ಪರಮಾಣು ಸ್ಥಾವರಕ್ಕಾಗಿ ಎಚ್ಚರಿಕೆಯ ಹೆಜ್ಜೆ ಇಡಿ: ಸಿವಿಸಿ

Get real time updates directly on you device, subscribe now.

ಕೊಪ್ಪಳ: ಸರಕಾರಗಳು ಜಿಲ್ಲೆಯಲ್ಲಿ ಪರಮಾಣು ಸ್ಥಾವರ ಸ್ಥಾಪಿಸುವುದಕ್ಕೂ ಮೊದಲು
ರೈತರ, ಸಂಘಟನೆಗಳ ಹಾಗೂ ಜನಸಾಮಾನ್ಯರ ಜೊತೆಗೆ ಸರಣಿ ಸಭೆ ನಡೆಸಬೇಕು ಹಾಗೂ ಅವರ ಆಶಯಗಳಿಗೆ ಮನ್ನಣೆ ನೀಡಬೇಕು ಎಂದು ಜೆಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಅವು ಜನರಿಗೆ ಉದ್ಯೋಗ ಒದಗಿಸಿವೆಯಾದರೂ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿವೆ. ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಅನೇಕ ವಿಜ್ಞಾನಿಗಳ ವಿರೋಧವೂ ಇದೆ. ಫಲವತ್ತಾದ ಭೂಮಿಯಲ್ಲಿ ಪ್ರಮಾಣು ಸ್ಥಾವರ ಬಂದರೆ ಅದು ಅನೇಕ ಆವಾಂತರಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇರುತ್ತದೆ. ಹಾಗೆಯೇ ವಿದ್ಯುತ್ ನಿತ್ಯ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಸರಕಾರ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಯೋಜನೆಗೆ ಸಂಬಂಧಪಟ್ಟಂತೆ ರೈತರು ಮತ್ತು ಕೆಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಬಿಸಿಲು ಮತ್ತು ಗಾಳಿ ಉಪಯುಕ್ತ ಪ್ರಮಾಣದಲ್ಲಿದ್ದು ಸೌರ ಹಾಗೂ ಪವನ ವಿದ್ಯುತ್ ಘಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸುವುದಕ್ಕೆ ಸರಕಾರ ಆದ್ಯತೆ ನೀಡಬೇಕು. ತುಮಕೂರಿನ ಪಾವಗಡದಲ್ಲಿ ಇರುವಂತೆ ಸೋಲಾರ್ ಪಾರ್ಕ್ ನಿರ್ಮಿಸಲು ಮುಂದಾಗುವುದು ಸೂಕ್ತವಾದೀತು ಎಂದು ತಿಳಿಸಿದ್ದಾರೆ.
ಈ ಯೋಜನೆ ಒಂದು ಬೃಹದಾಕಾರವಾದ ವಿವಾದವಾಗಿ‌ ಪರಿವರ್ತನೆಯಾಗುವ ಮೊದಲೇ ಸರಕಾರ ಮಧ್ಯಪ್ರವೇಶಿಸಬೇಕು. ಪರಿಸ್ಥಿತಿಯನ್ನು ಹತೋಟಿಯಲ್ಲಿ ಇಡಬೇಕೆಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!