೧೦ ವರ್ಷವಾದರೂ ‘೩೭೧(ಜೆ)’ ಉದ್ದೇಶ ಈಡೇರಿಲ್ಲ: ಪಾನಘಂಟಿ – ಜು.೨೨ರಂದು ಪ್ರತಿಭಟನೆ

Get real time updates directly on you device, subscribe now.

೩೭೧(ಜೆ) ಸಮರ್ಪಕ ಅನುಷ್ಠಾನದ ಹೋರಾಟಕ್ಕಾಗಿ ಪೂರ್ವಭಾವಿ ಸಭೆ

ಕೊಪ್ಪಳ: ೧೦ ವರ್ಷವಾದರೂ ೩೭೧(ಜೆ) ಕಾಯ್ದೆಯ ಉದ್ದೇಶವು ಸಮರ್ಪಕವಾಗಿ ಈಡೇರಿಲ್ಲ. ಶಿಕ್ಷಣ, ಉದ್ಯೋಗ, ಮೀಸಲಾತಿಗೆ ಸಂಬಂಧಿಸಿದಂತೆ ಸಮರ್ಪಕ ಅನುಷ್ಠಾನ ಮಾಡಬೇಕು. ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯ ಎಂದು ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ ಹೇಳಿದರು.
ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಶನಿವಾರ ಕಲ್ಯಾಣ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ೩೭೧(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಮತ್ತು ೩೭೧(ಜೆ) ರದ್ದು ಪಡಿಸುವಂತೆ ಹೋರಾಟವನ್ನು ಖಂಡಿಸಿ ಹೋರಾಟ ಕೈಗೊಳ್ಳುವ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಸರ್ಕಾರವಿದ್ದರೂ ಕೆ.ಕೆ.ಆರ್.ಟಿ.ಬಿಗೆ ಅನುದಾನ ನೀಡುತ್ತಿದ್ದಾರೆ. ಅಭಿವೃದ್ಧಿ, ಉದ್ಯೋಗ, ಶಿಕ್ಷಣ, ಮೀಸಲಾತಿ ನಿರೀಕ್ಷಿತ ಪ್ರಮಾಣದ ಈಡೇರಿಲ್ಲ. ೧೦೦ರಷ್ಟು ಅನುದಾನ ಬಳಸಿಲ್ಲ. ಅಲ್ಲದೇ ಜನಪ್ರತಿನಿಧಿಗಳು ತಮಗೆ ಅನುಕೂಲ ಇರುವಲ್ಲಿ ಅನುದಾನ ಬಳಸಿಲ್ಲ. ಸಂವಿಧಾನ ಕೊಟ್ಟಿರುವ ಹಕ್ಕು. ಸರ್ಕಾರ ಕೊಟ್ಟಿರುವುದಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ಮಾಡೋಣ ಎಂದರು.
ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ ಮಾತನಾಡಿ, ಪಾಲಕರು ಮತ್ತು ವಿದ್ಯಾರ್ಥಿಗಳು ಕೈಜೋಡಿಸಬೇಕು. ಜನಪ್ರತಿನಿಧಿಗಳು ಅನುದಾನ ಪಡೆಯುತ್ತಾರೆ. ೩೭೧(ಜೆ) ಪ್ರಮಾಣ ಪತ್ರ ಪಡೆಯಲು ಪರದಾಡುತ್ತಿದ್ದೇವೆ. ಹಾಗಾಗಿ ಸಮರ್ಪಕ ಅನುಷ್ಠಾನಕ್ಕೆ ಹೋರಾಟ ಅನಿವಾರ್ಯವಾಗಿದೆ ಎಂದರು.
ಪತ್ರಕರ್ತ ಶರಣಪ್ಪ ಬಾಚಲಾಪುರ ಮಾತನಾಡಿ, ಪ್ರತ್ಯೇಕ ನೇಮಕಾತಿ ಪ್ರಾಧಿಕಾರ ಆಗಬೇಕು. ಕಟ್ಟಡಗಳು ಮಾತ್ರ ನಿರ್ಮಾಣವಾಗುತ್ತಿದೆ. ಬೇರೆ ಕಡೆಗೆ ಅನುದಾನ ಬಳಕೆ ಮಾಡುತ್ತಿಲ್ಲ. ಅನ್ಯಾಯವಾದಾಗ ಧ್ವನಿ ಎತ್ತದಿದ್ದರೆ ಮೊದಲಿನಂತೆಯೇ ಆಗುತ್ತೇವೆ. ಶಿಕ್ಷಣ ಸಿಗಬೇಕು. ಹೋರಾಟದ ಜತೆಗೆ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಮಾತನಾಡಿ, ಎಲ್ಲದಕ್ಕೂ ಹೋರಾಟ ಮಾಡಿಯೇ ಪಡೆಯಬೇಕಾದರೆ, ಪ್ರತ್ಯೇಕ ರಾಜ್ಯದ ಹೋರಾಟ ಮಾಡಬೇಕಿದೆ. ಅನುದಾನ ಸರಿಯಾಗಿ ಬಳಕೆ ಮಾಡುತ್ತಿಲ್ಲ. ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿ ಆಗಿಲ್ಲ.
ಸಂತೋಷ ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿ,
೩೭೧(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಮತ್ತು ೩೭೧(ಜೆ) ರದ್ದು ಪಡಿಸುವಂತೆ ಹೋರಾಟವನ್ನು ಖಂಡಿಸಿ ಹಸಿರು ಪ್ರತಿಷ್ಠಾನದಿಂದ ಹೋರಾಟ ಮಾಡುತ್ತಿದ್ದಾರೆ. ಇದು ಖಂಡನೀಯ. ಜನಪ್ರತಿನಿಧಿಗಳು ಎಚ್ಚರಿಸುವವರೆಗೂ ಎಚ್ಚರವಾಗುವುದಿಲ್ಲ. ೩೭೧(ಜೆ) ಸೌಲಭ್ಯದಿಂದ ಅನ್ಯಾಯ ಆಗುತ್ತಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಪತ್ರ ಬರೆದಿದ್ದು, ನಾವು ಜಾಗೃತರಾಗಬೇಕಿದೆ. ಮೀಸಲಾತಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ ಆಗಬೇಕು. ೩೭೧(ಜೆ) ಪ್ರಮಾಣ ಪತ್ರ ನೀಡಲು ಉಪವಿಭಾಗಾಧಿಕಾರಿ ವಿಳಂಬ ಮಾಡುತ್ತಿದ್ದಾರೆ ಎಂದರು.
ಸಮಿತಿಯ ಯುವ ಘಟಕ ಜಿಲ್ಲಾಧ್ಯಕ್ಷ ರಮೇಶ ತುಪ್ಪದ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ವಕೀಲರ ಪರಿಷತ್ ಸದಸ್ಯ ಆಸೀಫ್ ಅಲಿ, ಜಿಲ್ಲಾ ವಕ್ಫ್ ಕಮಿಟಿ ಅಧ್ಯಕ್ಷ ಪೀರಾಹುಸೇನ್ ಹೊಸಳ್ಳಿ, ಕೃಷ್ಣ ಕಬ್ಬೇರ್, ವಿ.ಎಂ.ಭೂಸನೂರಮಠ, ಪಿಎಲ್.ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ಬಿ‌.ಪಾಟೀಲ್, ಪ್ರಹ್ಲಾದ್ ಅಗಳಿ ಇದ್ದರು.

ಜು.೨೨ರಂದು ಪ್ರತಿಭಟನೆ
ಜು. ೨೨ರಂದು ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಹೊರಾಟ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಂದು ನಗರದ ತಾಲೂಕು ಕ್ರೀಡಾಂಗಣದಿಂದ ಅಶೊಕವೃತ್ತ, ಬಸವೇಶ್ವರ ವೃತ್ತವರೆಗೆ ಪ್ರತಿಭಟನೆ ನಡೆಸುವುದು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!