ಕಾಂಗ್ರೆಸ್ ಸರಕಾರ ವಜಾ ಮಾಡಿ: ಸಿ ವಿ ಚಂದ್ರಶೇಖರ್

Get real time updates directly on you device, subscribe now.

 

ಕೊಪ್ಪಳ: ಬೆಲೆ ಏರಿಕೆ ಹಳಿ, ತಪ್ಪಿದ ಆರ್ಥಿಕ ವ್ಯವಸ್ಥೆ ಹಾಗೂ ಜನ ವಿರೋಧಿ ನೀತಿಯಲ್ಲಿ ತೊಡಗಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಈ ಕೂಡಲೇ ವಜಾ ಮಾಡಬೇಕೆಂದು ಜೆಡಿ (ಎಸ್) ಆಗ್ರಹಿಸಿದೆ.
ನಗರದಲ್ಲಿ ಗುರುವಾರದಂದು ಜೆಡಿ (ಎಸ್ ) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹಾಗೂ ಜಿಲ್ಲಾಧ್ಯಕ್ಷರಾದ ಸುರೇಶ್ ಭೂಮರೆಡ್ಡಿ ಅವರ ನೇತೃತ್ವದಲ್ಲಿ ಪಕ್ಷದ ನಾಯಕರು ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
“ಗ್ಯಾರಂಟಿ, ಗ್ಯಾರಂಟಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಕಳೆದ 14 ತಿಂಗಳಲ್ಲಿ ಸಾಮಾನ್ಯರ ಬದುಕನ್ನು ದುಸ್ತರ ಮಾಡಿದದೆ. ಕಾಂಗ್ರೆಸ್ ನಾಯಕರು ನೇರವಾಗಿ ಬಡವರ ಜೇಬಿಗೆ ಕೈ ಹಾಕಿ ಲೂಟಿ ಹೊಡೆದದ್ದೆ ಕಳೆದ ಒಂದು ವರ್ಷದ ಸಾಧನೆ! ಅಲ್ಪ ಸ್ವಲ್ಪ ಉಳಿಯುತ್ತಿದ್ದ ಹಣವನ್ನೂ ನಿರ್ದಯವಾಗಿ ಕಿತ್ತುಕೊಂಡ ಈ ಸರಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನೆ ಕಳೆದುಕೊಂಡಿದೆ ಎಂದು ಸಿ ವಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
“ವಿದ್ಯುತ್ ಬಿಲ್ಲು ದುಪ್ಪಟ್ಟಾಗಿದೆ. ತೈಲ ಬೆಲೆ ಗಗನಕ್ಕೇರಿದೆ. ಹಾಲಿನ ಬೆಲೆ ಮತ್ತೂ ಹೆಚ್ಚಾಯಿತು. ಬಿತ್ತನೆ ಬೀಜದ ದರ ಕೊಂಡುಕೊಳ್ಳಲಾಗದಷ್ಟು ಏರಿದೆ. ಸಾಮಾನ್ಯ ವಸ್ತುಗಳೆಲ್ಲ ಕೈಗೆ ನಿಲುಕದಾಗಿದೆ. ಇದನ್ನು ಮಾಡುವುದಕ್ಕಾಗಿಯೇ ಜನ ನಿಮಗೆ 136 ಸೀಟ್ ಕೊಟ್ಟರೆ?” ಎಂದು ಪ್ರಶ್ನಿಸಿದರು.
“ಸೈಲೆಂಟಾಗಿ ಬಡವರ ಕೈಗೆ ಚೊಂಬು, ಮಧ್ಯಮ ವರ್ಗದ ಜನರ ತಲೆ ಮೇಲೆ ಟೋಪಿ ಹಾಕಿದ ನಿಮ್ಮನ್ನು ಜನ ಕ್ಷಮಿಸಲಾರರು.
ಮುಖ್ಯಮಂತ್ರಿ ಆದಿಯಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ದಲಿತರ ಕಲ್ಯಾಣದ ಬಗ್ಗೆ ಮಾತನಾಡುತ್ತಿದ್ದರು. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿದೆ. ಅದರ ಬಗ್ಗೆ ಸಿ‌‌.ಎಂ. ಹಾಗೂ ಡಿ.ಸಿ.ಎಂ. ಅವರಿಗೂ ಮಾಹಿತಿ ಇತ್ತು. ದಲಿತರ ಬಗ್ಗೆ ಇವರ ಕಣ್ಣೀರು ಮೊಸಳೆ ಕಣ್ಣೀರು ಎಂದು ಸಾಬೀತಾಗಿದೆ.
ರಾಜ್ಯದಲ್ಲಿರುವ ಅತ್ಯಂತ ಪ್ರತಿಭಾವಂತರನ್ನು ಬಿಟ್ಟು ಹಣಕಾಸು ಕ್ರೂಢೀಕರಣಕ್ಕಾಗಿ ವಿದೇಶಿ ಸಲಹೆಗಾರರನ್ನು ನೇಮಿಸಲಾಯಿತು. ಒಬ್ಬ ಮುಖ್ಯಮಂತ್ರಿಗೆ ಒಂದು ಡಜನ್ ನಷ್ಟು ಸಲಹೆಗಾರರು. ಅವರಿಗೆ ಗೂಟದ ಕಾರು, ಕ್ಯಾಬಿನೆಟ್ ದರ್ಜೆ. ಇದು ಸಮಾಜವಾದ ಆಡಳಿತದ ವೈಖರಿಯೇ ಎಂಬುದನ್ನು ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಬೇಕು,” ಎಂದು ಸುರೇಶ್ ಭೂಮರೆಡ್ಡಿ ಒತ್ತಾಯಿಸಿದರು.
“ಕ್ಯಾಂಪಸ್ ಗಳಲ್ಲಿ ಹಾಡು ಹಗಲೇ ಕೊಲೆಗಳಾದವು. ಹೆಣ್ಣು ಮಕ್ಕಳ ಮಾನ ಹರಾಜಾಯಿತು. ವೈಯಕ್ತಿಕ ದ್ವೇಷ ಸಾಧನೆಗಾಗಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು. ಇದು ಸ್ವಯಂ ಘೋಷಿತ ಸಂವಿಧಾನ ರಕ್ಷಕರಿಗೆ ಶೋಭೆಯೇ ಎಂಬುದನ್ನು ಆ ಪಕ್ಷದ ಮುಖಂಡರು ಸ್ಪಷ್ಟಪಡಿಸಬೇಕು,” ಎಂದು ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷರಾದ ರಾಜು ನಾಯಕ ಆಗ್ರಹಿಸಿದರು.
 ಕೇಂದ್ರ ಸರಕಾರದಿಂದ ದಲಿತ ಕಲ್ಯಾಣಕ್ಕಾಗಿ ಬಿಡುಗಡೆಯಾದ 40 ಕೋಟಿ ಹಣ ಖರ್ಚಾಗದೆ ಹಾಗೆಯೇ ಉಳಿದಿದೆ. ಇದಕ್ಕೆ ಕೇಂದ್ರ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ. ಇದು ನಿರ್ಲಕ್ಷತೆ ಹಾಗೂ ನಿರ್ಲಜ್ಯತೆಗೆ ಹಿಡಿದ ಕೈಗನ್ನಡಿ. ಜಾತಿಗೊಂದು ಡಿ.ಸಿ.ಎಂ. ಸಮುದಾಯಕೊಂದು ಡಿ.ಸಿ.ಎಂ. ಎಂದು ಬಣ ರಾಜಕಾರಣದಲ್ಲಿ ನಿರತರಾಗಿರುವ ಕೈನಾಯಕರಿಗೆ ಸಾಮಾನ್ಯರ ಬದುಕು ಕಾಣಿಸುವುದೇ ಇಲ್ಲ. ಮೂಲಭೂತ ಸೌಕರ್ಯಗಳಿಗೆ ಹಣವಿಲ್ಲ. ತೆರಿಗೆದಾರರ ಹಣ ದುರುಪಯೋಗ. ಹದಿನೈದು ಸಲ ಬಜೆಟ್ ಮಂಡಿಸಿದ ಖ್ಯಾತಿಗೆ ಒಳಗಾದ ಶ್ರೇಷ್ಠ ಆರ್ಥಿಕ ತಜ್ಞ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಸಿದ್ದರಾಮಯ್ಯನವರ ಹಣಕಾಸು ವ್ಯವಸ್ಥೆ ಇದು.
ಬಡವರಿಗೆ ಉಚಿತವಾಗಿ ಕೊಟ್ಟೆವು ಎನ್ನುವ ಇವರು ಬೆಲೆ ಏರಿಸಿ ಕೊಟ್ಟ ಹಣವನ್ನು ಕಿತ್ತುಕೊಂಡ ಕಿರಾತಕರು. ರಾಜ್ಯದ ಪ್ರತಿಯೊಂದು ಬಸ್ ನಿಲ್ದಾಣಕ್ಕೆ ತೆರಳಿ ನೋಡಿದರೆ ಜನಸಾಮಾನ್ಯರ ಹಾಗೂ ಪ್ರಯಾಣಿಕರ ಪರಿಸ್ಥಿತಿ ಅದೆಷ್ಟು ಹದಗೆಟ್ಟು ಹೋಗಿದೆ ಎಂಬುದು ತಿಳಿಯುತ್ತದೆ ಎಂದು ಪ್ರತಿಭಟನಾ ನಿರತರು ವಾಗ್ದಾಳಿ ನಡೆಸಿದರು.
ಪಕ್ಷದ ಕಚೇರಿಯಲ್ಲಿಯೇ ಅಕಾಡೆಮಿ ಅಧ್ಯಕ್ಷರ ಸಭೆ ನಡೆಸಿ ಸಂಸ್ಕೃತಿಕ ವಲಯವನ್ನು ಕಲುಷಿತಗೊಳಿಸಿದಿರಿ. ಈ ರಾಜ್ಯದ ಸಾಕ್ಷಿ ಪ್ರಜ್ಞೆಯಂತಿರುವ ಹಿರಿಯರಾದ ಶ್ರೀ ದೇವನೂರು ಮಹಾದೇವ ಹಾಗೂ ಶ್ರೀ ಬರಗೂರು ರಾಮಚಂದ್ರಪ್ಪನವರು ಕಾಂಗ್ರೆಸ್ ಸರಕಾರದ ವೈಖರಿಯನ್ನು ಟೀಕಿಸಿದ್ದಾರೆ ಬುದ್ಧಿ ಮಾತು ಹೇಳಿದ್ದಾರೆ. ಇನ್ನಾದರೂ ಕ್ಷೀಲ್ಲಕ ರಾಜಕಾರಣ ಬಿಟ್ಟುಬಿಡಿ.
ಕೇಂದ್ರದಿಂದ ಬರಬೇಕಾದ ತೆರಿಗೆ ಬಂದಿಲ್ಲ ಎಂದು ರಂಪಾಟ ಮಾಡಿದಿರಿ. ದಿಲ್ಲಿಯಲ್ಲಿ ಧರಣಿ ಕೂತಿರಿ. ನ್ಯಾಯಾಲಯಕ್ಕೂ ಹೋದಿರಿ. ಬಂದ ಹಣ ಏನಾಯಿತು ಅದರ ಲೆಕ್ಕ ಕೊಡುವ ಧೈರ್ಯ ನಿಮಗಿದೆಯೇ? ಸರಕಾರಿ ಸಿಬ್ಬಂದಿಗೆ ಸಂಬಳ ಕೊಡಲು ನಿಮ್ಮ ಬಳಿ ಹಣವಿಲ್ಲ. ಇದು ನಿಮ್ಮ ಅವೈಜ್ಞಾನಿಕ ನೀತಿಗಳ ಫಲ. ಈ ಕೂಡಲೇ ಜನತೆಯ ಬೇಷರತ್ ಕ್ಷಮೆ ಕೇಳಿ. ಬೆಲೆ ಇಳಿಸಿ. ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ ಕಾನೂನು ವ್ಯವಸ್ಥೆ ಕುಸಿದಿದೆ. ಮುಖ್ಯಮಂತ್ರಿ ಅವರಿಗೆ ಆಡಳಿತ ಯಂತ್ರದ ಮೇಲೆ ನಿಯಂತ್ರಣವಿಲ್ಲ. ಹೀಗಾಗಿ ಈ ಕೂಡಲೇ ಕಾಂಗ್ರೆಸ್ ಪಕ್ಷವನ್ನು ವಜಾ ಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ರ್ಯಾಲಿ ಬನ್ನಿ ಕಟ್ಟೆಯಿಂದ ಆರಂಭಗೊಂಡು ಬಸವೇಶ್ವರ ವೃತ್ತದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ದೇವಪ್ಪ ಕಟ್ಟಿಮನಿ, ಜಿಲ್ಲಾ ವಕ್ತಾರ ಮಲ್ಲನಗೌಡ ಕೋಣನಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹಾಗೂ ಈಶಪ್ಪ ಮಾದಿನೂರು, ಶರಣಪ್ಪ ಕುಂಬಾರ್, ಯಮನಪ್ಪ ಕಟಗಿ, ಬಸವರಾಜ್ ಗುರುಗುಳಿ, ಕೆಂಚಪ್ಪ ಹಳ್ಳಿ, ಕೃಷ್ಣ ನಾಯಕ್, ವಸಂತ ಕರಿಗಾರ್, ಭೀಮ್ ರೆಡ್ಡಿ ಗದ್ದಿಕೇರಿ, ಜಗನ್ನಾಥ್ ರೆಡ್ಡಿ, ಚಿಕ್ಕ ವೀರಣ್ಣ, ರಮೇಶ ಕುಣಿಕೇರಿ, ಹುಚ್ಚಪ್ಪ ಚೌದ್ರಿ, ಕರಿಯಪ್ಪ ಹಾಲವರ್ತಿ, ಆನಂದ ಕಾಸನಕಂಡಿ, ಜಗನ್ನಾಥ ಮುನಿರಾಬಾದ್, ಕಳಕನಗೌಡ ಹಲಗೇರಿ, ಶರಣಪ್ಪ ರಾಂಪುರ್, ಮೌನೇಶ ಮಾದಿನೂರ, ಪ್ರವೀಣ ಇಟಗಿ, ಶರಣು ಪಾಟೀಲ, ಮೂರ್ತ್ಯಪ್ಪ ಹಿಟ್ನಾಳ, ರುದ್ರೇಶ ಕೊಪ್ಪಳ, ಮಂಜುನಾಥ ಕುಣಿಕೇರಿ ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: