ತುಮಕೂರಿನಲ್ಲಿ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಸಿದ್ಧತೆ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಲು ತಗಡೂರು ಸೂಚನೆ

0

Get real time updates directly on you device, subscribe now.

ತುಮಕೂರು:
39ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಕಲ್ಪತರ ನಾಡು ತುಮಕೂರಿನಲ್ಲಿ ಸಂಭ್ರಮ ಸಡಗರದ ವಾತಾವರಣದಲ್ಲಿ ವೃತ್ತಿಪರ ಮತ್ತು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ತುಮಕೂರು ಪತ್ರಕರ್ತರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಿದ್ಧತೆಗಳ ಕುರಿತು ಸವಿವಿಸ್ತಾರವಾಗಿ ಚರ್ಚೆ ನಡೆಸಲಾಯಿತು.
ಸಮ್ಮೇಳನಕ್ಕೆ ಸಂಬಂದಿಸಿದಂತೆ ಸ್ವಾಗತ ಸಮಿತಿ, ಉಪ ಸಮಿತಿಗಳನ್ನು ಶೀಘ್ರದಲ್ಲಿಯೇ ರಚನೆ ಮಾಡಲು ಅಧ್ಯಕ್ಷ ಚಿ.ನಿ.ಪುರುಷೋತ್ತಮ ಅವರ ಸಮ್ಮುಖದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಮ್ಮೇಳನ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಶಿವಾನಂದ ತಗಡೂರು, ತುಮಕೂರು ಜಿಲ್ಲೆ ದಾಸೋಹ, ಶಿಕ್ಷಣ, ಸಾಹಿತ್ಯ, ಕಲೆಗೆ ಹೆಸರಾದ ಜಿಲ್ಲೆ. ನಾಡಿನ ಅನೇಕ ಹೆಸರಾಂತ ಪತ್ರಕರ್ತರು ಜಿಲ್ಲೆಯವರಾಗಿರುವುದು ಹೆಮ್ಮೆ ಪಡುವ ಸಂಗತಿ. ತುಮಕೂರಿನಲ್ಲಿ ನಡೆದ ಎರಡು ರಾಷ್ಟ್ರೀಯ ಸಮ್ಮೇಳನಗಳು ಅತ್ಯಂತ ಯಶಸ್ವಿಯಾಗಿ ನೆರವೇರಿವೆ. ರಾಜ್ಯ ಸಮ್ಮೇಳನವೂ ಯಶಸ್ವಿಯಾಗಿ ನಡೆಸುವ ಜವಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.
ಡಿಸೆಂಬರ್ ಇಲ್ಲವೇ ಜನವರಿಯೊಳಗೆ ಎರಡು ದಿನ ಸಮ್ಮೇಳನ ನಡೆಸಲು ಅಗತ್ಯ ಸಿದ್ಧತೆಗೆ ಇಂದಿನಿಂದಲೇ ಚಾಲನೆ ಕೊಟ್ಟು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಪ್ರಭಾವಿ ಸಚಿವರಾದ ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ, ಪ್ರಭಾವಿ ಶಾಸಕರುಗಳಿದ್ದಾರೆ. ಸಿದ್ಧಗಂಗಾ ಮಠ, ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರ ಸಹಕಾರ ಪಡೆದು ಸ್ವಾಗತ ಸಮಿತಿ ರಚಿಸಬೇಕು. ಕಾರ್ಯನಿರತ ಕ್ರಿಯಾಶೀಲ ಪತ್ರಕರ್ತರನ್ನೊಳಗೊಂಡ ಆಹಾರ, ಸಾರಿಗೆ, ವಸತಿ. ಅತಿಥಿ ಸತ್ಕಾರ ಹೀಗೆ ಅಗತ್ಯವಾದ ಉಪಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ವಹಿಸಬೇಕು ಎಂದರು.
ಸಮ್ಮೇಳನ ಸ್ಮರಣ ಸಂಚಿಕೆ ಹಾಗೂ ಹಿರಿಯ ಪತ್ರಕರ್ತರು, ಸಾಧಕರನ್ನು ಪರಿಚಯಿಸುವ ಸಂಚಿಕೆಯನ್ನು ಹೊರತರಬೇಕಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇರುವುದು, ಬರುವುದು ಸಹಜ. ಜಿಲ್ಲೆಗೆ ಕೀರ್ತಿ ಬರುವಂತೆ ಸಮ್ಮೇಳನ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಸಂಘದವರು ಸಹ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ವ್ಯವಸ್ಥಿತವಾಗಿ ಆಯೋಜನೆ ಮಾಡಬೇಕೆಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿ ದಾವಣಗೆರೆಯಲ್ಲಿ ನಡೆದ ಸಮ್ಮೇಳನದ ದಾಖಲೆ ಮುರಿಯುವಂತೆ ತುಮಕೂರು ಸಮ್ಮೇಳನ ಜರುಗಬೇಕು ಎಂದು ಕರೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಸಮ್ಮೇಳನ ಕುರಿತಾಗಿ ಮೊದಲ ಚರ್ಚೆಯನ್ನು ಕಾರ್ಯಕಾರಿ ಮಂಡಳಿಯಲ್ಲಿ ಮಾಡಲಾಗಿದೆ. ಮುಂದಿನ ಸಭೆಗೆ ಕಾರ್ಯಕಾರಿ ಮಂಡಳಿ ಜೊತೆಗೆ ಜಿಲ್ಲೆಯ ಸಂಪಾದಕರು, ಪತ್ರಕರ್ತರು ಜಿಲ್ಲಾಡಳಿತವನ್ನು ಭಾಗಿಯಾಗಿಸಿಕೊಂಡು ಆಯೋಜಿಸಲಾಗುವುದು ಎಂದರು.
ಸಮ್ಮೇಳನದ ರೂಪುರೇಷ ತಯಾರಿಸುವ ಜೊತೆಗೆ ವಿವಿಧ ಸಮಿತಿಗಳಿಗೆ ಅರ್ಹ ಕ್ರಿಯಾಶೀಲ ಪತ್ರಕರ್ತರನ್ನು ನಿಯೋಜಿಸಲಾಗುವುದು. ತುಮಕೂರು ಸಂಘ ಮೊದಲಿನಿಂದಲೂ ರಾಷ್ಟ್ರೀಯ ಸಮ್ಮೇಳನವಿರಲಿ, ಕಾರ್ಯಾಗಾರಗಳಿರಲಿ ಯಾವುದೇ ಕಾರ್ಯಕ್ರಮ ಮಾಡಿದರೂ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದೆ. ರಾಜ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಡುತ್ತೇವೆ ಎಂದರು.
ಈಗಾಗಲೇ ಈ ನಿಟ್ಟಿನಲ್ಲಿ ಉಸ್ತುವಾರ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಎನ್.ರಾಜಣ್ಣ, ವಿ.ಸೋಮಣ್ಣ ಅವರ ಜೊತೆಗೆ ಚರ್ಚೆ ಮಾಡಲಾಗಿದೆ. ಜನಪ್ರತಿನಿಧಿಗಳು, ದಾನಿಗಳ ಸಹಕಾರ ಪಡೆದು ಸಮ್ಮೇಳನವನ್ನು ಸಂಘಟಿಸಲಾಗುವುದು ಎಂದರು.
ರಾಷ್ಟ್ರೀಯ ಮಂಡಳಿ ಸದಸ್ಯರಾದ ಟಿ.ಎನ್.ಮಧುಕರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್ ಅವರು ಮಾತನಾಡಿ ರಾಷ್ಟೀಯ ಸಮ್ಮೇಳನಗಳು ಅತ್ಯುತ್ತಮವಾಗಿ ಅಂದಿನ ಹಿರಿಯರು ಸಂಘಟಿಸಿದನ್ನು ಈಗಲೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ರಾಜ್ಯ ಸಮ್ಮೇಳನವನ್ನು ಇದಕ್ಕಿಂತಲೂ ಮಿಗಿಲಾಗಿ ಸಂಘಟಿಸಲಾಗುವುದು ಎಂದರು.
ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗಸ್ವಾಮಿ, ಉಪಾಧ್ಯಕ್ಷರಾದ ಎಲ್.ಚಿಕ್ಕೀರಪ್ಪ, ಶ್ಯಾ.ನ.ಪ್ರಸನ್ನಮೂರ್ತಿ, ನಿರ್ದೇಶಕರುಗಳಾದ ಕುಚ್ಚಂಗಿ ಪ್ರಸನ್ನ, ಎಚ್.ಎಸ್.ಪರಮೇಶ್, ಎಸ್.ಹರೀಶ್ ಆಚಾರ್ಯ, ಟಿ.ಎಸ್.ಕೃಷ್ಣಮೂರ್ತಿ, ಜಯನುಡಿ ಜಯಣ್ಣ, ಸುರೇಶ್‌ವತ್ಸ, ಮಲ್ಲಿಕಾರ್ಜುನಸ್ವಾಮಿ, ಪ್ರಸನ್ನ ದೊಡ್ಡಗುಣಿ ಸಿರಾ ಶಂಕರ್, ಕಾಗ್ಗೆರೆ ಸುರೇಶ್, ರೇಣುಕಾಪ್ರಸಾದ್, ಎಂ.ಬಿ.ನಂದೀಶ್, ಮಂಜುನಾಥ್ ಹಾಲ್ಕುರಿಕೆ, ಅದಲಗೆರೆ ನಾಗೇಂದ್ರ ಇತರರು ಪಾಲ್ಗೊಂಡು ಸಮ್ಮೇಳನಕ್ಕೆ ಪೂರಕ ಸಲಹೆ ಸೂಚನೆಗಳನ್ನು ನೀಡಿದರು.

ಮೂವರಿಗೆ ಜಿಲ್ಲಾ ಸಂಘದಿಂದ ಸನ್ಮಾನ
ಸಭೆಯಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ರಾಷ್ಟ್ರೀಯ ಮಂಡಳಿ ಸದಸ್ಯ ಟಿ.ಎನ್.ಮಧುಕರ್, ರಾಜ್ಯ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಉಗಮ ಶ್ರೀನಿವಾಸ್ ಅವರುಗಳನ್ನು ಸಭೆಯಲ್ಲಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

Get real time updates directly on you device, subscribe now.

Leave A Reply

Your email address will not be published.

error: Content is protected !!