ಪಂಚಮಸಾಲಿಗಳ ಮೇಲಿನ ಹಲ್ಲೆ ಐತಿಹಾಸಿಕ ಪ್ರಮಾದ: ಸಿವಿಸಿ
ಕೊಪ್ಪಳ: ಕಾಯಕ, ಸಹಬಾಳ್ವೆ ಮತ್ತು ಶಾಂತಿಗೆ ಹೆಸರಾದ ಪಂಚಮಸಾಲಿ ಸಮುದಾಯದವರ ಮೇಲೆ ಸರಕಾರ ನಡೆಸಿದ ಹಲ್ಲೆ ಐತಿಹಾಸಿಕ ಪ್ರಮಾದ ಎಂದು ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಕಿಡಿಕಾರಿದ್ದಾರೆ.

ಶಾಂತಿಯುತವಾಗಿ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರನ್ನು ಬಳಸಿಕೊಂಡು ನಡೆಸಿದ ಹಲ್ಲೆ ಅಮಾನವೀಯ ಕೃತ್ಯ. ಇದು ಕಾಂಗ್ರೆಸ್ ಸರಕಾರ ಲಿಂಗಾಯತ ಸಮಾಜದ ಮೇಲೆ ಸೇಡು ತೀರಿಸಿಕೊಳ್ಳುವ ಭಾಗವಾಗಿ ಈ ಕೃತ್ಯ ನಡೆದಿದೆ. ಅಧಿಕಾರ ವಹಿಸಿಕೊಂಡಾಗಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಮಸಾಲಿ ಸಮುದಾಯದವರ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಜೆ ಡಿ (ಎಸ್) ಪಕ್ಷ ಪಂಚಮಸಾಲಿ ಸಮುದಾಯದ ಪರ ಕಲ್ಲು ಬಂಡೆಯಂತೆ ನಿಲ್ಲುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯನವರದ್ದು ಸರ್ವಾಧಿಕಾರಿ ಮನಸ್ಥಿತಿ. ಬೆಳಗಾವಿಯಲ್ಲಿ ನಡೆದ ಹಲ್ಲೆ ಹಿಟ್ಲರ್ ಆಡಳಿತದ ಮಾದರಿ. ಈ ಕೂಡಲೇ ಸರಕಾರ ಪಂಚಮಸಾಲಿ ಸಮುದಾಯದ ಬೇಷರತ್ ಕ್ಷಮೆ ಕೇಳಬೇಕು. ಸಮುದಾಯದ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದೆ ಹೋದರೆ ಜೆಡಿ (ಎಸ್) ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸಂವಿಧಾನದ ರಕ್ಷಕ ಹಾಗೂ ಬಸವಣ್ಣನವರ ಅನುಯಾಯಿ ಎಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯನವರಿಗೆ ಶಾಂತಿಯುತ ಪ್ರತಿಭಟನೆಯ ಹಕ್ಕು ಸಂವಿಧಾನದ ಕೊಡುಗೆ ಎಂಬ ಕನಿಷ್ಠ ಜ್ಞಾನವು ಇದ್ದಂತಿಲ್ಲ. ಕಾಂಗ್ರೆಸ್ ಸರಕಾರದ ಕೈಗಳು ಈಗ ರಕ್ತಸಿಕ್ತವಾಗಿದೆ. ಪಂಚಮಸಾಲಿ ಹಾಗೂ ಸಿದ್ದರಾಮಯ್ಯನವರ ತುಳಿತಕ್ಕೊಳಗಾದ ಸಮುದಾಯಗಳು ಎದ್ದುನಿಂತು ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ನಿಶ್ಚಿತ. ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸಿ. ಇಲ್ಲದಿದ್ದರೆ ಅಧಿಕಾರದಿಂದ ನಿರ್ಗಮಿಸಿ ಎಂದು ಎಚ್ಚರಿಸಿದ್ದಾರೆ.
Comments are closed.