ನಾಳೆಯಿಂದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಹೋರಾಟ

Get real time updates directly on you device, subscribe now.

ಕೊಪ್ಪಳ: ಸೇವಾ ಕಾಯಮಾತಿಗೆ ಆಗ್ರಹಿಸಿ ನವೆಂಬರ್ 23ರಿಂದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಹೋರಾಟ ಆರಂಭಗೊಳ್ಳಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ವೀರಣ್ಣ ಸಜ್ಜನರ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಅತಿಥಿ ಉಪನ್ಯಾಸಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2021ರ ಹೋರಾಟಕ್ಕೆ ಮಣಿದ ಅಂದಿನ ಸರಕಾರ ಗೌರವಧನ ಹೆಚ್ಚಿಸಿದ್ದು ಇತಿಹಾಸ. ಅಂದಿನ ಹೋರಾಟದಲ್ಲಿ ಕೊಪ್ಪಳ ಜಿಲ್ಲೆ ಮುಂಚೂಣಿಯಲ್ಲಿತ್ತು. ಸದ್ಯದ ಆಡಳಿತಾರೂಢ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸುವ ಬಗ್ಗೆ ಪ್ರಣಾಳಿಕೆಯಲ್ಲೇ ತಿಳಿಸಿದೆ. ಶೀಘ್ರ ಚಳಿಗಾಲ ಅಧಿವೇಶನ ಇರುವುದರಿಂದ ಸೇವಾ ಕಾಯಮಾತಿಯ ಬೇಡಿಕೆಯ  ಕೂಗು ಸರಕಾರದ ಕಿವಿ ತಲುಪವೇಕಿದೆ. ಜಿಲ್ಲೆಯ ಎಲ್ಲ ಕಾಲೇಜುಗಳ ಅತಿಥಿ ಉಪನ್ಯಾಸಕರು ಈ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಹೋರಾಟದ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅದಕ್ಕನುಸಾರವಾಗಿ ಜವಾಬ್ದಾರಿ‌ ನಿರ್ವಹಿಸಲು ಸಜ್ಜನರ್ ಕೋರಿದರು. ಅನಿರ್ದಿಷ್ಟಾವಧಿಯ ಒಂದು ದಿನ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲು‌ ನಿರ್ಧರಿಸಲಾಯಿತು.
ಶಿವಣ್ಣ ಸಂಘದ ಗೌರವಾಧ್ಯಕ್ಷರಾಗಿ, ಡಾ. ಜ್ಞಾನೇಶ್ವರ ಪತ್ತಾರ ಖಜಾಂಚಿಯಾಗಿ, ಡಾ.ಸಣ್ಣದೇವೇಂದ್ರಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ, ಗಿರಿಜಾ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ  ಮಹಿಳಾ ಕಾಲೇಜು ಸೇರಿದಂತೆ ವಿವಿಧ ಗ್ರಾಮೀಣ ಕಾಲೇಜುಗಳ ಅತಿಥಿ ಉಪನ್ಯಾಸಕರು ಆಗಮಿಸಿದ್ದರು.

Get real time updates directly on you device, subscribe now.

Comments are closed.

error: Content is protected !!