ಅಗ್ನಿವೀರ್ ಡೆಮೋ ರ್ಯಾಲಿಯಲ್ಲಿ 102 ಅಭ್ಯರ್ಥಿಗಳು ಭಾಗಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಅಗ್ನಿವೀರ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬೆಳಗಾವಿ ಎಆರ್ಓ ಅಡಿಯಲ್ಲಿ ಕೊಪ್ಪಳ, ಬೆಳಗಾವಿ, ಬಾಗಲಕೋಟೆ ಹಾಗೂ ಇತರೆ ಜಿಲ್ಲೆಗಳಿಂದ ಬಂದAತಹ ಅಭ್ಯರ್ಥಿಗಳಿಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ ಡೆಮೋ ರ್ಯಾಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಅಗ್ನಿವೀರ ಡೆಮೋ ರ್ಯಾಲಿಯಲ್ಲಿ ಒಟ್ಟು 102 ಅಭ್ಯರ್ಥಿಗಳು ಭಾಗವಹಿಸಿದ್ದರು. ರ್ಯಾಲಿಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳಲ್ಲಿ 1600 ಮೀಟರ್ ಓಟ, 9 ಅಡಿ ಉದ್ದ ಜಿಗಿತ, ಚಿನ್ ಆಪ್ಸ್, ಎತ್ತರ, ಎದೆ ಸುತ್ತಳತೆ ಹಾಗೂ ದೇಹದ ತೂಕ ಪರೀಕ್ಷೆಗಳು ನಡೆಸಲಾಯಿತು. ಮುಂದಿನ ತಯಾರಿಗಾಗಿ ಈ ಪರೀಕ್ಷೆ ನಮಗೆ ಸಹಕಾರಿಯಾಯಿತು ಎಂದು ಅಭ್ಯರ್ಥಿಗಳು ಪ್ರತಿಕ್ರಿಯಿಸಿದರು.
ಜಿಲ್ಲಾಧಿಕಾರಿಗಳಿಂದ ಮಾರ್ಗದರ್ಶನ: ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡಿದರು. ಅಗ್ನಿವೀರ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ ಏರ್ಪಡಿಸಿ, ಮುಂದಿನ ಭಾಗವಾಗಿ ಡೆಮೊ ರ್ಯಾಲಿ ಆಯೋಜಿಸಿ ಮುಂದಿನ ತಯಾರಿಗೆ ಮಾರ್ಗದರ್ಶನ ನೀಡಿದರು.
ಮುಂದಿನ ಹಂತ ಎದುರಿಸಲು ಡೆಮೋ ರ್ಯಾಲಿ: ಜಿಲ್ಲೆಯಲ್ಲಿನ ಸೇನಾ ಆಕಾಂಕ್ಷಿಗಳಿಗಾಗಿ ಲಿಖಿತ, ದೈಹಿಕ ಪರೀಕ್ಷೆ ಕಾರ್ಯಾಗಾರ ತರಬೇತಿ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳು ಲಿಖಿತ ಪರೀಕ್ಷೆ ತೇರ್ಗಡೆಹೊಂದಿ ದೈಹಿಕ ಪರೀಕ್ಷೆಗೆ ಸಿದ್ದತೆ ನಡೆಸಿದ್ದು, ಮುಂದಿನ ಹಂತ ಎದುರಿಸಲು ಡೆಮೊ ರ್ಯಾಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಪ್ರತಿಕ್ರಿಯಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗಡೆ ನಡೆದ ಸಮಾರಂಭದಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ ಸೇರಿದಂತೆ ಇನ್ನೀತರರು ಇದ್ದರು.