ಕೊಪ್ಪಳವನ್ನು ಅನ್ವೇಷಿಸಿ: ಪ್ರವಾಸೋದ್ಯಮ ಪರಿಚಯಾತ್ಮಕ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ
ಕೊಪ್ಪಳ ಜನವರಿ ): ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರಕಾರ, ಬೆಂಗಳೂರು ಕಛೇರಿ, ಜಿಲ್ಲಾಡಳಿತ ಕೊಪ್ಪಳ ಇವರ ಸಹಯೋಗದಲ್ಲಿ ಜನವರಿ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ “ಕೊಪ್ಪಳ ಅನ್ವೇಷಿಸಿ” (Discover koppal) ಶಿರ್ಷಿಕೆಯ ಕೊಪ್ಪಳ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿದರು.

ಕೊಪ್ಪಳ ಜಿಲ್ಲಾಡಳಿತ ಭವನದ ಪ್ರಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಪದ್ಮಶ್ರೀ ಪುರಸ್ಕೃತರಾದ ಭೀಮವ್ವ ಶಿಳ್ಳೆಕ್ಯಾತರ್, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರಕಾರದ ಬೆಂಗಳೂರು ಕಛೇರಿಯ ನಿರ್ದೇಶಕರಾದ ಸಂಧ್ಯಾ ಹರಿದಾಸ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ರೋಷನ್ ಪಿಂಟೊ, ಕೇದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, “ಕೊಪ್ಪಳವನ್ನು ಅನ್ವೇಷಿಸಿ- ಪ್ರವಾಸೋದ್ಯಮ ಪರಿಚಯಾತ್ಮಕ ಪ್ರವಾಸ” ಕಾರ್ಯಕ್ರಮದ ಚಾಲನೆಗೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಕೊಪ್ಪಳದ ಅಂಜಲಿ ಭರತನಾಟ್ಯ ಕೇಂದ್ರದ ಕಲಾವಿದರು ಭರತನಾಟ್ಯ ನೃತ್ಯ ಮಾಡಿದರು. ಪದ್ಮಶ್ರೀ ಪುರಸ್ಕೃತರಾದ ಭೀಮವ್ವ ಶಿಳ್ಳೆಕ್ಯಾತರ್ ಅವರ ತಂಡದವರು ತೊಗಲು ಗೊಂಬೆಯಾಟ ಪ್ರದರ್ಶನ ನೀಡಿದರೆ ಹೊಸಳ್ಳಿಯ ಹುಲಿಗೆಮ್ಮ ಹಂದ್ರಾಳ ಮತ್ತು ತಂಡದವರು ಗೀಗೀ ಪದಗಳನ್ನು ಹಾಡಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಪ್ರದೇಶಗಳ ಪ್ರಸಿದ್ಧ ಬ್ಲಾಗರ್, ಇನ್ಪುಯೆನ್ಸರ್ ಮತ್ತು ಟೂರ್ ಆಫರೇಟರಗಳು, ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕೊಪ್ಪಳ ಜಿಲ್ಲೆಯ ಹೊಟೇಲ್ ಅಸೋಸಿಯೇಷನವರು, ಟೂರಿಸ್ಟ್ ಎಜೆಂಟಗಳು, ಪ್ರವಾಸಿ ಮಿತ್ರರು ಹಾಗೂ ಇತರೆ ಪ್ರವಾಸೋದ್ಯಮದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು.
ಕೊಪ್ಪಳ ಜಿಲ್ಲಾ ತೋಟಗಾರಿಕಾ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿರುವ ಉತ್ಕೃಷ್ಟ ಗುಣಮಟ್ಟದ ಹಣ್ಣುಗಳ ಮತ್ತು ಅವುಗಳ ಉತ್ಪನ್ನಗಳ ಪ್ರದರ್ಶನ, ಅಂತರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಲಾಗುತ್ತಿರುವ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದದಲ್ಲಿರುವ ಎನ್.ಒ.ಎಫ್.ಹೆಚ್ ಲಿಮಿಟೆಡ್ ನವರ ಕರ್ನಾಟಕದ ಮೊಟ್ಟಮೊದಲ ಹಾಗೂ ಅಂತರಾಷ್ಟ್ರೀಯ ಸಾವಯವ ಪ್ರಮಾಣೀಕೃತ ನುಗ್ಗೆ ಉತ್ಪನ್ನಗಳ ಪ್ರದರ್ಶನ ಹಾಗೂ ಜಿಲ್ಲೆಯ ಪ್ರಸಿದ್ಧ ಭಾಗ್ಯನಗರ ಸೀರೆ, ಆನೆಗೊಂದಿಯ ಬಾಳೆ ನಾರಿನ ಕರಕುಶಲ ವಸ್ತುಗಳು, ಕಿನ್ನಾಳ ಕಲೆಯ ಗೊಂಬೆಗಳು ಮತ್ತು ಕೊಪ್ಪಳ ಬಿದಿರು ಕಲೆ ಉತ್ಪನ್ನಗಳ ಪ್ರದರ್ಶನ ಗಮನ ಸೆಳೆಯಿತು.
Comments are closed.