ನೂತನ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ನೇಮಕಕ್ಕೆ ಹರ್ಷ : ಕಾರ್ಯಕರ್ತರೇ ಬಿಜೆಪಿ ನಾಯಕರು: ಸಂಗಣ್ಣ

Get real time updates directly on you device, subscribe now.

ಕೊಪ್ಪಳ: ಬಿಜೆಪಿ ಯುವಕರಿಗೆ ಮನ್ನಣೆ ನೀಡುವ ಏಕೈಕ ಪಕ್ಷವಾಗಿದೆ. ಕಾರ್ಯಕರ್ತರೇ ಪಕ್ಷದ ನಾಯಕರು ಎಂಬುದು ಜಿಲ್ಲಾಧ್ಯಕ್ಷರ ನೇಮಕದಲ್ಲಿ ಸಾಬೀತಾಗಿದೆ. ನೂತನ ಜಿಲ್ಲಾಧ್ಯಕ್ಷರಾಗಿ ನವೀನ್ ಗುಳಗಣ್ಣನವರ್ ನೇಮಕವಾಗಿರುವುದು ಸಂತಸ ತಂದಿದೆ ಎಂದು ಸಂಸದ ಸಂಗಣ್ಣ ಕರಡಿ ಹರ್ಷ ವ್ಯಕ್ತಪಡಿಸಿದರು.
ಓಜನಹಳ್ಳಿ ಗ್ರಾಮದಲ್ಲಿ ಸೋಮವಾರ ಮೆಕ್ಕೆಜೋಳ ತೆನೆಯಲ್ಲಿ ನಿರ್ಮಿಸಿದ ಶ್ರೀರಾಮಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷ ಸಂಘಟಿಸಿದ್ದಾರೆ. ಬಳಿಕ ಪದಾಧಿಕಾರಿ ಸ್ಥಾನ ದೊರೆಯಿತು. ಇದೀಗ ಅಧ್ಯಕ್ಷ ಸ್ಥಾನ ದೊರೆತಿದೆ. ಬಿಜೆಪಿ ಕಾರ್ಯಕರ್ತರು ಮುಂದೊಂದು ದಿನ ನಾಯಕರಾಗುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು.
ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಎರಡು ದಶಕದಿಂದ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದರು. ಅವರಿಗೆ ಉನ್ನತ ಸ್ಥಾನ ನೀಡಿ ಪಕ್ಷ ಗೌರವಿಸಿದೆ. ಜಿಲ್ಲೆಯ ಎಲ್ಲ ಹಿರಿಯ ನಾಯಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿಗೆ ಕಾರಣೀಕರ್ತರಾಗಬೇಕು ಎಂದು ಸಲಹೆ ನೀಡಿದರು.
ಚುನಾವಣೆ ವೇಳೆ ಕಾರ್ಯಕರ್ತರನ್ನು ಬಳಸಿಕೊಂಡು ಗೆದ್ದ ಬಳಿಕ ಅವರನ್ನು ಕೈ ಬಿಡುವ ಚಾಳಿಯನ್ನು ಕಾಂಗ್ರೆಸ್ ರೂಢಿಸಿಕೊಂಡಿದೆ. ಕಾರ್ಯಕರ್ತರಿಗೆ ಉನ್ನತ ಹುದ್ದೆ, ನಿಗಮ, ಮಂಡಳಿ ನೀಡದೇ ಶಾಸಕರಿಗೆ ಪ್ರಾಶಸ್ತ್ಯ ನೀಡಲು ಮುಂದಾಗಿದೆ. ಆದರೆ, ಬಿಜೆಪಿ ಆಗಲ್ಲ. ನಮಗೆ ಕಾರ್ಯಕರ್ತರೇ ಜೀವಾಳ. ಇದು ಕಾರ್ಯಕರ್ತರ ಪಕ್ಷ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಉನ್ನತ ಹುದ್ದೆ ನೀಡಿ ಗೌರವಿಸಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ಗವಿಶ್ರೀ ಆಶೀರ್ವಾದ ಪಡೆದ ನೂತನ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್:
ಜಿಲ್ಲಾಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಈ ವೇಳೆ ಗವಿಶ್ರೀ ಜತೆ ಚರ್ಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಮರೇಶ್ ಕರಡಿ ಸೇರಿ ಬಿಜೆಪಿ ಕಾರ್ಯಕರ್ತರು ಜತೆಗಿದ್ದರು. ಬಳಿಕ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಜಿಲ್ಲೆಯ ಹಿರಿಯ ಮುಖಂಡರ ಮನೆಗೆ ಭೇಟಿ ನೀಡಿದರು.

ಪಕ್ಷ ನನ್ನನ್ನು ಗುರುತಿಸಿ ಉನ್ನತ ಸ್ಥಾನ ನೀಡಿದೆ. ಜಿಲ್ಲೆಯ ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನ ಪಡೆದು ಪಕ್ಷ ಸಂಘಟಿಸುವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಶ್ರಮಿಸಲಾಗುವುದು.
– ನವೀನ್ ಗುಳಗಣ್ಣನವರ್, ಬಿಜೆಪಿ ನೂತನ ಜಿಲ್ಲಾಧ್ಯಕ್ಷ.

ನವೀನ್ ಗುಳಗಣ್ಣನವರ್ ಯುವಕರಾಗಿದ್ದು, ಪಕ್ಷ ಸಂಘಟನೆ ಚತುರತೆ ಹೊಂದಿದ್ದಾರೆ. ಅವರ ಸಂಘಟನಾ ಶಕ್ತಿ ಗುರುತಿಸಿ ಪಕ್ಷ ಉನ್ನತ ಹುದ್ದೆ ನೀಡಿದೆ. ಇವರ ನೇತೃತ್ವದಲ್ಲಿ ಸಂಸತ್, ವಿಧಾನಸಭಾ, ಜಿಪಂ, ತಾಪಂ ಸೇರಿ ಎಲ್ಲಾ ಚುನಾವಣೆ ಗಳಲ್ಲೂ ಜಯಗಳಿಸಲಿ.
– ಅಮರೇಶ್ ಕರಡಿ, ಬಿಜೆಪಿ ಮುಖಂಡರು.

Get real time updates directly on you device, subscribe now.

Comments are closed.

error: Content is protected !!
%d bloggers like this: