ಬೃಹತ್ ಶಿಲಾಯುಗದ ನೆಲೆಯಲ್ಲಿ ಹೆರಿಟೇಜ್ ವಾಕ್

Get real time updates directly on you device, subscribe now.

ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನ ಹಿನ್ನೆಲೆ ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮ

ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಪಂ‌ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರಿಂದ ಹಿರೇಬೆಣಕಲ್ ನಲ್ಲಿ ಪಾರಂಪರಿಕ ನಡಿಗೆ
: ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನದ ಭಾಗವಾಗಿ ಬೃಹತ್ ಶಿಲಾಯುಗದ ನೆಲೆಯಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್‌ನಲ್ಲಿ ಪಾರಂಪರಿಕೆ ನಡಿಗೆ (ಹೆರಿಟೇಜ್ ವಾಕ್) ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮವು ಜುಲೈ 25ರಂದು ನಡೆಯಿತು.
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ಬೆಂಗಳೂರು ಕಚೇರಿ ಹಾಗೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಎ.ಎಸ್.ಐ ಹಂಪಿ ವೃತ್ತ, ಕಿಷ್ಕಿಂದ ಯುತ್ ಟ್ರೆಕ್ಕಿಂಗ್ ಕ್ಲಬ್ & ಲೈವ್ ವಿತ್ ಹ್ಯೂಮ್ಯಾನಿಟಿ ಟ್ರಸ್ಟ್ ಇವರ ಸಹಯೋಗದಲ್ಲಿ ಶಿಲಾಯುಗದ ನೆಲೆಯಲ್ಲಿ ನಡೆದ ಹೆರಿಟೇಜ್ ವಾಕ್ ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಚಾಲನೆ ನೀಡಿದರು.
ಬೃಹತ್ ಶಿಲಾಯುಗದ ಸ್ಮಾರಕಗಳ ವೀಕ್ಷಣೆ: ಹೆರಿಟೇಜ್ ವಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ಬೆಟ್ಟದಲ್ಲಿ ಹೆಜ್ಜೆ ಹಾಕಿ, ಬೃಹತ್ ಶಿಲಾಯುಗದ ನೆಲೆ ಹಿರೇಬೆಣಕಲ್ ಸ್ಮಾರಕಗಳಾದ ಮೋರೇರ ಬೆಟ್ಟ, ಶೀಲಾ ಸಮಾದಿಗಳು, ಬಂಡೆಗಳು ಹಾಗೂ ಸ್ಮಾರಕಗಳ ವೀಕ್ಷಣೆ ಮಾಡಿದರು. ಸಮಾದಿಗಳು, ಸ್ಮಾರಕಗಳ ಬಳಿ ನಿಂತು ಫೋಟೋ ತೆಗೆಯಿಸಿಕೊಂಡರು
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅರ್ಸಲಾನ್, ಹಂಪಿ ಪುರಾತತ್ವ ಇಲಾಖೆಯ ಉಪ ಅಧೀಕ್ಷಕರಾದ ಸಿ.ಬರಣಿಧರನ್, ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ಬೆಂಗಳೂರು ಕಚೇರಿಯ ಪ್ರವಾಸೋದ್ಯಮ ಮಾಹಿತಿ ಅಧಿಕಾರಿಗಳಾದ ಚಂದ್ರಾ ನಾಯಕ್, ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ಖ್ಯಾತ ಸಂಶೋಧಕರಾದ ಡಾ.ಶರಣಬಸಪ್ಪ ಕೋಲಕಾರ,
ಗಂಗಾವತಿ ಚಾರಣ ಬಳಗದ ಸದಸ್ಯರಾದ ಡಾ.ಶಿವಕುಮಾರ್ ಮಾಲಿಪಾಟೀಲ, ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ನಾಗರಾಜ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ವಲಯ ಅರಣ್ಯ ಅಧಿಕಾರಿ ಸುಭಾಷ್ ಹಾಗೂ
ಗಂಗಾವತಿ ಚಾರಣ ಬಳಗದ ಪವನಕುಮಾರ, ಸೌಮ್ಯ ಸೇರಿದಂತೆ ಇತರರು ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರೊಂದಿಗೆ ಹೆಜ್ಜೆ ಹಾಕಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿರುವ ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ. ಇದು ಮೆಗಾಲಿಥಿಕ್ ಅವಧಿಗೆ ಹಿಂದಿನ ವಿಶಾಲವಾದ ಸಮಾಧಿ ಸಂಕೀರ್ಣವಾಗಿದೆ. ಇದು 20 ಹೆಕ್ಟೇರ್‌ಗಳಲ್ಲಿ ಹರಡಿದ್ದು, ಕಲ್ಲಿನ ರಚನೆಗಳ ಮೂರು ವಿಭಿನ್ನ ಸಮೂಹಗಳನ್ನು ಒಳಗೊಂಡಿದೆ.
ಈ ಆಕರ್ಷಕ ಪುರಾತತ್ವ ಶಾಸ್ತ್ರದ ಸ್ಥಳವನ್ನು ಅನ್ವೇಷಿಸಲು ಮತ್ತು ಅದರ ಶ್ರೀಮಂತ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಹೆರಿಟೇಜ್ ವಾಕ್  ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಓ ಅವರು ಮಾತನಾಡಿ, ಭಾರತದ ವೈವಿಧ್ಯಮಯ ಪರಂಪರೆಯ ಅರಿವು ಮತ್ತು ಮೆಚ್ಚುಗೆಯನ್ನು ಉತ್ತೇಜಿಸಲು ಬದ್ಧವಾಗಿರುವ ಪ್ರವಾಸೋದ್ಯಮ ಸಚಿವಾಲಯವು, ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್‌ನ ಮಹತ್ವ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಶಾಸನಕ್ಕೆ ಅದರ ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಈ ಪಾರಂಪರಿಕ ನಡಿಗೆ ಕಾರ್ಯಕ್ರಮದ ಮೂಲಕ ಇಲ್ಲಿನ ವಿಶೇಷತೆಯ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ಮೂಲ ಸೌಕರ್ಯ ಕಲ್ಪಿಸಲು ಒತ್ತು: ಹಿರೇಬೆಣಕಲ್ ಬೆಟ್ಟಕ್ಕೆ ಬರಲು ಸರಿಯಾದ ರಸ್ತೆ ವ್ಯವಸ್ಥೆ, ಸಿಸಿಟಿವಿ ಕ್ಯಾಮರಾ, ರಕ್ಷಣೆಗಾಗಿ ಅಗತ್ಯ ಸಿಬ್ಬಂದಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಹಂಪಿ ಮತ್ತು ಅಂಜನಾದ್ರಿಗೆ ಬರುವ ಪ್ರವಾಸಿಗರು ಹಿರೇಬೆಣಕಲ್ ಬೆಟ್ಟಕ್ಕೆ ಬರಲಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆ ಅಗತ್ಯ ಕ್ರಮ ವಹಿಸಬೇಕು ಎಂದು ಚಾರಣ ಬಳಗದ ಸದಸ್ಯರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಲ್ಲಿ ಮನವಿ ಮಾಡಿದರು. ಚಾರಣ ಬಳಗದ ಸದಸ್ಯರು ಮತ್ತು ಗ್ರಾಮಸ್ಥರ ಮನವಿಯಂತೆ ಅಗತ್ಯ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು.

Get real time updates directly on you device, subscribe now.

Comments are closed.

error: Content is protected !!