ನಿಯಮಿತ ವ್ಯಾಯಾಮದಿಂದ ಆರೋಗ್ಯ ಸದೃಢ: ಶಿವರಾಜ್ ತಂಗಡಗಿ

Get real time updates directly on you device, subscribe now.

ಕನಕಗಿರಿ ಉತ್ಸವ: ಆಕರ್ಷಕ ಮ್ಯಾರಥಾನ್ ಓಟ

  • ರಾಜ್ಯ ಮಟ್ಟದ ಮ್ಯಾರಥಾನ್ ಓಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಕನಕಗಿರಿ ಉತ್ಸವ-2024ರ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನಕಗಿರಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾರ್ಚ್ 1ರಂದು ಕನಕಗಿರಿಯಲ್ಲಿ ಆಕರ್ಷಕ ಮ್ಯಾರಥಾನ್ ಓಟ ನಡೆಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಕನಕಗಿರಿಯ ಬಸವೇಶ್ವರ ಸರ್ಕಲ್‌ ಹತ್ತಿರ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಪ್ರಪ್ರಥಮ ಬಾರಿಗೆ ಕನಕಗಿರಿ ಉತ್ಸವ ಪ್ರಯುಕ್ತ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ. ಕನಕಗಿರಿ ಉತ್ಸವದ ಕ್ರೀಡಾಕೂಟಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇದೆ ರೀತಿಯ ಉತ್ಸವ ಮಾರ್ಚ್ 2 ಮತ್ತು 3ರಂದು ಸಿಗಲಿ. ಕನಕಗಿರಿಯು ಐತಿಹಾಸಿಕ ಪುಣ್ಯ ಕ್ಷೇತ್ರವಾಗಿದ್ದು, ಕನಕಗಿರಿ ಉತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ. ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರಗು ನೀಡಲಿವೆ ಎಂದರು.
ನಿಯಮಿತ ವ್ಯಾಯಾಮದಿಂದ ಆರೋಗ್ಯ ಸದೃಢವಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕನಕಗಿರಿ ಉತ್ಸವದ ಪ್ರಯುಕ್ತ ಏರ್ಪಡಿಸಲಾದ ರಾಜ್ಯ ಮಟ್ಟದ ಮ್ಯಾರಥಾನ್ ಓಟದಿಂದ ಜಾಗೃತಿ ಸಿಗಲಿದೆ. ಪ್ರತಿಯೊಬ್ಬರೂ ದಿನನಿತ್ಯ ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರು ಆಗಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ, ಕನಕಗಿರಿ ತಹಶೀಲ್ದಾರರಾದ ವಿಶ್ವನಾಥ ಮುರಡಿ, ತಾಲ್ಲೂಕು ಪಂಚಾಯತ್ ಇಓ ಚಂದ್ರಶೇಖರ ಕಂದಕೂರ, ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮ್ಯಾರಥಾನ್ ಓಟದ ವಿಜೇತರು: ರಾಜ್ಯ ಮಟ್ಟದ ಮ್ಯಾರಥಾನ್ ಓಟದಲ್ಲಿ ಮಹಿಳಾ ವಿಭಾಗದಲ್ಲಿ ಕನಕಗಿರಿಯ ಹೀನಾ ಕೌಸರ್ ಪ್ರಥಮ ಸ್ಥಾನ ಪಡೆದರು. ಮೈಸೂರಿನ ದ್ವೀಪ ದ್ವೀತಿಯ ಸ್ಥಾನ ಪಡೆದರೆ, ಕೊಪ್ಪಳ ಜಿಲ್ಲೆಯ ಆಫೀಯಾ ತೃತೀಯ ಸ್ಥಾನ ಪಡೆದರು.
ಪುರುಷರ ವಿಭಾಗದಲ್ಲಿ ಧಾರವಾಡ‌ದ ಸಚಿನ ಪ್ರಥಮ ಸ್ಥಾನ, ಧಾರವಾಡ‌ದ ಮಣಿಕಂಠ ದ್ವೀತಿಯ, ಹುಬ್ಬಳ್ಳಿಯ ವಿಲಾಸ್ ತೃತೀಯ, ಬಳ್ಳಾರಿಯ ಚನ್ನಕೇಶವ್ ನಾಲ್ಕನೇ ಸ್ಥಾನ ಪಡೆದರೆ, ಹುಬ್ಬಳ್ಳಿಯ ರಮೇಶ್ ಐದನೇಯ ಸ್ಥಾನವನ್ನು ಪಡೆದುಕೊಂಡರು.

Get real time updates directly on you device, subscribe now.

Comments are closed.

error: Content is protected !!
%d bloggers like this: