ಕನಕಗಿರಿಯಲ್ಲಿ ಶ್ರೀ ಈರಣ್ಣ ದೇವರ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ
ಏಪ್ರಿಲ್ 27 ರಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.

ಕನಕಗಿರಿ: ಪಟ್ಟಣದ 9ನೇ ವಾರ್ಡಿನ ಸುಳೇಕಲ್ ಓಣಿಯಲ್ಲಿ ಈಗಾಗಲೇ ಇರುವ ದೇವಸ್ಥಾನದ ಅಭಿವೃದ್ಧಿ ಕೈಗೊಂಡಿದ್ದು, ಈರಣ್ಣ ದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವು ಏಪ್ರಿಲ್ 29 ರಂದು ಅದ್ಧೂರಿಯಾಗಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 27 ರಿಂದಲೇ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ.
ಏಪ್ರಿಲ್ 27 ಸೋಮವಾರ ಬೆಳಿಗ್ಗೆ 9:00 ಗಂಟೆಗೆ ವಾದ್ಯ ಮೇಳಗಳೊಂದಿಗೆ ಶ್ರೀ ಕನಕಾಚಲಪತಿ ದೇವಸ್ಥಾನದಿಂದ 9ನೇ ವಾರ್ಡಿನಲ್ಲಿರುವ ಶ್ರೀ ಈರಣ್ಣ ದೇವಸ್ಥಾನದವರೆಗೆ ಶ್ರೀ ಈರಣ್ಣ ದೇವರ ಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ.
ಏಪ್ರಿಲ್ 28 ಮಂಗಳವಾರ ಜಲಾದಿವಾಸ, ಧಾನ್ಯಾದಿವಾಸ, ಪುಷ್ಪಾದಿವಾಸ ಹಾಗೂ ಕ್ಷೀರಾಧಿವಾಸಗಳಂತಹ ವಿಶೇಷ ಪೂಜೆಗಳು ನಡೆಯಲಿವೆ. ಜೊತೆಗೆ ಹೋಮ-ಹವನ ಹಾಗೂ ಸಾರ್ವಜನಿಕರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಏಪ್ರಿಲ್ 29 ಬುಧವಾರ ಬೆಳಿಗ್ಗೆ 9:00 ಗಂಟೆಗೆ ಶುಭ ಮುಹೂರ್ತದಲ್ಲಿ ಶ್ರೀ ಈರಣ್ಣ ದೇವರ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಮಧ್ಯಾಹ್ನ 1:00 ಗಂಟೆಗೆ ಸಾರ್ವಜನಿಕರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ದೇವಸ್ಥಾನದ ಭಕ್ತರಾದ ಶ್ರೀನಿವಾಸ, ಮೇಣೆದಾಳ ಬಂಧುಗಳು ವಿನಂತಿಸಿದ್ದಾರೆ.
“ಕನಕಗಿರಿಯ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಈ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತನು-ಮನ-ಧನದಿಂದ ಸೇವೆ ಸಲ್ಲಿಸಿ ಶ್ರೀ ಈರಣ್ಣ ದೇವರ ಕೃಪೆಗೆ ಪಾತ್ರರಾಗಬೇಕು” ಎಂದು ಶ್ರೀ ಈರಣ್ಣ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಮಹಿಪತಿ ಹಾಗೂ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.