ಅಂಬೇಡ್ಕರ್ ಬರೀ ದಲಿತರ ಪರ ಎಂಬ ಗ್ರಹಿಕೆ ತಪ್ಪು-ಮೆಹಬೂಬಹುಸೇನ

Get real time updates directly on you device, subscribe now.

 

ಕನಕಗಿರಿ: ಬುದ್ದ, ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಜಾಗತಿಕ ಮಹಾಪುರುಷರಾಗಿದ್ದಾರೆ,ಮಹರ್ಷಿ ವಾಲ್ಮೀಕಿ, ಭಕ್ತ ಕನಕದಾಸ, ಬಸವೇಶ್ವರ, ಅಂಬೇಡ್ಕರ್ ಸೇರಿದಂತೆ ಇತರೆ ಮಹಾನ್ ವ್ಯಕ್ತಿಗಳನ್ನು ಆಯಾ ಜಾತಿಗೆ ಸೀಮತಗೊಳಿಸುವುದು ಸರಿಯಲ್ಲ ಅವರ ವಿಚಾರಧಾರೆಗಳು ಸರ್ವಕಾಲಿಕ ಸತ್ಯವಾಗಿವೆ  ಸಮಾಜದಲ್ಲಿ ಬೇರೂರಿದ್ದ ಜಾತಿ ಪದ್ದತಿ ಇತರೆ ಮೌಢ್ಯಗಳ ವಿರುದ್ದ ಅವಿರತವಾಗಿ ಹೋರಾಟ ನಡೆಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2023-24ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಇಲ್ಲಿನ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾವು ನೋವು ನುಂಗಿ ಸಮಾಜಕ್ಕೆ ಅಮೃತ ಉಣಬಡಿಸಿದ ಕೀರ್ತಿ ಈ ಮಹಾನ್ ಚೇತನರಿಗೆ ಸಲ್ಲುತ್ತದೆ, ವ್ಯಾಪಾರಿಗಳಿಗೆ ಸಮಯ ಅಂದರೆ ಹಣವಾದರೆ ಅಂಬೇಡ್ಕರ್ ಅವರಿಗೆ ಸಮಯ ಎಂಬುದು ಜ್ಞಾನವಾಗಿತ್ತು ಅಧ್ಯಯನಕ್ಕೆ ಬಹಳ ಒತ್ತು ನೀಡಿದ್ದರು ಎಂದು ತಿಳಿಸಿದರು.
ವಿದ್ಯಾರ್ಥಿ ಸಮುದಾಯ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕೆಂದು ತಿಳಿಸಿದರು.
ಕೊಪ್ಪಳ ವಿಶ್ವ ವಿದ್ಯಾಲಯದ ಉಪನ್ಯಾಸಕಿ ಡಾ. ಗೀತಾ ಪಾಟೀಲ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಬರೀ ದಲಿತರ ಪರವಾಗಿದ್ದರು ಎಂಬ ಗ್ರಹಿಕೆ ತಪ್ಪಿನಿಂದ ಕೂಡಿದೆ ಅವರು ಎಲ್ಲಾ ವರ್ಗದ ಹಿತ ಚಿಂತಕರಾಗಿದ್ದರು ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕೆಂದು ಪ್ರತಿಪಾದಿಸಿದರು.
ಸಾಮಾಜಿಕ ನ್ಯಾಯ ಎಂಬುದು ಭೀಕ್ಷೆ ಅಲ್ಲ, ಅದೊಂದು ಹಕ್ಕು ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು, ಶತ ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿದ್ದ ಮಹಿಳೆಯರು ಹಾಗೂ ತುಳಿತಕ್ಕೆ ಒಳಗಾಗಿದ್ದ ಸಮುದಾಯದವರಿಗೆ ನ್ಯಾಯ ಒದಗಿಸಲು ಶ್ರಮಿಸಿದರು ಎಂದು ತಿಳಿಸಿದರು. ಮಹಿಳಾ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕೆ ಒತ್ತು ನೀಡಿದ್ದ ಅವರು ದೇವದಾಸಿ ಪದ್ದತಿ ಸೇರಿದಂತೆ ಇತರೆ ಅನಿಷ್ಠ ಪದ್ದತಿಗಳ ನಿರ್ಮೂಲನೆಗೆ ಒತ್ತು ನೀಡಿದ್ದರು ಎಂದು ತಿಳಿಸಿದರು.
ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ತ್ರಿವಳಿ ಸೂತ್ರಗಳ ಮೂಲಕ ಸರ್ವರಿಗೂ ನ್ಯಾಯ ಒದಗಿಸಲು ಶ್ರಮಿಸಿದರು ಶಿಕ್ಷಣ, ಉದ್ಯೋಗ, ಕೈಗಾರಿಕೆ ಕ್ಷೇತ್ರದಲ್ಲಿ ಮುಂದೆ ಬರಬೇಕಾದರೆ ಮೊದಲು ಶಿಕ್ಷಣವಂತರಾಗಬೇಕೆಂದು ಅವರು ತಿಳಿಸಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಜರಂಗಬಲಿ ಗೌಡಪ್ಪನವರ್ ಮಾತನಾಡಿ ಜಾತಿ ಹಾಗೂ ವರ್ಗ ರಹಿತ ಸಮಾಜ ನಿರ್ಮಾಣದಲ್ಲಿ ಕ್ರಾಂತಿಕಾರಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ, ಸಮಾಜದಲ್ಲಿ ಸಮಾನತೆ ನೆಲೆಯೂರಲು ಸಂವಿಧಾನದಲ್ಲಿ ಎಲ್ಲಾರಿಗೀ ಸಮಾನ ಹಕ್ಕುಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಮಾತನಾಡಿ ಡಾ. ಅಂಬೇಡ್ಕರ್ ಅವರ ಬದುಕು, ಬರಹಗಳ ಅಧ್ಯಯನ ಹಾಗೂ ಅರಿವು ಮೂಡಿಸಲು ಪ್ರತಿ ತಾಲ್ಲೂಕಿನಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ ನಡೆಸಲಾಗುತ್ತಿದೆ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕೆಂದು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಎಚ್. ಸಿ. ಆಶಿಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಂಕಟೇಶ ಮಾತನಾಡಿದರು. ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜ್, ವೀರೇಶ ಕೆಂಗಲ್ ಇದ್ದರು. ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನಾಗರಾಜ ಗದ್ದಿ (ಪ್ರಥಮ), ಅಂಬಿಕಾ( ದ್ವಿತೀಯ) ಹಾಗೂ ಶಶಿಕಲಾ (ತೃತೀಯ), ವಲೀಮಾ ಹಾಗೂ ವೀಣಾ ಅವರಿಗೆ ಇದೇ ಸಮಯದಲ್ಲಿ ಬಹುಮಾನ ವಿತರಿಸಲಾಯಿತು.

ಕನಕಗಿರಿಯ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಓದು ಕಾರ್ಯಕ್ರಮಕ್ಕೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು

Get real time updates directly on you device, subscribe now.

Comments are closed.

error: Content is protected !!
%d bloggers like this: