ಉಸಿರಿದ್ದರೆ ಪ್ರವಚನ, ಜೀವ ಉಳಿಸಲು ಗವಿಶ್ರೀಗಳು ಮುಂದಾಗಲಿ: ಕುಂ. ವೀರಭದ್ರಪ್ಪ

0

Get real time updates directly on you device, subscribe now.

ಗದುಗಿನ ತೋಂಟದ ಶ್ರೀಗಳು ನಮಗೆ ಮಾದರಿ: ಕೋರಣೇಶ್ವರ ಸ್ವಾಮೀಜಿ

ಹುಟ್ಟುವ ಮಕ್ಕಳಲ್ಲಿ ಹೃದಯ ರಂದ್ರ, ದುರಾದೃಷ್ಟ : ಶಾರದಾ ಗೋಪಾಲ್

ಕೊಪ್ಪಳ : ಈ ಸಮಾಜ ನೂರಾರು ಕಾಲ ಸುಖವಾಗಿರಬೇಕಾದರೆ ಗುಡಿ ಕೈಗಾರಿಕೆಗಳು ಇರಬೇಕೆಂದು ಗಾಂಧೀಜಿ ಹೇಳಿದ ಮಾತು ಉಲ್ಲೇಖ ಮಾಡಿ ನಾಡಿನ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕುಂ. ವೀರಭದ್ರಪ್ಪ ಅವರು ಮಾತನಾಡಿದರು. ನಾನು ಹಿರೇಬಗನಾಳ, ಹಾಲವರ್ತಿ ಎನ್ನುವ ಕಾರ್ಖಾನೆ ಬಾಧಿತ ಹಳ್ಳಿಗಳಿಗೆ ಹೋಗಿ ಜನರನ್ನು ಮಾತನಾಡಿಸಿದಾಗ ಅವರ ಮುಖದಲ್ಲಿ ಲವಲವಿಕೆ ಇಲ್ಲ. ಆ ಜನ ಬದುಕುವ ಆಸೆಯನ್ನೇ ಬಿಟ್ಟವರಂತೆ ಕಂಡರು. ಜನ ಯಾವುದೇ ಪಕ್ಷದ ಮುಖಂಡರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ. ಒಂದು ರೀತಿ ಬಸವಳಿದು, ಬೇಸರಗೊಂಡು ನಮ್ಮನ್ನು ಯಾರು ಕಾಪಾಡುತ್ತಾರೆ ಎಂದು ಮುಗಿಲು ನೋಡುತ್ತಿದ್ದಾರೆ. ಇಲ್ಲಿನ ಗವಿಶ್ರೀಗಳು ಪ್ರವಚನ ಮಾಡುವುದಾದರೆ ಮೊದಲು ಈ ಜನರ ಜೀವ ಉಳಿಸಲಿ. ಸರ್ಕಾರದ ವಿರುದ್ಧ ಧ್ವನಿ ಎತ್ತಲಿ. ಈ ಹೋರಾಟ ಆರಂಭ ಮಾಡಿದ ಗವಿಶ್ರೀ ತಾರ್ಕಿಕ ಅಂತ್ಯವನ್ನು ಅವರೆ ಕಾಣಿಸಬೇಕು, ಯಾಕೆ ಹಿಂದಡಿ ಇಟ್ಡರು ಎನ್ನುವದು ನಿಗೂಢವಾಗಿದೆ ಎಂದರು.
ಬಾಧಿತ ಹಳ್ಳಿ ಪ್ರದೇಶ ಸುಟ್ಟ ಮಸಣವಾಗಿ ಕಪ್ಪಿಟ್ಟಂತೆ ಕಾಣುತ್ತಿದೆ. ಅಲ್ಲಿಗೆ ಹೋದ ವೈದ್ಯರು ಇಲ್ಲಿರಬೇಡಿ, ದನಕರು ಕಟ್ಟಬೇಡಿ ಎಂದು ಸಲಹೆ ನೀಡುತ್ತಾರೆ. ಮತ್ತೆ ಈ ಜನ ಎಲ್ಲಿಗೆ ಹೋಗಬೇಕು.? ಸರ್ಕಾರದ ಹತ್ತಿರ ಇದಕ್ಕೆ ಉತ್ತರ ಇದೆಯೇ? ಗಂಗಾ ಸ್ನಾನ, ತುಂಗಾ ಪಾನ ಎನ್ನುವ ಮಾತಿನಂತೆ ತುಂಗಾ ಪಾನ ಮಾಡಬೇಡಿ ಎಂದು ಸರ್ಕಾರ ಎಚ್ಚರಿಸುವ ಮಟ್ಟಿಗೆ ನೀರು ಮಾಲಿನ್ಯ ಮಾಡಿದ್ದು ಇದೇ ಫ್ಯಾಕ್ಟರಿಗಳಲ್ಲವೆ ಎಂದು ಪ್ರಶ್ನೆ ಮಾಡಿದರು. ಹಳ್ಳಿಯ ಒಬ್ಬ ಮಹಿಳೆ ಮಕ್ಕಳಿಗೆ ಇಂತಹ ರೋಗ ಬಂದರೆ ನಮ್ಮ ಶವಗಳಿಗೆ ಸಂಸ್ಕಾರ ಮಾಡಲು ಯಾರಿರುತ್ತಾರೆ. ಇಲ್ಲಿಗೆ ಅಧಿಕಾರಿಗಳು, ರಾಜಕಾರಣಿಗಳು ಬರುತ್ತಾರೆ. ಅಯ್ಯೊ ಪಾಪ ಎನ್ನುತ್ತಾರೆ. ಮುಂದೆ ಹೋಗಿ ಮರೆತು ಬಿಡುತ್ತಾರೆ. ನಮ್ಮನ್ನು ಈ ಕಷ್ಟದಿಂದ ಪಾರು ಮಾಡುವವರು ಯಾರು ಎಂದು ನಮ್ಮನ್ನೇ ಕೇಳುತ್ತಾರೆ. ತಾಯಿ ಎದೆಹಾಲು ನಂಜಾಗಿ ಕೊಲುವೆಡೆ ಮತ್ತಾರಿಗೇಳಲಿ ಎನ್ನುವ ಶರಣರ ವಚನ ಉಲ್ಲೇಖ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಆಳಂದ ವಿರಕ್ತ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಈ ಹೋರಾಟ ಅತ್ಯಂತ ಸಾರ್ಥಕ, ಸಾತ್ವಿಕವಾಗಿದ್ದು. ಜೀವ, ಆರೋಗ್ಯ, ಭೂಮಿ, ಕೃಷಿ ಉಳಿಸಿಕೊಳ್ಳಲು ನಡೆಸಿದ ನಿಮ್ಮ ಹೋರಾಟ ಗದುಗಿನ ತೋಂಟದ ಶ್ರೀ ಸಿದ್ದಲಿಂಗ ಸ್ವಾಮಿಗಳೆ ಪ್ರೇರಣೆಯಾಗಿದ್ದಾರೆ. ಇಲ್ಲಿ ಜಾನುವಾರುಗಳು ನೀರು ಇಲ್ಲದೆ, ಬಸಾಪುರ ಕೆರೆಯನ್ನು ಬಲ್ಡೋಟ ನುಂಗಿದಾಗ ಗೋರಕ್ಷಕರು ಎಲ್ಲಿದ್ದರು, ಈಗಲಾದರೂ ಮುಂದೆ ಬರಬೇಕು, ಅವರಿಗೆ ಈ ಗೋವುಗಳು ನೆನಪಾಗುವುದಿಲ್ಲವೇ? ದೇವರ ದಾಸಿಮಯ್ಯನ ವಚನ ಉಲ್ಲೇಖ ಮಾಡಿ ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ ಎಂದಿರುವಂತೆ, ಈ ಸರ್ಕಾರಗಳು ಕಂಪನಿ ಕಾರ್ಖಾನೆಗಳ ದಾನವೇ ಎನ್ನುವಂತೆ ನಡೆದುಕೊಳ್ಳುತ್ತಿವೆ. ಬಗನಾಳ ಮಹಿಳೆಯೋರ್ವರು ನೋವು ತೋಡಿಕೊಂಡು ಬೆಳಿಗೆದ್ದು ಬಾಯಿಂದ ಉಗಿದಾಗ ಬರೀ ಕಪ್ಪು ಉಗುಳು ಬರುತ್ತದೆ. ಮೂಗಿನಿಂದಲೂ ಕಪ್ಪು ದ್ರವವೇ ಬರುತ್ತದೆಂದು ಹೆಳುತ್ತಾರೆ. ಸರ್ಕಾರಗಳು ಬದಲಾದರೂ ಅವರ ಧೋರಣೆ ಬದಲಾಗಲಿಲ್ಲ. ಎಲ್ಲಾ ಧೋರಣೆಗಳು ನಿಸರ್ಗ ನಾಶ ಮಾಡುವುದೆ ಆಗಿದೆ. ನಾನು ಈ ಹೋರಾಟಕ್ಕಾಗಿ ಹಲವು ಸ್ವಾಮಿಗಳೊಂದಿಗೆ ಇಲ್ಲಿಯೆ ಇದ್ದು ಹೋರಾಡಲು ಸಿದ್ಧ. ಗವಿಶ್ರೀ ಮುಂದೆ ನಿಲ್ಲುವ ಕಾಲ ಇದು ಎಂದರು.

ಧಾರವಾಡ ಪರಿಸರ, ಮಹಿಳಾಪರ ಬರಹಗಾರರಾದ ಶಾರದಾ ಗೋಪಾಲ್ ಅತ್ಯಂತ ಭಾವುಕರಾಗಿ ಮಾತನಾಡಿ, ಮೂರು ವರ್ಷದ ಮಗುವಿಗೆ ಪಾರ್ಶ್ವವಾಯು, ಹುಟ್ಟುವಾಗಲೇ ಹೃದಯರಂದ್ರ, ಏನಿದು ಆಶ್ಚರ್ಯ ಮಹಿಳೆಯರು ಗರ್ಭದರಿಸುತ್ತಿಲ್ಲ. ಅಂಗವಿಕಲ ಮಕ್ಕಳು, ವೈವಾಹಿಕ ಸಂಬಂಧಗಳಿಗೆ ಹಿನ್ನೆಡೆ, ಯಾರೂ ಸಂಬಂಧ ಬೆಳೆಸಲು ಮುಂದೆ ಫರುತ್ತಿಲ್ಲ. ತವರು ಮನೆಯಲ್ಲಿ ಮಕ್ಕಳು, ಮಡದಿ ಎಷ್ಟೊಂದು ಸಮಸ್ಯೆಗಳು ಇಲ್ಲಿವೆ. ಈ ಸಮಸ್ಯೆ ಯಾರಿಂದಾಗಿದೆಯೋ ಅವರು ಸದಾಕಾಲ ಮೌನವಾಗಿದ್ಧಾರೆ. ನಮಗೇನೂ ಗೊತ್ತಿಲ್ಲ ಎನ್ನುವ ನಡೆ. ಮತ್ತೆ ಯಾವಾಗ ಈ ಕಷ್ಷ ಪರಿಹಾರವಾಗುವುದು. ಎಂದು ಕಣ್ಣೀರಾದರು.
ಕಲಬುರಗಿ ವಿವಿ ವಿಶ್ರಾಂತ ಉಪಕುಲಪತಿ ಡಾ. ಪ್ರತಾಪ ಸಿಂಗ್ ತಿವಾರಿ, ಗವಿಸಿದ್ದೇಶ್ವರ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಕಲಬುರಗಿ ನಿವಾಸಿ ಎಸ್.ಎಲ್. ಮಾಲಿಪಾಟೀಲ್, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಬೆಂಬಲಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿದರು. ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷೀಯ ಭಾಷಣ ಮಾಡಿದರು.
ಕಾರ್ಯಕ್ರಮವನ್ನು ಮಂಜುನಾಥ ಜಿ. ಗೊಂಡಬಾಳ ನಿರ್ವಹಿಸಿದರು. ಸ್ವಾಗತವನ್ನು ರಾಜೇಶ ಸಸಿಮಠ ಮಾಡಿದರು. ವಂದನಾರ್ಪಣೆಯನ್ನು ಸೌಮ್ಯ ನಾಲ್ವಾಡ ಮಾಡಿದರು.
ಸಮಾವೇಶದಲ್ಲಿ ಡಾ. ಮಂಜುನಾಥ ಸಜ್ಜನ್, ಜ್ಯೋತಿ ಎಂ. ಗೊಂಡಬಾಳ, ಸರೋಜಾ ಬಾಕಳೆ, ಮಾಲಾ ಬಡಿಗೇರ, ಸಾವಿತ್ರಿ ಮುಜುಮದಾರ, ವಿದ್ಯಾ ನಾಲ್ವಾಡ, ವಿಜಯ ದೊರೆರಾಜು, ಭೀಮಸೆನ ಕಲಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಂಜುನಾಥ ಕೆಂಚನಗೌಡ್ರ ಹಾಲವರ್ತಿ, ಗವಿಸಿದ್ದರೆಡ್ಡಿ, ಬಸವರಾಜ ಪೂಜಾರ ಕಾಸನಕಂಡಿ, ಮಹಾದೇವಪ್ಪ ಮಾವಿನಮಡು, ವಿಜಯ ಮಹಾಂತೇಶ ಹಟ್ಟಿ, ಸಿ.ಬಿ. ಪಾಟೀಲ್, ಉಮೇಶ ಗಣಪಾ ಕುಣಿಕೇರಿ, ಮಂಜುನಾಥ ಪಾಟೀಲ್, ಗವಿಸಿದ್ದಪ್ಪ ಹಲಗಿ, ಶರಣು ಶೆಟ್ಟರ್, ಡಿ.ಎಂ. ಬಡಿಗೇರ, ಶರಣು ಗಡ್ಡಿ, ಶರಣು ಪಾಟೀಲ್, ಯಮನೂರಪ್ಪ ಹಾಲಳ್ಳಿ ಅನೇಕರಿದ್ದರು. ಅತಿಥಿಗಳು ಕೆಲವು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿದುಕೊಂಡರು, ಅದನ್ನು ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವದಾಗಿ ಹೇಳಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!