2028ಕ್ಕೂ ಡಿ.ಕೆ.ಶಿವಕುಮಾರ್‌ ಅವರೇ ಸಿಎಂ: ಸಚಿವ ಶಿವರಾಜ್ ತಂಗಡಗಿ

0

Get real time updates directly on you device, subscribe now.

ಕೊಪ್ಪಳ: ಆ.15  2028ಕ್ಕೂ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ ಶಿವರಾಜ್.ಎಸ್.ತಂಗಡಗಿ  ಹೇಳಿದ್ದಾರೆ.‌

2028ಕ್ಕೆ‌ ಪಕ್ಷದ ಹಿರಿಯ ನಾಯಕರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದೇವೆ ಎನ್ನುತ್ತಿದ್ದರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಸಹಜವಾಗಿ ಹಿರಿಯರು ತಮ್ಮ ಭಾವನೆ‌ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ 2028ಕ್ಕೂ ಕೂಡ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದರು.‌

 

ಜಿಲ್ಲೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಂತ್ರಿ ಪದವಿಯ ಆಕಾಂಕ್ಷಿಯಾಗಿದ್ದರು. ಮುಂದಿನ ದಿನಗಳಲ್ಲಿ‌‌  ಹಿಟ್ನಾಳ್‌ ಅವರು ಸಚಿವರಾಗುತ್ತಾರೆ ಎಂಬ ವಿಶ್ವಾಸವಿದೆ. ನಮ್ಮಲ್ಲಿ‌ ಯಾವುದೇ ಮುನಿಸುಗಳಿಲ್ಲ. ಜಿಲ್ಲೆಯ ಶಾಸಕರೆಲ್ಲ ಒಟ್ಟಾಗಿದ್ದೇವೆ ಎಂದು ತಿಳಿಸಿದರು.

 

ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ದೇಶಕ್ಕೆ‌ ಮಾದರಿಯಾದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ‌-ಟಿಪ್ಪಣಿ ಮಾಡಿದ್ದ ಬಿಜೆಪಿಗರು, ತಮ್ಮ‌ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿರುವ ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ. ಬಿಜೆಪಿಯಲ್ಲಿ ಅಶೋಕ್‌‌‌ ಅವರನ್ನು ಕಂಡರೆ,‌ ಸುನೀಲ್ ಕುಮಾರ್ ಅವರಿಗೆ ಆಗಲ್ಲ, ಸುನೀಲ್‌ ಕಂಡರೆ ಸಿ.ಟಿ.ರವಿ ಅವರಿಗೆ ಆಗಲ್ಲ.‌ ತಮ್ಮ ಪಕ್ಷದಲ್ಲಿನ ಸಮಸ್ಯೆಗಳನ್ನು ಬಿಜೆಪಿಯವರು ಮೊದಲು ಬಗೆಹರಿಸಿಕೊಳ್ಳಲಿ ಎಂದು ಛೇಡಿಸಿದರು.‌

 

ಎಲ್ಲಾ ಸಂಘಟನೆಗೂ ಅನುಮತಿ ಕಡ್ಡಾಯ: ಸಾರ್ವಜನಿಕ ಪ್ರದೇಶಗಳಲ್ಲಿ ಆರ್ ಎಸ್ಎಸ್ ಚಟುವಟಿಕೆಗೆ ಬ್ರೇಕ್ ಹಾಕಲು ಮುಂದಾಗಿದೆಯಲ್ಲ ಎಂಬ ಪ್ರಶ್ನೆಗೆ,  ಸಂಘಟನೆಗಳು ಸಭೆ,‌  ಕಾರ್ಯಕ್ರಮ ನಡೆಸಲು ಅನುಮತಿ‌ ಕಡ್ಡಾಯ ಎಂದು ಹೇಳಿದ್ದೇವೆ. ಇದಕ್ಕೆ ಆರ್ ಎಸ್ ಎಸ್ ಸಂಘಟನೆ ಹೊರತಾಗಿಲ್ಲ. ಮೊದಲು ಆರ್ ಎಸ್ ಎಸ್ ನವರು  ಸಂಘಟನೆಯ ನೊಂದಣಿ ಬಗ್ಗೆ ಮಾಹಿತಿ ನೀಡಲಿ.‌ ಬಿಜೆಪಿಗರು ತಾಕತ್ತಿದ್ದರೆ, ರಾಷ್ಟ್ರ ಧ್ವಜವನ್ನು ಆರ್ ಎಸ್ ಎಸ್ ಕೇಂದ್ರ ಕಚೇರಿ ಮೇಲೆ‌ ಹಾರಿಸಲಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕಾಂಗ್ರೆಸ್ ನದ್ದು ಮಹತ್ತರ ಪಾತ್ರವಿದೆ. ಬಿಜೆಪಿಯವರಿಂದ ದೇಶ ಪ್ರೇಮ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

 

ಪ್ರಸ್ತುತ ನಿಮಗೆ ಹಂಚಿಕೆ ಮಾಡಿರುವ ಖಾತೆ ಬಗ್ಗೆ ಅತೃಪ್ತಿ ಇದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿ, ನನಗೆ ಯಾವುದೇ ಅತೃಪ್ತಿ‌ ಇಲ್ಲ. ಸಮಾಜ ಕಲ್ಯಾಣ ಇಲಾಖೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಆದರೆ ಹಿರಿಯರಾದ ಕಾರಣ ಮುನಿಯಪ್ಪ ಅವರಿಗೆ ಆ ಇಲಾಖೆಯನ್ನು ನೀಡಿರುವುದಾಗಿ ಸಿಎಂ ಹೇಳಿದ್ದಾರೆ. ಮುಂದುವರೆಸಲಾಗಿರುವ ಖಾತೆಯನ್ನು ಸರ್ಮಥವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!