ಹೊರಹರಿವು 1 ಲಕ್ಷ ಕ್ಯೂಸೆಕ್ಗೆ ಹೆಚ್ಚಳ ಸಂದೇಶ: ತುಂಗಭದ್ರಾ ಡ್ಯಾಮ್ ಕೆಳಗಿನ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳ ಭೇಟಿ ; ಮುನ್ನೆಚ್ಚರಿಕೆ ವಹಿಸಲು ಗ್ರಾಮಸ್ಥರಲ್ಲಿ ಮನವಿ
ತುಂಗಭದ್ರಾ ನದಿಯ ಮೇಲ್ಮಟ್ಟದಲ್ಲಿರುವ ಭದ್ರಾ, ತುಂಗಾ ಮತ್ತು ವರದಾ ನದಿಯಿಂದ ನೀರು ವ್ಯಾಪಕವಾಗಿ ಹರಿದು ಬರುತ್ತಿರುವುದರಿಂದ ತುಂಗಭದ್ರಾ ನದಿಯಿಂದ ಹೊರ ಹರಿವು ಪ್ರಮಾಣವನ್ನು ಕ್ರಮೇಣ ಜುಲೈ 30ರ ರಾತ್ರಿ 10 ಗಂಟೆ ಸುಮಾರಿಗೆ ಸುಮಾರು 1 ಲಕ್ಷ ಕ್ಯೂಸೆಕ್ಗಳಿಗೆ ಹೆಚ್ಚಿಸುತ್ತಿರುವುದರಿಂದಾಗಿ ಜಿಲ್ಲಾಧಿಕಾರಿಗಳಾದ ನಲೀನ್ ಅತುಲ್ ಅವರು ಜುಲೈ 30ರಂದು ತುಂಗಭದ್ರಾ ಆಣೆಕಟ್ಟಿನ ಕೆಳಭಾಗದಲ್ಲಿನ ನಾನಾ ಹಳ್ಳಿಗಳಿಗೆ ತೆರಳಿ ಮುಂಜಾಗ್ರತೆ ವಹಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಬಳಿಕ ಗ್ರಾಮದ ಜನರಿಗೆ ನದಿ ತೀರದ ಪ್ರದೇಶಕ್ಕೆ ತೆರಳದಂತೆ ಮುಂಜಾಗ್ರತ ವಹಿಸಬೇಕು ಎಂದು ಸೂಚನೆ ನೀಡಿದರು. ತುಂಗಭದ್ರಾ ನದಿಯಿಂದ ಹೊರ ಹರಿವು ಪ್ರಮಾಣವನ್ನು ಕ್ರಮೇಣ ಸುಮಾರು 1 ಲಕ್ಷ ಕ್ಯೂಸೆಕ್ಗಳಿಗೆ ಹೆಚ್ಚಿಸುತ್ತಿರುವುದರಿಂದಾಗಿ ಯಾರು ಸಹ ಅಪಾಯಕ್ಕೆ ಸಿಲುಕಬಾರದೆಂದು ಮುಂಜಾಗ್ರತಾ ಕ್ರಮವಾಗಿ ನದಿ ಪ್ರದೇಶದಲ್ಲಿನ ಜನರು ನದಿ ದಡಕ್ಕೆ ಹೋಗದಂತೆ ನಿಷೇಧಾಜ್ಞೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಬಳಿಕ ಜಿಲ್ಲಾಧಿಕಾರಿಗಳು, ಶಿವಪುರ ಮತ್ತು ಕವಳಿನಗರಕ್ಕೆ ತೆರಳಿ, ನದಿಗೆ ಹೆಚ್ಚಿನ ನೀರು ಬಿಟ್ಟಿದ್ದರಿಂದಾಗಿ ಆಗಿರುವ ಭತ್ತದ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಸೀಲ್ದಾರರಾದ ವಿಠ್ಠಲ್ ಚೌಗಲಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.
Comments are closed.