ಗಣೇಶ ಮೂರ್ತಿ ಸಾಗಿಸುತ್ತಿದ್ದ ವಾಹನಕ್ಕೆ ಲಾರಿ ಢಿಕ್ಕಿ – ನಾಲ್ವರಿಗೆ ಗಾಯ
ಕೊಪ್ಪಳ,: ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಗಣೇಶ ಹಬ್ಬದಂದು ನಡೆದಿದೆ. ಗಣೇಶ ಹಬ್ಬ ಅಂಗವಾಗಿ ಟ್ರ್ಯಾಕ್ಟರ್ ಮೂಲಕ ಗಣಪತಿಯ ಮೂರ್ತಿಯನ್ನು ಶನಿವಾರದಂದು ಬೆಳಗ್ಗೆ ಕೊಪ್ಪಳ ನಗರದಿಂದ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಯುವಕರು ಗಣೇಶ ಪ್ರತಿಷ್ಠಾಪನೆಗೆಂದು ಮೂರ್ತಿಯನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕೊಪ್ಪಳ ನಗರದ ಬೈಪಾಸ್ ರಸ್ತೆಯಲ್ಲಿನ ಕೋಳೂರು ಕ್ರಾಸ್ ಬಳಿ ಹಿಂಬದಿಯಿಂದ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ, ನಾಲ್ಕು ಜನರು ಗಾಯಗೊಂಡ ಘಟನೆ ಸಂಭವಿಸಿದೆ. ಗಣೇಶನ ಮೂರ್ತಿ ನೆಲಕ್ಕುರುಳಿದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಹಾಗೂ ಗಂಭೀರ ಗಾಯಗಳಾಗಿಲ್ಲ. ನಂತರ ಗಣೇಶ ಮೂರ್ತಿಯನ್ನು ಹಿರೇಹಳ್ಳದಲ್ಲಿ ವಿಸರ್ಜನೆ ಮಾಡಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.