ಪತ್ರಿಕಾ ದಿನಾಚರಣೆ ಜು. 1ರಂದು; ಆನಂದ ಬೈದನಮನೆಗೆ ವಾರ್ಷಿಕ ಪ್ರಶಸ್ತಿ

ಕೊಪ್ಪಳ: ಕೊಪ್ಪಳ ಮೀಡಿಯಾ ಕ್ಲಬ್ ಇಲ್ಲಿನ ಭಾಗ್ಯನಗರದ ರಸ್ತೆಯಲ್ಲಿರುವ ಪಾನಂಘಂಟಿ ಕಲ್ಯಾಣ ಮಂಟಪದಲ್ಲಿ ಜುಲೈ 1ರಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಸಲದ ವಾರ್ಷಿಕ ಪ್ರಶಸ್ತಿಗೆ ಸುವರ್ಣ ಸುದ್ದಿ ವಾಹಿನಿಯ ರಾಜಕೀಯ ಬ್ಯೂರೊ ಮುಖ್ಯಸ್ಥ ಆನಂದ ಬೈದನಮನೆ ಅವರನ್ನು ಆಯ್ಕೆ ಮಾಡಿದೆ.
ಅನ್ವಿತಾ ಮಹಿಳೆಯರ ವೃದ್ಧರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರೇವಣಿಕಿ ಪ್ರಾಯೋಜಿತದ ಈ ಪ್ರಶಸ್ತಿಯು ₹5 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಹೊನಕೆರೆ ನಂಜುಂಡೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೊಪ್ಪಳ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೀಡಿಯಾ ಕ್ಲಬ್ ಅಧ್ಯಕ್ಷ ದೇವು ನಾಗನೂರು ಅಧ್ಯಕ್ಷತೆ ವಹಿಸುವರು.
ಕ್ಲಬ್ನ ಹಿರಿಯ ಪತ್ರಕರ್ತ ಶರಣಬಸವ ಹುಲಿಹೈದರ, ಹಿಂದಿನ ಒಂದು ವರ್ಷದಲ್ಲಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಹಿರಿಯ ಛಾಯಾಗ್ರಾಹಕ ಪ್ರಕಾಶ ಕಂದಕೂರ, ನಾಭಿರಾಜ ದಸ್ತೇನವರ ಹಾಗೂ ಭರತ್ ಕಂದಕೂರ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಹಿರಿಯ ಪತ್ರಿಕಾ ವಿತರಕ ನಾಗರಾಜ ಕಲಾಲ್ ಅವರನ್ನೂ ಸನ್ಮಾನಿಸಲಾಗುತ್ತದೆ.
ಪತ್ರಿಕಾ ದಿನದ ಅಂಗವಾಗಿ ಕ್ಲಬ್ ತನ್ನ ಸದಸ್ಯರಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನವೂ ಇದೇ ವೇಳೆ ಜರುಗಲಿದೆ ಎಂದು ಕ್ಲಬ್ ಅಧ್ಯಕ್ಷ ದೇವು ನಾಗನೂರು ತಿಳಿಸಿದ್ದಾರೆ.