ನಾಳೆ ಡಿಸೆಂಬರ್ ೩ ರಂದು ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ’

Get real time updates directly on you device, subscribe now.

:

ಕೊಪ್ಪಳ : ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣೆಯ ‘ಸಾಹಿತ್ಯೋತ್ಸವ’ ಕಾರ್ಯಕ್ರಮವನ್ನು ಇದೇ ಡಿಸೆಂಬರ್ ೩, ರವಿವಾರ ಭಾಗ್ಯನಗರ ರಸ್ತೆಯ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಮುಂಜಾನೆ ೧೦.೧೫ ಕ್ಕೆ ಜರುಗಲಿದೆ. ಶಿಕ್ಷಣ ತಜ್ಞ ಟಿ.ವಿ. ಮಾಗಳದ ‘ಸಾಹಿತ್ಯೋತ್ಸವ’ವನ್ನು ಉದ್ಘಾಟಿಸಲಿದ್ದು, ಗವಿಸಿದ್ಧ ಎನ್. ಬಳ್ಳಾರಿ ಬದುಕು ಮತ್ತು ಕಾವ್ಯದ ಕುರಿತು ಕಲಬುರಗಿಯ ಡಾ. ವಿಕ್ರಮ ವಿಸಾಜಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಪ್ರಕಾಶ ಕಡಮೆ, ಎ.ಎಂ. ಮದರಿ, ಉದ್ಯಮಿಗಳಾದ ಬಸವರಾಜ ಬಳ್ಳೊಳ್ಳಿ, ಶ್ರೀನಿವಾಸ ಗುಪ್ತಾ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಕೀರ್ಲೊಸ್ಕರ್ ಫೆರಸ್ ಇಂಡಸ್ಟ್ರೀಸ್‌ನ ಮಾನವ ಸಂಪನ್ಮೂಲ ವಿಭಾಗದ ಪಿ. ನಾರಾಯಣ, ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ಇಲಾಖೆಯ ನಾಗರಾಜ ಬಿ. ದುಂಡಿ, ಹಿರಿಯ ಸಾಹಿತಿಗಳಾದ ಎಚ್.ಎಸ್. ಪಾಟೀಲ ಮತ್ತು ಅಲ್ಲಮಪ್ರಭು ಬೆಟ್ಟದೂರು, ವಕೀಲರ ಸಂಘದ ಅಧ್ಯಕ್ಷ ಅಲಬಣ್ಣ ಕಣಿವಿ ಭಾಗವಹಿಸಲಿದ್ದಾರೆ.

ಅಂತಾರಾಷ್ಟ್ರೀಯ ಜನಪದ ಕಲಾವಿದ ಮಹೆಬೂಬ ಕಿಲ್ಲೇದಾರ ಮತ್ತು ತಂಡದವರ ಗೀತಗಾಯನ, ಎಂಟು ವಿವಿಧ ಕೃತಿಗಳು ಲೋಕಾರ್ಪಣೆ, ‘ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ -೨೦೨೩’ ರ ವಿಜೇತರಾದ ಸದಾಶಿವ ಸೊರಟೂರು ಮತ್ತು ಸಂತೋಷ ನಾಯಿಕ ಇವರಿಗೆ ಕಾವ್ಯ ಪ್ರಶಸ್ತಿ ಪ್ರದಾನ, ಐವರಿಗೆ ಸಮಾಜಮುಖಿ ಗೌರವ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಿಲ್ಲೆಯ ಸಾಧಕರಿಗೆ ಅಭಿನಂದನಾ ಗೌರವ ಈ ಸಮಾರಂಭದಲ್ಲಿ ನೆರವೇರಲಿದೆ.

ಮಧ್ಯಾಹ್ನದ ಕವಿಗೋಷ್ಠಿಯಲ್ಲಿ ೨೦೧೯ ರಿಂದ ೨೦೨೩ ರ ವರೆಗಿನ ‘ಕವಿ ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ ವಿಜೇತರ’ ಸಮಾಗಮ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯ ಆಶಯ ನುಡಿಗಳನ್ನು ಹಿರಿಯ ಕವಿಗಳಾದ ಸುನಂದಾ ಕಡಮೆ ಮತ್ತು ಅಧ್ಯಕ್ಷತೆಯನ್ನು ಸತೀಶ ಕುಲಕರ್ಣಿ ವಹಿಸಿಕೊಳ್ಳಲಿದ್ದಾರೆ. ಈ ಕವಿಗೋಷ್ಠಿಯಲ್ಲಿ ಶಿವಮೊಗ್ಗದ ಎನ್. ರವಿಕುಮಾರ ಟೆಲೆಕ್ಸ್, ತುಮಕೂರಿನ ಬಿದಲೋಟಿ ರಂಗನಾಥ, ಬೆಳಗಾವಿಯ ಡಾ. ಶೋಭಾ ನಾಯಕ, ದಾವಣಗೆರೆಯ ಫೈಜ್ನಟ್ರಾಜ್ ಮತ್ತು ಡಾ. ಮಹಾಂತೇಶ ಪಾಟೀಲ, ಸದಾಶಿವ ಸೊರಟೂರು, ಹಾಸನದ ಮಮತಾ ಅರಸೀಕೆರೆ, ಹುಕ್ಕೇರಿಯ ಸಂತೋಷ ನಾಯಿಕರು ಭಾಗವಹಿಸಲಿದ್ದಾರೆ.

ಸಾಹಿತ್ಯಾಸಕ್ತರು ‘ಸಾಹಿತ್ಯೋತ್ಸವ’ ದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ‘ಸಾಹಿತ್ಯೋತ್ಸವ’ ಸಮಿತಿಯ ಸಂಚಾಲಕ ಮಹೇಶ ಬಳ್ಳಾರಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: