ಕುಷ್ಟಗಿ ಮಹರ್ಷಿ ಶ್ರೀಭಗೀರಥ ಜಯಂತಿ ಅದ್ಧೂರಿಯಾಗಿ ಮೆರವಣಿಗೆ

ಕುಷ್ಟಗಿ : ರಾಜಋಷಿ ಮಹರ್ಷಿ ಭಗೀರಥ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಉಪ್ಪಾರ ಸಮುದಾಯ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀಭಗೀರಥ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಗಜೇಂದ್ರಗಡ ಮುಖ್ಯರಸ್ತೆ ಬಳಿಯ ಶ್ರೀಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸಮಾವೇಶಗೊಂಡ ಉಪ್ಪಾರ ಸಮುದಾಯ ಬಾಂಧವರು ಸಾರೋಟಿನಲ್ಲಿ ಇರಿಸಿದ ರಾಜಋಷಿ ಮಹರ್ಷಿ ಶ್ರೀ ಭಗೀರಥ ಭಾವಚಿತ್ರಕ್ಕೆ ಚಿತ್ರದುರ್ಗದ ಮಧುರೆ ಬ್ರಹ್ಮ ವಿದ್ಯಾನಗರದ ಡಾ.ಪುರುಶೋತ್ಥಮಾನಂದ ಪುರಿ ಶ್ರೀಗಳು ಪೂಜೆ ನೆರವೇರಿಸಿದರು. ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಪುಷ್ಪ ಸಮರ್ಪಿಸಿ ಗೌರವಿಸಿದರು.
ಬಳಿಕ ಆರಂಭಗೊಂಡ ಭಾವಚಿತ್ರ ಮೆರವಣಿಗೆ ಕನಕದಾಸ ವೃತ್ತ, ಡಿವಿಜಿ ವೃತ್ತ, ಮಾರುತಿ ವೃತ್ತ ಮಾರ್ಗವಾಗಿ ಕಾರ್ಗಿಲ್ ಹುತಾತ್ಮ ವೀರಯೋಧ ಮಲ್ಲಯ್ಯ ವೃತ್ತ ಮೂಲಕ ಕೊಪ್ಪಳ ರಸ್ತೆ ಖಾಸಗಿ ಕಲ್ಯಾಣ ಮಂಟಪದ ವೇದಿಕೆ ಕಾರ್ಯಕ್ರಮಕ್ಕೆ ಸಮಾಪ್ತಿಗೊಂಡಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣೆಗೆಗೆ ಮೆರಗುತಂದರು. ಮೆರವಣಿಗೆಯುದ್ದಕ್ಕೂ ಡೊಳ್ಳುಕುಣಿತ, ಆರ್ಕೆಸ್ಟ್ರಾ ಸಾರ್ವಜನಿಕರ ಗಮನ ಸೆಳೆಯಿತು.
Comments are closed.