ಸಣಾಪುರದ ಕಾಯ್ದಿಟ್ಟ ಅರಣ್ಯ ಪ್ರದೇಶ ಟ್ರೀ ಪಾರ್ಕ್ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ: ಕಾವ್ಯ ಚತುರ್ವೇದಿ
* ವಿರುಪಾಪುರಗಡ್ಡಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಸಮಿತಿ ರಚನೆ: ಲೋಕಾಪರ್ಣೆಗೆ ಕ್ರಮ
ಸಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ವಿರುಪಾಪುರಗಡ್ಡಿಯ ಟ್ರೀ ಪಾರ್ಕ್ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ಚತುರ್ವೇದಿ ಅವರು ಹೇಳಿದರು.ವಿರುಪಾಪುರಗಡ್ಡಿ ಸ್ಥಳವು ತುಂಗಭದ್ರಾ ನದಿಯಿಂದ ಸುತ್ತುವರಿಯಲ್ಲಿ ನಡುಗಡ್ಡೆ ಪ್ರದೇಶವಾಗಿದ್ದು, ಸುತ್ತಲೂ ಅನೇಕ ಐತಿಹಾಸಿಕ, ಪೌರಾಣಿಕ ಸ್ಮಾರಕಗಳು ಇರುವುದರಿಂದ ಇಲ್ಲಿಗೆ ಹಲವಾರು ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಕೆಲಸ ಕಾರ್ಯವನ್ನು ಇಲಾಖೆಯಿಂದ ಅನುಮೋದನೆ ಪಡೆದು 2016-17ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದ್ದು, ಈಗಾಗಲೇ ಟ್ರೀ ಪಾರ್ಕ್ ಸುತ್ತಲೂ ಚೈನ್ಲಿಂಕ್ ಮೆಸ್ ಫೆನ್ಸಿಂಗ್, ಸ್ವಾಗತ ಗೋಪುರ, ಟಿಕೆಟ್ ಕೌಂಟರ್, ಅರಣ್ಯ ಮಾಹಿತಿ ಕೇಂದ್ರ. ಪಾರಾಮೋಲಾ, ಶೌಚಾಲಯ, ವಾಕಿಂಗ್ ಪಾತ್ ಮತ್ತಿತರ ಕಾಮಗಾರಿಗಳನ್ನು ಈಗಾಗಲೇ ನಿರ್ವಹಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಟ್ರೀ ಪಾರ್ಕ್ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ವಿರುಪಾಪುರಗಡ್ಡಿಗೆ ಹೊಂದಿಕೊಂಡಿರುವ ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದವನ್ನು ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ವ್ಯಾಪ್ತಿಗೆ ಸೇರಿಸಿ, ಅಲ್ಲಿ ಕೊರೆಕಲ್ ರೈಡ್ ಪ್ರಾರಂಭಿಸುವ ಮೂಲಕ ಪ್ರವಾಸಿಗರ ಗಮನ ಸೆಳೆಯಲಾಗುವುದು. ಇದರ ಜೊತೆಗೆ ಈ ಪ್ರದೇಶದಲ್ಲಿ ಅಗತ್ಯ ಪಾರ್ಕಿಂಗ್, ಕ್ಯಾಂಟಿನ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದ್ದು, ಸರ್ಕಾರದಿಂದ ಅನುಮೋಧನೆ ಬಂದ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆರೆ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ಕ್ರಿಯಾ ಯೋಜನೆಯನ್ನು ತಯಾರಿಸಲು ಗಂಗಾವತಿ ವಲಯ ಅರಣ್ಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಗಂಗಾವತಿ ವಲಯ ಅರಣ್ಯಾಧಿಕಾರಿಗಳಾದ ಸುಭಾಸಚಂದ್ರ ನಾಯಕ ಅವರು ಮಾತನಾಡಿ, ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನಕ್ಕೆ ಹೊಂದಿಕೊಂಡಿರುವ ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂ. 1 & 13 ರಲ್ಲಿರುವ ಸಣಾಪುರ ಕೆರೆಯು ಭಾಗಶಃ ಪ್ರದೇಶವು ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶ ಬ್ಲಾಕ್-2 ಗೆ ಸೇರಿದ್ದು, ಸಾಣಾಪುರ ಗ್ರಾಮದಲ್ಲಿನ ಮೀನುಗಾರಿಕೆ ಕುಟುಂಬಗಳು ಸಾಣಾಪುರ ಕೆರೆಯಲ್ಲಿ ಸಾಂಪ್ರದಾಯಿಕವಾಗಿ ಹರಿಗೋಲು ನಾವಿಕರು ಪ್ರವಾಸಿಗರನ್ನು ಕರೆದುಕೊಂಡು ಹರಿಗೋಲಿನಲ್ಲಿ ಸುತ್ತಾಡಿಸಿ ಕೆರೆಯ ಪರಿವೀಕ್ಷಣೆ ಮಾಡಿಸುತ್ತಿದ್ದರು. ಈ ಕುರಿತಾಗಿ ಹರಿಗೋಲು ನಾವಿಕರು ಇನ್ನು ಮುಂದೆಯೂ ಕೂಡ ಈ ಚಟುವಟಿಕೆಯನ್ನು ತಮ್ಮ ಉಪ ಜೀವನಕ್ಕಾಗಿ ಮುಂದುವರೆಸಿಕೊಂಡು ಹೋಗಲು ಅನುಕೂಲ ಮಾಡಿಕೊಡಬೇಕೆಂದು ವಲಯ ಅರಣ್ಯ ಕಛೇರಿಗೆ ಮನವಿ ಸಲ್ಲಿಸಿದ್ದಾರೆ. ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನದ ಎಲ್ಲಾ ಕಾರ್ಯಚಟುವಟಿಕೆಗಳ ವ್ಯಾಪ್ತಿಗೆ ಸಾಣಾಪುರ ಕೆರೆಯನ್ನೂ ಸೇರ್ಪಡೆಗೊಳಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಸ್ಥಳೀಯ ಹರಿಗೋಲು ಚಾಲಕರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಹಿತದೃಷ್ಟಿಯಿಂದ ನಿಯಮಾನುಸಾರ ಕೊರೆಕಲ್ ರೈಡ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಸಾಣಾಪುರ ಕೆರೆಯಲ್ಲಿ ಹರಿಗೋಲುಗಳನ್ನು ಹಾಕಲು ಕೆರೆಯು ಸೂಕ್ತವಾಗಿದೆಯೇ ಎಂಬುದರ ಬಗ್ಗೆ ರಾಷ್ಟ್ರೀಯ ಅಥವಾ ರಾಜ್ಯ ವಿಪತ್ತು ಸ್ಪಂದನ ಪಡೆಯಿಂದ ಸ್ಥಳ ಪರಿಶೀಲನಾ ವರದಿ ಪಡೆದು ಹರಿಗೋಲು ಚಾಲಕರಿಗೆ ಹರಿಗೋಲು ಚಾಲನಾ ತರಬೇತಿ ಅರ್ಹತಾ ಪ್ರಮಾಣ ಪತ್ರ ವಿತರಿಸಲಾಗುವುದು. ಹರಿಗೋಲು ಚಾಲನೆಗೆ ಸ್ಥಳೀಯರಿಗೆ ಆಧ್ಯತೆ, ಪ್ರವಾಸಿಗರಿಗಾಗಿ ಕೆರೆ ಆವರಣದಲ್ಲಿ ಕ್ಯಾಂಟೀನ್, ವಾಹನ ನಿಲುಗಡೆಗಾಗಿ ಪಾರ್ಕಿಂಗ್ ವ್ಯವಸ್ಥೆ ಮತ್ತು ನಿರ್ವಹಣೆ ಹಾಗೂ ಇತರ ಚಟುವಟಿಕೆಗಳನ್ನು ಟೆಂಡರ್ ಮೂಲಕ ನಿರ್ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
*ಸಮಿತಿ ರಚನೆ:* ಸಭೆಯಲ್ಲಿ ವಿರುಪಾಪುರಗಡ್ಡಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಸಮಿತಿಯನ್ನು ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಯಿತು.
ಸಭೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹುಸೇನ್ ಬಸಿಯಾ, ಕೊಪ್ಪಳ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ ತಮ್ಮಯ್ಯ ಎನ್., ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಜಿ ಕಲಾ, ಶಾಲಾ ಶಿಕ್ಷಣ ಇಲಾಖೆಯ ಅಂಜನಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ತುಳಸಿ ಬೆಲ್ಲದ್, ಅರಣ್ಯ ಇಲಾಖೆಯ ಶಮಶುನ್ನಿಸ್ಸಾ, ನಿಸ್ಸಾರ ಅಹ್ಮದ್, ಚಂದ್ರಶೇಖರ ರಾಥೋಡ್, ಮುತ್ತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.