ಬರಗಾಲ ಬಾಧಿಸಿದಾಗಲೂ ಬಸಾಪುರ ಕೆರೆಗೆ ಬಿಡುಗಡೆ ಇಲ್ಲ: ಬಾಕಳೆ

242ನೇ ದಿನ ಪೂರೈಸಿದ ಬಲ್ಡೋಟ ಹಟಾವೋ ಧರಣಿ;
ಕೊಪ್ಪಳ: ಈ ವರ್ಷ ಬರದ ಛಾಯೆ ಆವರಿಸಿ ರೈತರ ಕೃಷಿ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಭಾಗ್ಯನಗರದ ಮಹಿಳಾ ಹಿತಚಿಂತಕಿ ಸರೋಜಾ ಬಾಕಳೆ ಹೇಳಿದರು.
ನಗರಸಭೆ ಆವರಣದ ಬಲ್ಡೋಟ ತೊಲಗಿಸಿ ಕೊಪ್ಪಳ-ಭಾಗ್ಯನಗರ ಉಳಿಸಿ 242ನೇ ದಿನದ ಧರಣಿ ಹೋರಾಟದ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಬಾಕಳೆ ತಮ್ಮ ಮಾತು ಮುಂದುವರೆಸಿ ನಗರದ ನಾಗರಿಕರು ಈ ಸುದೀರ್ಘ ಕಾಲದ ಹೋರಾಟದ ಬಗ್ಗೆ ಚಿಂತನೆ ಮಾಡಿ ದೊಡ್ಡ ಮಟ್ಟದ ಪ್ರತಿರೋಧವನ್ನು ತೋರಬೇಕಿದೆ. ಬೆಂಗಳೂರು ಬಿಡದಿ, ಜಂಗಮಕೋಟೆ ಹೋರಾಟಕ್ಕೆ ಕೊಟ್ಟ ಗಮನವನ್ನು ಕೊಪ್ಪಳ ಹೋರಾಟಕ್ಕೆ ಸರ್ಕಾರ ಕೊಟ್ಟಂತೆ ಕಾಣುತ್ತಿಲ್ಲ. ಅಲ್ಲಿನ ಹೂಡಿಕೆ ಬಲ್ಡೋಟ ಹೂಡಿಕೆಗಿಂತ ಚಿಕ್ಕದು. ಇಲ್ಲಿ ತುಂಗಭದ್ರಾ ನದಿ, ಜಲಾಶಯದ ಮಾಲಿನ್ಯಗೊಂಡ ನೀರನ್ನು ಕೋಟಿಗಟ್ಟಲೆ ಜನರು ಕುಡಿದು ರೋಗಗ್ರಸ್ತರಾದಾಗಲೂ ಗಂಭೀರ ಆಲೋಚನೆ ಮಾಡದ ಸರಕಾರದ ಕಣ್ಣು ತೆರೆಯಿಸಬೇಕಿದೆ ಎಂದರು.
ಬಸಾಪುರ ಕೆರೆ ವಿಚಾರದಲ್ಲಿ ಹೈಕೋರ್ಟ್ ಆದೇಶದಂತೆ ಜಾನುವಾರು ನೀರು ಕುಡಿಯಲು ಮುಕಾತವಾಗಿಡಬೇಕಿದ್ದು, ಬರ ಆವರಸಿದಾಗಲೂ ಜಾನುವಾರುಗಳು ನೀರು ಕುಡಿಯಲು ಅವಕಾಶ ನೀಡದ ಕ್ರಮ ಖಂಡನೀಯ. ಬರಗಾಲದಲ್ಲಿ ಮನುಷ್ಯರು ಎಲ್ಲಿಂದಲಾದರೂ ಅನ್ನ, ನೀರು ತರಿಸಿಕೊಳ್ಳಬಹುದು. ಮೂಕ ಪ್ರಾಣಿಗಳಾದ ಹಸು, ಎಮ್ಮೆ, ಎತ್ತು, ಕುರಿ, ಮೇಕೆಗಳನ್ನು ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಕಿಣಿಕೆ ಮಾಡುತ್ತಿದ್ದು ಅವುಗಳಿಗೆ ನೀರು, ಮೇವು ಒದಗಿಸುವ ಜವಾಬ್ದಾರಿ ಸರಕಾರದ್ದೇ ಆಗಿದೆ. ಇಂಥ ಬರಗಾಲ ಸಂದರ್ಭದಲ್ಲಿಯೂ ಮೂಕ ಜಾನುವಾರುಗಳಿಗೆ ನೀರು ಕುಡಿಯಲು ಬಸಾಪುರ ಕೆರೆಗೆ ಅನುಮತಿ ನೀಡತ್ತಿಲ್ಲ ಎನ್ನುವುದು ಖೇದದ ಸಂಗತಿಯಾಗಿದೆ ಎಂದರು.
ಅನಿವಾರ್ಯವಾಗಿ ದೊಡ್ಡ ಮಟ್ಟದ ಹೋರಾಟ ಮಾಡುವ ಮೂಲಕ ಕೆರೆಯನ್ನು ಮುಕ್ತ ಮಾಡಿಕೊಳ್ಳೋಣ. ಜುಲೈ 7ರ 250ನೇ ದಿನದ ಕೊಪ್ಪಳ ಸಪ್ಪಳ ಆಂದೋಲನವನ್ನು ದೊಡ್ಡ ಮಟ್ಟದಲ್ಲಿ ಮಾಡೋಣ ಎಂದರು.
ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಶಂಭುಲಿಂಗಪ್ಪ ಹರಗೇರಿ, ಪ್ರಕಶಕ ಡಿ.ಎಂ.ಬಡಿಗೇರ, ಮಹಿಳಾ ನಾಯಕಿ ಕಾವ್ಯಾ ಗಡಾದ, ಮಹಾಂತೇಶ ಕೊತಬಾಳ, ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ,
ಶಿವಪ್ಪ ಜಲ್ಲಿ, ಬೊಮ್ಮಸಾಗರ ರೈತರಾದ ಸಣ್ಣ ಹನುಮಂತ, ನೀಲಪ್ಪ ಕಾಟಾಪುರ, ಮರಿಯಪ್ಪ ಚಿರ್ಚನಗುಡ್ಡ ಶರಣಪ್ಪ ಕೋಳಿಹಾಳ, ಶೇಖರಪ್ಪ ತಳವಾರ, ಭೀಮಪ್ಪ ಕೋಳಿಹಾಳ, ಸಣ್ಣ ಕರಿಯಪ್ಪ, ಹನುಮಂತಪ್ಪ ಕೊಟ್ಟಿ, ಹನುಮಂತಪ್ಪ ಚಿರ್ಚನಗುಡ್ಡ, ಲಕ್ಷ್ಮಪ್ಪ ಕೋಳಿಹಾಳ, ತಾವರೆಪ್ಪ ಕೋಳಿಹಾಳ, ದ್ಯಾಮಣ್ಣ ಮೊದಲಾದವರು ಇದ್ದರು.