ಭಾಗ್ಯನಗರ ಪಟ್ಟಣ ಪಂಚಾಯತ್: ಬೀದಿ ನಾಯಿಗಳ ಸ್ಥಳಾಂತರಕ್ಕೆ ಸಹಕಾರ ನೀಡಿ

Get real time updates directly on you device, subscribe now.

: ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆ, ಖಾಸಗಿ ಅಥವಾ ಸರ್ಕಾರಿ ಶಾಲಾ ಮತ್ತು ಕಾಲೇಜುಗಳ ಮುಖ್ಯಸ್ಥರುಗಳು ಬೀದಿ ನಾಯಿಗಳ ಸ್ಥಳಾಂತರಕ್ಕೆ ಪಟ್ಟಣ ಪಂಚಾಯಿತಿಗೆ ಅಗತ್ಯ ಸಹಕಾರ ನೀಡಬೇಕೆಂದು ಪ.ಪಂ ಮುಖ್ಯಾಧಿಕಾರಿ ಸುರೇಶ ಬಬಲಾದ ಅವರು ತಿಳಿಸಿದ್ದಾರೆ.

 ಮಾನ್ಯ ಸರ್ವೋಚ್ಛ ನ್ಯಾಯಾಲಯವು Suo Moto WP(Civil) Nos 5 of 2025 ದಿನಾಂಕ: 07.11.2025 ರಂದು ನೀಡಿದ ಆದೇಶದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಿರ್ದೇಶನಗಳನ್ನು ಜಾರಿಮಾಡಿ ಆದೇಶಿಸಿರುತ್ತಾರೆ. ಅದರಂತೆ ಕೆಲವು ಅಂಶಗಳಿಗೆ ಮಾಹಿತಿ ನೀಡಲು ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದಿಂದ ನೀಡಲಾದ ನಿರ್ದೇಶನಗಳನ್ನು ಪಾಲಿಸಬೇಕೆಂದು ತಿಳಿಸಿರುತ್ತಾರೆ.
 ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆ ಖಾಸಗಿ ಅಥವಾ ಸರ್ಕಾರಿ ಶಾಲಾ ಮತ್ತು ಕಾಲೇಜುಗಳ ಮುಖ್ಯಸ್ಥರುಗಳು ತಮ್ಮ ಸಂಸ್ಥೆ ಆವರಣದಲ್ಲಿಯ ಸಂಕೀರ್ಣ ಸೇರಿದಂತೆ ವಾಸವಿರುವ ಬೀದಿ ನಾಯಿಗಳ ಸಂಖ್ಯೆಯನ್ನು ಮೂರು ದಿನಗಳೊಳಗಾಗಿ ಭಾಗ್ಯನಗರ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಲಿಖಿತವಾಗಿ ವಿವರ ಸಲ್ಲಿಸಬೇಕು. ತಮ್ಮ ಸಂಸ್ಥೆಗಳ ಆವರಣದಲ್ಲಿನ ಬೀದಿ ನಾಯಿಗಳ ಸಂಖ್ಯೆಯನ್ನು ನೀಡಿದರೆ, ಬೀದಿ ನಾಯಿಗಳನ್ನು ಸ್ಥಳಾಂತರಿಸಲಾಗುವುದು. ಈ ಕಾರ್ಯಕ್ಕೆ ಸಂಪೂರ್ಣವಾಗಿ ಸಹಕರಿಸಬೇಕು. ತಮ್ಮ ಸಂಸ್ಥೆಗಳಲ್ಲಿ ಬೀದಿನಾಯಿಗಳ ನಿಯಂತ್ರಣ ಮಾಡಲು ಹಾಗೂ ಸಂಸ್ಥೆಯ ಆವರಣದ ಸ್ವಚ್ಛತೆಯನ್ನು ಕಾಪಾಡಲು ತಮ್ಮ ಸಂಸ್ಥೆಯಿAದ ಒಬ್ಬ ಜವಾಬ್ದಾರಿಯುತ ನೌಕರರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಈ ಬಗ್ಗೆ ವಿವರವನ್ನು ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು. ನೇಮಕವಾದ ನೋಡಲ್ ಅಧಿಕಾರಿಯು ಪ.ಪಂ ಕಾರ್ಯಾಲಯದೊಂದಿಗೆ ಸಮನ್ವಯ ಸಾಧಿಸಿ ಸಂಸ್ಥೆಯ ಆವರಣದಲ್ಲಿನ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ಸ್ಥಳಾಂತರಿಸುವಲ್ಲಿ ಕ್ರಮ ವಹಿಸಬೇಕು.
ಬೀದಿ ನಾಯಿಗಳನ್ನು ಸಂಸ್ಥೆಯ ಆವರಣದಿಂದ ಸಂಪೂರ್ಣವಾಗಿ ಸ್ಥಳಾಂತರಿಸುವ ಬಗ್ಗೆ ನೋಡಲ್ ಅಧಿಕಾರಿಯ ಒಪ್ಪಿಗೆಯ ಧೃಡೀಕರಣ ಪತ್ರ ನೀಡಬೇಕು. ನಗರ ಸ್ಥಳೀಯ ಸಂಸ್ಥೆಯಿಂದ ಒಂದು ಬಾರಿ ನಾಯಿಗಳನ್ನು ಆಶ್ರಯ ತಾಣಕ್ಕೆ ಸ್ಥಳಾಂತರಿಸಿದ ನಂತರ ಮತ್ತೆ ಬೇರೆ ಬೀದಿ ನಾಯಿಗಳು ತಮ್ಮ ಸಂಸ್ಥೆಗಳ ಆವರಣದ ಒಳಗೆ ಪ್ರವೇಶಿಸದ ಹಾಗೆ ತಮಗೆ ಸಂಬಂಧಿಸಿದ ಸಂಸ್ಥೆಯ ಕಾಂಪೌಂಡ್, ತಡೆಗೋಡೆ ತಂತಿಬೇಲಿ ನಿರ್ಮಾಣ ಮಾಡಬೇಕು. ಬೇರೆ ಬೀದಿ ನಾಯಿಗಳು ಪುನಃ ಸಂಸ್ಥೆಗಳಲ್ಲಿ ವಾಸ ಮಾಡಿದಲ್ಲಿ ಅದನ್ನು ಸ್ಥಳಾಂತರಿಸುವ ವೆಚ್ಚವನ್ನು ತಮ್ಮ ಸಂಸ್ಥೆಯಿಂದ ಕಡ್ಡಾಯವಾಗಿ ಭರಿಸಬೇಕಾಗುತ್ತದೆ.
ಬೀದಿ ನಾಯಿಗಳು ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಮಾನ್ಯ ಘನ ಸರ್ವೋಚ್ಛ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ. ತಮ್ಮ ಸಂಸ್ಥೆಗಳ ಆವರಣದಲ್ಲಿ ಬೀದಿ ನಾಯಿಗಳು ವಾಸವಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಗರ ಸ್ಥಳೀಯ ಸಂಸ್ಥೆಗಳು ಮೇಲ್ವಿಚಾರಣೆ ಮಾಡಲು ಇಬ್ಬರು ನಗರ ಸ್ಥಳೀಯ ಸಂಸ್ಥೆ ಅಧಿಕಾರಿ, ನೌಕರರ ತಂಡಗಳನ್ನು ನೇಮಿಸಲಾಗಿದ್ದು, ಈ ತಂಡಗಳು ತಮ್ಮ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸುವರು.
ಮಾನ್ಯ ಘನ ಸರ್ವೋಚ್ಛ ನ್ಯಾಯಾಲಯದ ಆದೇಶ ಉಲ್ಲಂಘನೆಯಾದಲ್ಲಿ ನ್ಯಾಯಾಲಯದ ಆದೇಶದಂತೆ ತಮ್ಮ ವಿರುದ್ಧ ಕಾನೂನೂನಿನನುಸಾರ ಕ್ರಮವಹಿಸಲಾಗುವುದೆಂದು ಭಾಗ್ಯನಗರ ಪಟ್ಟಣ ಪಂಚಾಯತ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!