ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ : ಪುಸ್ತಕ ಪ್ರದರ್ಶನಕ್ಕೆ ಚಾಲನೆ

Get real time updates directly on you device, subscribe now.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿರುವ ಪುಸ್ತಕ ಪ್ರದರ್ಶನಕ್ಕೆ ಚಾಲನೆ ದೊರೆಯಿತು.

ನಗರದ ಸಾಹಿತ್ಯ ಭವನದ ಬಳಿಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ವಟಪರವಿ ಅವರು ಉದ್ಘಾಟಿಸಿ,ಮಾತನಾಡಿ, ಸಾರ್ವಜನಿಕ ಗ್ರಂಥಾಲಯಗಳನ್ನು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು.ನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಆಧುನೀಕರಣಗೊಳಿಸಿ,ಸುಸಜ್ಜಿತ ಗೊಳಿಸಲು ಜಿಲ್ಲಾ ಗ್ರಂಥಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ಶೀಘ್ರದಲ್ಲಿಯೇ ಈ ಗ್ರಂಥಾಲಯದ ಅಭಿವೃದ್ಧಿಯಾಗಲಿದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಮಾತನಾಡಿ,ಗ್ರಾಮೀಣ ಪ್ರದೇಶ,ಸಣ್ಣ ಮತ್ತು ಮಧ್ಯಮ ಪಟ್ಟಣಗಳಲ್ಲಿ ಶಿಕ್ಷಣ,ಓದಿನ ಅಭಿರುಚಿ ಬೆಳೆಸಿ ಸುಶಿಕ್ಷಿತ ನಾಗರಿಕ ಸಮಾಜ ನಿರ್ಮಾಣದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಮಹತ್ವದ್ದು , ಯುವಜನರು ಶಾಲೆ,ಕಾಲೇಜು,ಗ್ರಂಥಾಲಯ ,ಕ್ರೀಡಾಂಗಣಗಳಲ್ಲಿಯೇ ಹೆಚ್ಚು ಕಾಲ ಕಳೆಯಬೇಕು. ಅಂದಾಗ ದೇಶದ ಅಭಿವೃದ್ಧಿಗೆ ಉತ್ತಮ ಯುವಶಕ್ತಿ ರೂಪುಗೊಳ್ಳಲು ಸಾಧ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡೊಳ್ಳಿನ, 14 ನೇ ನವಂಬರ್ 1919 ಭಾರತೀಯ ಗ್ರಂಥಾಲಯ ಚಳುವಳಿಯಲ್ಲಿಯೇ ಮಹತ್ವದ ದಿನ. ಅಖಿಲ ಭಾರತ ಸಾರ್ವಜನಿಕ ಗ್ರಂಥಾಲಯ ಸಮ್ಮೇಳನವನ್ನು ಅಂದಿನ ಮದ್ರಾಸಿನ ಗೋಖಲೆ ಭವನದಲ್ಲಿ ಬರೋಡದ ಗ್ರಂಥಾಲಯದ ನಿರ್ದೇಶಕರಾದ ದಿವಂಗತ ಜೆ.ಎಸ್.ಕುಟಾಲ್ಕರ್ ಅವರು ನೇರವೇರಿಸಿದರು. ಇದರಷ್ಟೇ ಮುಖ್ಯವೆನಿಸುವ ಪುಸ್ತಕ ಪ್ರಿಯರು ಹಾಗೂ ಮಕ್ಕಳ ನೆಚ್ಚಿನ ಚಾಚಾ ಆಗಿದ್ದ ಜವಾಹರಲಾಲ್ ನೆಹರೂ ಅವರು ಜನ್ಮದಿನವೂ ಆಗಿದ್ದೂ ಆ ದಿನದಿಂದಲೇ ಒಂದು ವಾರಗಳ ಕಾಲ ಸಪ್ತಾಹವನ್ನು ಆಚರಿಸಲು ನಿರ್ಧರಿಸಿ 1968 ರಿಂದ ನವಂಬರ್ 14 ರಿಂದ 20 ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ನವೆಂಬರ 20 ರವರೆಗೆ ಪುಸ್ತಕ ಪ್ರದರ್ಶನ ಮುಂದುವರೆಯಲಿದ್ದು ಕಿಟೆಲ್ ರ ನಿಘಂಟು, ಕನ್ನಡದ ಶ್ರೇಷ್ಠ ಕೃತಿಗಳಾದ ಮಲೆಗಳಲ್ಲಿ ಮದುಮಗಳು, ಮೂಕಜ್ಜಿಯ ಕನಸುಗಳು, ಭಾರತ ಸಿಂಧು ರಶ್ಮಿ, ಕಾನೂರು ಹೆಗ್ಗಡಿತಿ, ಮನೋರಮಾ ಇಯರ್ ಬುಕ್, ಶಿವರಾಮ ಕಾರಂತ ಅವರ ಬಾಲ ಪ್ರಪಂಚ ಸಂಪುಟ, ಮಾಸ್ತಿ ಸಂಪುಟ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯ ಮಹಾತ್ಮಾ ಗಾಂಧೀಜಿ ಅವರ ಸಂಪುಟಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಧಿಸಿದ ಪುಸ್ತಕಗಳು ಇವೆ.

ಅಳಿಲುಗಳ ಸೇವಕನಿಗೆ ಸನ್ಮಾನ

ನಗರದ ಬಾಲಕರ ಸ.ಪ.ಪೂ‌‌.ಕಾಲೇಜಿನ ಆವರಣದಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ, ಅಳಿಲುಗಳಿಗೆ ಪ್ರತಿ ದಿನವೂ ತಪ್ಪದೇ ಊಟ ಹಾಕುವ ಕಾಯಕವನ್ನು ತಪ್ಪದೇ ಮಾಡಿಕೊಂಡು ಬರುತ್ತಿರುವ ಅರೆಕಾಲಿಕ ನೌಕರರಾದ ರಂಗಪ್ಪ ಅವರನ್ನು ಗೌರವಿಸಿ ಸನ್ಮಾನ ಮಾಡಲಾಯಿತು.

ಸರ್ಕಾರಿ ರಜಾ ದಿನಗಳಲ್ಲೂ ನಿಗದಿತ ಸಮಯಕ್ಕೆ ಬಂದು ಕಾಲೇಜಿನ ಆವರಣದಲ್ಲಿರುವ ಗಿಡಗಳ ಬಡ್ಡಿಯ ಸುತ್ತಲೂ ಆಹಾರ ಹಾಕುವ ಇವರ ಕಾಳಜಿಯಿಂದ ಈ ಆವರಣದಲ್ಲಿ ಅಳಿಲಿನ ಸಂತತಿಯೂ ಹೆಚ್ಚಿದೆ ಎಂದು
ಉಪನ್ಯಾಸಕ ಬಸವರಾಜ ಸವಡಿ ಹೇಳಿದರು.

ಶಿಕ್ಷಕ, ರಂಗ ಕಲಾವಿದ ಪ್ರಾಣೇಶ ಪೂಜಾರ ಮಕ್ಕಳ ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ವಚನ,ಹಾಡುಗಳನ್ನು ಪ್ರಸ್ತುತ ಪಡಿಸಿದರು.

ಶಿಕ್ಷಕರ ಕಲಾಸಂಘದ ಅಧ್ಯಕ್ಷ ರಾಮಣ್ಣ ಶ್ಯಾವಿ, ಶಿಕ್ಷಕ ಯಮನೂರಪ್ಪ ಭಜಂತ್ರಿ, ಪತ್ರಕರ್ತ ಮಾರುತಿ ಕಟ್ಟಿಮನಿ ಮತ್ತಿತರರು ಹಾಜರಿದ್ದರು. , ಯೋಗಾನರಸಿಂಹ ಪಿ.ಕೆ. ವಂದಿಸಿದರು

Get real time updates directly on you device, subscribe now.

Comments are closed.

error: Content is protected !!
%d bloggers like this: