ಬಿಮಾ ಯೋಜನೆ ಜನರಿಗೆ ತಲುಪಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಿ: ಸಿಇಓ ರಾಹುಲ್ ರತ್ನಂ ಪಾಂಡೆಯ

Get real time updates directly on you device, subscribe now.

ಜನ ಸಾಮಾನ್ಯರ ಸಾಮಾಜಿಕ ಭದ್ರತೆಗಾಗಿ ಇರುವ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಹೇಳಿದರು.  
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳಡಿ ಅರ್ಹ ಫಲಾನುಭವಿಗಳ ನೋಂದಣಿ ಕುರಿತಂತೆ ತಮ್ಮ ಕಚೇರಿಯಲ್ಲಿ ಜುಲೈ 31ರಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮತನಾಡಿದರು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳು ಜನ ಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾಗಿದ್ದು, ಈ ಯೋಜನೆಗಳಿಗೆ ಒಳಪಡುವ ಫಲಾನುಭವಿಗಳ ಉಳಿತಾಯ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ಜೂನ್ ಮಾಹೆಯಲ್ಲಿ ರೂ.456 ಗಳು ಕಡಿತಗೊಳ್ಳುತ್ತವೆ. ಇದರಿಂದ ಸಾವು ಅಥವಾ ಅಪಘಾತ ಉಂಟಾದ ಸಂದರ್ಭದಲ್ಲಿ ಪರಿಹಾರ ಸಿಗಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಜೊತೆಗೆ ಯೋಜನೆಗಳಡಿ ಅರ್ಹ ಫಲಾನುಭವಿಗಳ ನೋಂದಾಯಿಸಲು ಎಲ್ಲಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
*ಕ್ಯಾಂಪ್ ಮೂಲಕ ಅರಿವು ಮೂಡಿಸಿ:* ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ ಜಾಗೃತಿಗಾಗಿ ಆಗಸ್ಟ್ 6 ಮತ್ತು 7ರಂದು ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಒಳಗೊಂಡಂತೆ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಕ್ಯಾಂಪ್ ಹಮ್ಮಿಕೊಂಡು ಬಿಮಾ ಯೋಜನೆಗಳ ಅರಿವು ಮೂಡಿಸಬೇಕು. ಲೀಡ್ ಬ್ಯಾಂಕಿನವರು ಪ್ರತಿ ಗ್ರಾಮ ಪಂಚಾಯತ್‌ಗೆ ಒಂದರಂತೆ ಮತ್ತು ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎರಡು ಕಾರ್ಯಕ್ರಮಗಳನ್ನು ರೂಪಿಸಿ, ಅರ್ಹ ಜನರನ್ನು ಬಿಮಾ ಯೋಜನೆಗಳ ಸೌಲಭ್ಯಕ್ಕೆ ಒಳಪಡಿಸಲು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
*ಇಲಾಖೆಗಳಲ್ಲಿ ವಿಮಾ ಯೋಜನೆಗಳ ಲಾಭ ಶೇ.100ರಷ್ಟು ತಲುಪಲಿ:* ಬಿಮಾ ಯೋಜನೆಗಳಡಿ ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳು ಮತ್ತು ವಿಶೇಷವಾಗಿ ಆರೋಗ್ಯ, ಶಿಕ್ಷಣ, ವಸತಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಡುಗೆ ಹಾಗೂ ಅಡುಗೆತರ ಸಿಬ್ಬಂದಿಗಳನ್ನು ನೋಂದಾಯಿಸಲು ಅವಕಾಶವಿದ್ದು, ಎಲ್ಲಾ ಇಲಾಖೆಗಳ ಮೂಲಕವೂ ಸಹ ಈ ಯೋಜನೆಗಳ ಲಾಭ ಅರ್ಹ ಜನರಿಗೆ ಶೇ.100ರಷ್ಟು ತಲುಪುವಂತಾಗಲಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ವೀರೇಂದ್ರ ಕುಮಾರ್ ಕೆ ಅವರು ಮಾತನಾಡಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ)ಯಡಿ ಈ ಯೋಜನೆಯಡಿ 18 ರಿಂದ 50 ವರ್ಷದೊಳಗಿನವರು ವಾರ್ಷಿಕ ರೂ.436 ಗಳನ್ನು ತಮ್ಮ ಉಳಿತಾಯ ಬ್ಯಾಂಕ್ ಖಾತೆಯ ಮೂಲಕ ಪ್ರೀಮಿಯಂ ಪಾವತಿಸಬೇಕು. ವಿಮಾದಾರರು ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ, ಅವರ ಅವಲಂಬಿತ ಕುಟುಂಬ ಸದಸ್ಯರಿಗೆ (ನಾಮಿನಿ) ರೂ.2 ಲಕ್ಷಗಳ ವಿಮಾ ಮೊತ್ತದ ನರೆವು ಸಿಗಲಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ)ಯು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ರೂ. 20 ಪ್ರೀಮಿಯಂ ಅನ್ನು ಉಳಿತಾಯ ಬ್ಯಾಂಕ್ ಖಾತೆಯ ಮೂಲಕ ಪಾವತಿಸಬೇಕು. ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ.2 ಲಕ್ಷಗಳು ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ.1 ಲಕ್ಷಗಳ ವಿಮಾ ಮೊತ್ತದ ನರೆವು ದೊರೆಯಲಿದ್ದು, ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ. ಈ ಎರಡೂ ಯೋಜನೆಗಳ ನೋಂದಾಯಿಸಲು ಅಭ್ಯರ್ಥಿಯು ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್, ಅಭ್ಯರ್ಥಿ ಮತ್ತು ಅವರ ಕುಟುಂಬ ಸದಸ್ಯರ (ನಾಮಿನಿ) ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳೊಂದಿಗೆ ನೋಂದಾಯಿಸಬಹುದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆಯಡಿ 1,21,814 ಜನರು, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 2,98,676 ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ತೊದಲಬಾಗಿ, ಜಿಪಂ ಮುಖ್ಯ ಯೋಜನಾಧಿಕಾರಿಗಳಾದ ಡಿ.ಮಂಜುನಾಥ್, ಜಿಪಂ ಮುಖ್ಯ ಲೆಕ್ಕಾಧಿಕಾರಿಗಳಾದ ಅಮೀನ ಅತ್ತಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲ ಬಿರಾದಾರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜು ತಳವಾರ, ಆರೋಗ್ಯ ಇಲಾಖೆಯ ನಾಗರಾಜ ಜುಮ್ಮಣ್ಣವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: