲ್ಲಿ ಬೋರ್ ವೆಲ್ ದುರಸ್ತಿ, ಅಂಜೂರಿಕ್ಯಾಂಪ್ ಓ.ಎಚ್.ಟಿ ಟ್ಯಾಂಕ್ ನೆಲಸಮ ಮಾಡುವ ಕುರಿತು ಸ್ಥಳ ಪರಿಶೀಲನೆ ಮಾಡಿ, ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಗತಿಯಲ್ಲಿರುವ ಶೌಚಾಲಯ ಪರಿಶೀಲಿಸಿ, ನರೇಗಾದಡಿ ಶಾಲೆಯ ಮೈದಾನ ಅಭಿವೃದ್ಧಿ ಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮೀದೇವಿ, ಪಿಆರ್ ಡಿ ಎಇಇ ವಿಜಯ್ ಕುಮಾರ್, ತಾ.ಪಂ ಸಹಾಯಕ ನಿರ್ದೇಶಕರುಗಳಾದ ವೈ.ವನಜಾ, ಕನಕಪ್ಪ ಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜಯಶ್ರೀ, ವಿರೂಪಾಕ್ಷ , ಗ್ರಾ.ಪಂ ಅಧ್ಯಕ್ಷರಾದ ಸುರೇಶ್ ಬಿ, ವಲಯ ಅರಣ್ಯ ಅಧಿಕಾರಿ ಸುಭಾಷ್ ಚಂದ್ರ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಕವಿತಾ ಎಲ್ . ನಾಯಕ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಸಾಯಿನಾಥ್ ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!