ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯಿರಿ: ದೊಡ್ಡನಗೌಡ ಪಾಟೀಲ್
ಕುಷ್ಟಗಿ

ಸಮಾಜದ ನೈಜ ಸಮಸ್ಯೆಗಳನ್ನು ಗುರುತಿಸಿ, ವಸ್ತುನಿಷ್ಠ ವರದಿಗಳ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಪತ್ರಕರ್ತರಿಂದಾಗಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ತಾಲೂಕಿನ ಹನುಮಸಾಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಷ್ಟಗಿ ತಾಲೂಕು ಘಟಕದಿಂದ ಆಯೋಜಿಸಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಳ್ಳು ಸುದ್ದಿಗಳಿಗೆ ಅವಕಾಶ ನೀಡದೆ ಜನಪರ ವರದಿಗಳಿಗೆ ಆದ್ಯತೆ ನೀಡಬೇಕು. ಸಂಕಷ್ಟಗಳ ನಡುವೆಯೂ ಪತ್ರಿಕಾ ದಿನಾಚರಣೆ ಆಯೋಜಿಸಿರುವುದು ಶ್ಲಾಘನೀಯವಾಗಿದ್ದು, ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಉಪನ್ಯಾಸಕ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ವಿಚಾರವನ್ನೇ ಆಧರಿಸಿ ಸುದ್ದಿ ಮಾಡುವುದು ಸರಿಯಲ್ಲ. ಪತ್ರಕರ್ತರು ಸಾಮಾಜಿಕ ಕಳಕಳಿ ಹೊಂದಿರಬೇಕು. ಎಐ ತಂತ್ರಜ್ಞಾನ ಬಂದಿರುವ ಹಿನ್ನೆಲೆಯಲ್ಲಿ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದರು.
ಸಂಘದ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬಾಕಳೆ ಮಾತನಾಡಿ, ಪತ್ರಿಕೋದ್ಯಮ ಸರ್ಕಾರ–ಜನರ ನಡುವಿನ ಸೇತುವೆಯಾಗಿದೆ. ಪತ್ರಕರ್ತರು ಪೂರ್ವಗ್ರಹವಿಲ್ಲದೆ ಸತ್ಯಾಸತ್ಯತೆ ಪರಿಶೀಲಿಸಿ, ಆಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ್ ಮಾತನಾಡಿ, ಪತ್ರಿಕೋದ್ಯಮ ಪವಿತ್ರ ವೃತ್ತಿಯಾಗಿದ್ದು ನೊಂದವರಿಗೆ ನ್ಯಾಯ, ಯೋಜನೆಗಳ ಕುರಿತು ಜಾಗೃತಿ, ಕೃಷಿ, ಉದ್ಯೋಗ ಹಾಗೂ ಕೈಗಾರಿಕೆ ಅಭಿವೃದ್ಧಿಗೆ ಪೂರಕವಾದ ಬರಹಗಳು ಮೂಡಿಬರಬೇಕು ಎಂದರು.
ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಸಮಾಜದಲ್ಲಿ ಜಾಗೃತಿ ಹಾಗೂ ಅಭಿವೃದ್ಧಿಪರ ವಿಚಾರಗಳನ್ನು ತಿಳಿಸುವ ಕೆಲಸ ಮಾಡಬೇಕು. ಗ್ರಾಮೀಣ ಮಟ್ಟದಲ್ಲಿಯೂ ಪತ್ರಿಕಾ ದಿನಾಚರಣೆ ಆಯೋಜಿಸಬೇಕು ಎಂದರು.
ಸಂಘದ ತಾಲೂಕಾಧ್ಯಕ್ಷ ಪವಾಡೆಪ್ಪ ಚೌಡ್ಕಿ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ಉತ್ತಮ ವರದಿಗಾರ ಪ್ರಶಸ್ತಿಗೆ ಆಯ್ಕೆಯಾದ ಪರಶಿವಮೂರ್ತಿ ಮಾಟಲದಿನ್ನಿ, ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಬಸವರಾಜ ಪಲ್ಲೇದ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರುದ್ರಪ್ಪಗೌಡ ಗೌಡರ, ಸಂಗಮೇಶ ಸಿಂಗಾಡಿ, ಫಕೀರಪ್ಪ ಚಳಗೇರಿ, ನಜಿರಸಾಬ ಮೂಲಿಮನಿ, ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ದುರ್ಗೇಶ ಮಡಿವಾಳರ, ಗವಿಸಿದ್ದಪ್ಪ ಶಿರೂರು, ಸೂಚಪ್ಪ ಭೋವಿ, ಆಶೀಫ್ ಡಾಲಾಯತ, ಶ್ರೀನಿವಾಸ ಜಹಾಗೀರದಾರ, ಮಂಜುನಾಥ ಹುಲ್ಲೂರು, ಚಂದಪ್ಪ ಕರಡಿ, ಜಯದೇವಿ ಉಪ್ಪಿನ್, ಮಲ್ಲಿಕಾರ್ಜುನ ದೋಟಿಹಾಳ, ಈರಣ್ಣ ಬಾದಾಮಿ, ವಿ ಆರ್ ತಾಳೀಕೋಟಿ, ಎನ್. ಶ್ಯಾಮಿದ್, ಸಾವಿತ್ರಿ, ರೇಣುಕಾ ಪುರದ, ಶೋಭಾ ಪುರ್ತಗೇರಿ, ಮಲ್ಲಮ್ಮ, ಶಾಂತಾ ಸೇರಿದಂತೆ ಪತ್ರಕರ್ತರು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.