ಪದವಿ ಹಂತದ ಶಿಕ್ಷಣವು ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಪರ್ವ ಕಾಲ: ಪ್ರೊ. ಬಿ. ಕೆ ರವಿ

Get real time updates directly on you device, subscribe now.

 
ಕೊಪ್ಪಳ : ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಕಿಲ್ಲ. ನಿರಂತರ ಪ್ರಯತ್ನಗಳು ಸಾಧನೆಗೆ ಪೂರಕವಾಗಿ ಸಹಾಯ ಮಾಡುತ್ತವೆಯೆಂದು ಕೊಪ್ಪಳ ವಿಶ್ವ ವಿದ್ಯಾಲಯದ  ಕುಲಪತಿಗಳಾದ ಪ್ರೊ. ಬಿ. ಕೆ ರವಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ‌ ಗುಣಮಟ್ಟ ಭರವಸಾ ಕೋಶದ  ಸಹಯೋಗದಡಿ ಶುಕ್ರವಾರ ನಡೆದ 2023-24ನೇ ಸಾಲಿನ  ಪ್ರಥಮ ಸೆಮೆಸ್ಟರ್ ಬಿ.ಎ , ಬಿ.ಕಾಂ ,  ಬಿ.ಎಸ್ಸಿ , ಬಿ.ಬಿ.ಎ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಇತರೇ ಚಟುವಟಿಕೆಗಳನ್ನು ಪರಿಚಯಿಸುವ ಅಭಿವಿನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪದವಿ ಹಂತದ ಶಿಕ್ಷಣವೂ  ವಿಷಯಗಳನ್ನು  ಅರ್ಥ ಮಾಡಿಕೊಳ್ಳುವ ಪರ್ವ ಕಾಲ. ಈ  ಪದವಿ ಹಂತವು  ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿ ಸಹಾಯ ಮಾಡುತ್ತದೆ. ಜೊತೆಗೆ  ಇದು ಸ್ಪರ್ಧಾ ಕಾಲ. ಕಷ್ಟ ಪಟ್ಟು ಓದಿದರೆ ಮಾತ್ರ ಯಶಸ್ಸು ದೊರೆಯುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನ ಸಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ತಿಮ್ಮಾರೆಡ್ಡಿ  ಮೇಟಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ  ಪುರಸ್ಕೃತ ರಾದ ಹುಚ್ಚಮ್ಮಚೌದ್ರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಂಜುನಾಥ ಗೊಂಡಬಾಳ, ತೋಟಪ್ಪ ಕಾಮನೂರ ಆಗಮಿಸಿದ್ದರು. ವೇದಿಕೆಯಲ್ಲಿ ಐ. ಕ್ಯೂ. ಎ. ಸಿ ಸಂಚಾಲಕರು ಮತ್ತು ವಾಣಿಜ್ಯ ಪ್ರಾಧ್ಯಾಪಕರಾದ ಡಾ. ವಾರುಣಿ,  ಕನ್ನಡ ವಿಭಾಗ ಮುಖ್ಯಸ್ಥರಾದ ಗಾಯತ್ರಿ ಭಾವಿಕಟ್ಟಿ,  ನಿರ್ವಹಣಾ ಶಾಸ್ತ್ರ ವಿಭಾಗದ ಶಿವನಾಥ್,  ಭೌತ ಶಾಸ್ತ್ರ ವಿಭಾಗ ಸಿದ್ದಲಿಂಗೇಶ,  ಇಂಗ್ಲಿಷ್ ವಿಭಾಗದ ಶಿವಣ್ಣ ಇದ್ದರು. 
ಕನ್ನಡ ವಿಭಾಗದ ಮುಖ್ಯಸ್ಥರಾದ ಗಾಯತ್ರಿ ಭಾವಿಕಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಶ್ವಿನ  ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಟಿ.ವಿ.ವಾರುಣಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬಸವರಾಜ ಕರುಗಲ್ ಅತಿಥಿ ಪರಿಚಯ ಮಾಡಿಕೊಟ್ಟರು. ಕನ್ನಡ ವಿಭಾಗದ ಉಪನ್ಯಾಸಕ ಮಹಾಂತೇಶ್ ನೆಲಾಗಣಿ ನಿರೂಪಿಸಿದರೆ,  ಡಾ.ಪ್ರಕಾಶ್ ಬಳ್ಳಾರಿ ವಂದಿಸಿದರು.
ಸಮಾರಂಭದಲ್ಲಿ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: