ಬಸವಣ್ಣನವರು ಸಮಾನತೆಯ ಹರಿಕಾರರಾಗಿ ಸಮಾಜ ಸುಧಾರಣೆಗೆ ಶ್ರಮಿಸಿದರು : ಸಚಿವ ಶಿವರಾಜ ಎಸ್. ತಂಗಡಗಿ

Get real time updates directly on you device, subscribe now.

: ವಿಶ್ವಗುರು ಬಸವಣ್ಣನವರು ಸಮಾನತೆಯ ಹರಿಕಾರರಾಗಿ ಸಮಾಜ ಸುಧಾರಣೆಗೆ ಶ್ರಮಿಸಿದರು. ತಾವು ರಚಿಸಿದ ವಚನಗಳಂತೆಯೇ ಆದರ್ಶನೀಯವಾಗಿ ಜೀವಿಸಿದರು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಹೇಳಿದರು.

ಶನಿವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣ, ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಸಮಾರಂಭದಲ್ಲಿ ಭಾವಚಿತ್ರವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮಹಿಳಾ ಅಸಮಾನತೆ, ಮೂಢ ನಂಬಿಕೆಗಳ ವಿರುದ್ಧ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿದರು. ತಾವು ರಚಿಸಿದ ಅನುಭವ ಮಂಟಪದಲ್ಲಿ ಎಲ್ಲ ಜಾತಿಯ ಶರಣರಿಗೆ, ವಚನಕಾರರಿಗೆ ಅವಕಾಶ ನೀಡಿದರು. ಮಹಿಳಾ ಸಬಲೀಕರಣ, ಸಮಾನತೆಗಾಗಿ ಧ್ವನಿ ಎತ್ತಿದರು. ಬಸವಣ್ಣನವರ ವಚನಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ಬಸವಣ್ಣನವರು ವಚನಗಳ ಮೂಲಕ ಪ್ರದಿಪಾದಿಸಿದ ವಾಸ್ತವಾಂಶಗಳನ್ನು, ಸಮಾಜ ಸುಧಾರಣಾ ಕ್ರಮಗಳಿಗೆ ಕಾನೂನಿನ ಚೌಕಟ್ಟು ಒದಗಿಸಿ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ನೀಡಿದರು. ಬಸವಣ್ಣನವರ ಸಮಾನತೆಯ ದೃಷ್ಠಿಕೋನ, ಅವರು ಜೀವನ ನಡೆಸಿದ ರೀತಿ, ಅವರು ವಚನಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಬಸವಣ್ಣನವರು ಸೇರಿದಂತೆ ನಮ್ಮ ನಾಡಿನ ಶರಣರ ಸ್ಮರಣೆಗಾಗಿ ಕಲಬುರಗಿಯಲ್ಲಿ ವಚನ ಮಂಟಪ ನಿರ್ಮಿಸಲಾಗುತ್ತಿದೆ. ಬಸವನ ಬಾಗೇವಾಡಿಯಲ್ಲಿ ಪ್ರಾಧಿಕಾರವನ್ನು ಈಗಾಗಲೇ ರಚಿಸಲಾಗಿದ್ದು, ಕಾರ್ಯಾರಂಭಗೊAಡಿದೆ. ವಚನ ಜಾತ್ರೆ ಕೈಗೊರ್ಳಳುವ ಕುರಿತು ಚರ್ಚೆಗಳ ನಡೆದಿದ್ದು, ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನ ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಜಶೇಖರ ಸಸಿಮಠ ಅವರು ಮಾತನಾಡಿ, ಬಸವಣ್ಣನವರು ಶ್ರಮಿಕ ವರ್ಗದ ನಾಯಕರಾಗಿದ್ದರು. ಯಾವುದೇ ಜಾತಿಯ ಶ್ರಮ ಜೀವಿಯನ್ನು ಅವರು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಜಾತಿ ಆಧಾರದಲ್ಲಿ ಎಂದಿಗೂ ಬೇಧ ತೋರದೆ ತಮ್ಮ ಅನುಭವ ಮಂಟಪದಲ್ಲಿ ಎಲ್ಲ ಜಾತಿಯ ವಚನಕಾರರಿಗೆ ಅವಕಾಶ ನೀಡಿದರು. ಸಾರ್ವತ್ರಿಕ ಶಿಕ್ಷಣಕ್ಕೆ, ಸಮಾನತೆಯ ದೃಷ್ಠಿಯ ರಾಜಕಾರಣಕ್ಕೆ, ಮಹಿಳಾ ಸಮಾನತೆಗೆ ಆದ್ಯತೆ ನೀಡಿದರು. ಆದ್ದರಿಂದಲೇ ಅವರು ಇಂದು ವಿಶ್ವಗುರು ಎನಿಸಿಕೊಂಡರು. ನಮ್ಮ ನಾಡಿನ ಪ್ರಮುಖ ವಚನಕಾರರಿಗೆ, ಶರಣರಿಗೆ ಸಾಂಸ್ಕೃತಿಕ ನಾಯಕ ಎಂಬ ಸ್ಥಾನಮಾನ ನೀಡಿ ಗೌರವಿಸಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದ ಅವರು, ಬಸವಣ್ಣನವರ ವಚನಗಳ ಮೂಲಕ ಅವರ ಜೀವನ, ಸಾಮಾಜಿಕ ನಡೆಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲರಾದ ಸಿ.ವಿ.ಜಡಿಯವರ ಅವರು ನಿರೂಪಿಸಿದರು. ಕಿನ್ನಾಳನ ಭಾಷಾ ಹಿರೇಮನಿ ಹಾಗೂ ಸಂಗಡಿಗರು ವಚನ ಗಾಯನ ಹಾಗೂ ನಾಡಗೀತೆ ನಡೆಸಿಕೊಟ್ಟರು.
ಪೌರ ಕಾರ್ಮಿಕರಿಗೆ ಖಾಯಂ ನೇಮಕ ಪತ್ರ ವಿತರಣೆ:
ಇದೇ ಸಮಾರಂಭದಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಯಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಪ್ರಮಾಣ ಪತ್ರ ವಿತರಿಸಲಾಯಿತು.
ಜಿಲ್ಲೆಯಲ್ಲಿ ಕೊಪ್ಪಳ ನಗರಸಭೆಯ 18, ಕುಷ್ಟಗಿ ಪುರಸಭೆಯ 15, ಕಾರಟಗಿ ಪುರಸಭೆಯ  19, ಕನಕಗಿರಿ ಪಟ್ಟಣ ಪಂಚಾಯತಿಯ 12, ಕುಕನೂರು ಪಟ್ಟಣ ಪಂಚಾಯತಿಯ 08, ತಾವರಗೇರಾ ಪಟ್ಟಣ ಪಂಚಾಯತಿಯ 13 ಸೇರಿದಂತೆ ಒಟ್ಟು 85 ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದ್ದು, ಅವರಲ್ಲಿ 06 ಜನ ಪೌರಕಾರ್ಮಿಕರಿಗೆ ಸಾಂಕೇತಿಕವಾಗಿ ಇಂದು ಸಚಿವರು ಖಾಯಂ ನೇಮಕಾತಿ ಪ್ರಮಾಣ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಬಸವ ಸಮಿತಿಯ ರಾಜಶೇಖರ ಸಸಿಮಠ, ಬಸವರಾಜ ಬಳ್ಳೊಳ್ಳಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೌರ ಕಾರ್ಮಿಕರು, ಶಾಲಾ ಮಕ್ಕಳು, ಜಿಲ್ಲಾ ಬಸವ ಸಮಿತಿಯ ಸದಸ್ಯರು ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: