ಬ್ಯಾಟರಾಯನಪುರ-ಅಂತರ ಅಪಾರ್ಟ್ಮೆಂಟ್ ಕ್ರೀಡಾ ಉತ್ಸವಕ್ಕೆ ಸಚಿವ ಕೃಷ್ಣಬೈರೇಗೌಡ ಚಾಲನೆ

ಬೆಂಗಳೂರು ನವೆಂಬರ್ 15:
ಕಾಂಗ್ರೆಸ್ ತಂಡ, ಯುವಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಬಿಜಿ ಸ್ವಯಂ ಸೇವಕರ ಸಂಘದ ಆಶ್ರಯದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಆಯೋಜಿಸಿದ್ದ 3ನೇ ವಾರ್ಷಿಕ ʼಇಂಟರ್ ಅಪಾರ್ಟ್ಮೆಂಟ್ ಸ್ಪೋರ್ಟ್ಸ್ ಫೆಸ್ಟ್-2025ʼ ಅನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಪಿಕಲ್ಬಾಲ್ ಆಟ ಆಡುವ ಮೂಲಕ ಉದ್ಘಾಟಿ ಸಿದರು.
ನಂತರ ಮಾತನಾಡಿದ ಅವರು, ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯಲ್ಲಿ ಹಲವಾರು ಅಪಾರ್ಟ್ಮೆಂಟ್ಗಳಿದ್ದು, ಇಲ್ಲಿನ ನಿವಾಸಿಗಳಿಗೆ ಸುತ್ತಮುತ್ತಲ ಬಡಾವಣೆಗಳ ಜನರ ಸಂಪರ್ಕವೇ ಇರುವುದಿಲ್ಲ; ಈ ದಿಸೆಯಲ್ಲಿ ಇವರಿಬ್ಬರ ನಡುವೆ ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಹಾಗೂ ಕ್ಷೇತ್ರವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ಈಗಾಗಲೆ 4 ಸುಸಜ್ಜಿತ ಒಳಾಂಗಣ ಕ್ರೀಡಾಂಗಣಗಳನ್ನು ಸ್ಥಾಪಿಸಲಾಗಿದ್ದು, ಜಕ್ಕೂರು ಸಮೀಪದ ಡಾ.ಶಿವರಾಮಕಾರಂತ ಬಡಾವಣೆಯಲ್ಲಿ ಮತ್ತೊಂದು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಪ್ರಗತಿಯಲ್ಲಿದೆ. ಈ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವುದರ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡು, ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬೇಕು.; ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕೆಂಬ ಉದ್ದೇಶದಿಂದ ಪ್ರತಿವರ್ಷ ಕ್ರೀಡಾ ಉತ್ಸವ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘಟಕಿ ಮೀನಾಕ್ಷಿ ಶೇಷಾದ್ರಿ ಮಾತನಾಡಿ, ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಆಯೋಜಿಸಿರುವ ಈ ಕ್ರೀಡಾ ಉತ್ಸವದಲ್ಲಿ 8 ಪ್ರದೇಶಗಳಲ್ಲಿ ಕ್ರೀಡಾಕೂಟ ನಡೆಯುತ್ತಿದೆ. ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಚೆಸ್, ಕೇರಮ್, ಟೆಬಲ್ ಟೆನ್ನಿಸ್, ಹಗ್ಗ-ಜಗ್ಗಾಟ, ಬ್ಯಾಡ್ಮಿಂಟನ್ ಸೇರಿದಂತೆ ಒಟ್ಟು 14 ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, 3600 ಜನರು ಭಾಗವಹಿಸಿದ್ದಾರೆ. ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಬೆಂಗಳೂರಿನಲ್ಲಿಯೇ ಪ್ರಪ್ರಥಮವಾಗಿ ಇಂತಹ ವಿನೂತನ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಇಂದು ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಭಾನುವಾರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಸಂಜೆ 4 ಗಂಟೆಗೆ ಸಂಗೀತ ಕಾರ್ಯಕ್ರಮದ ನಂತರ ವಿಜೇ ತರಿಗೆ ಆಕರ್ಷಕ ಟ್ರೋಫಿ, ನಗದು ಹಾಗೂ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಪಾರ್ತಿಬರಾಜನ್, ವಿ.ಹರಿ, ಎಚ್.ಎ.ಶಿವಕುಮಾರ್, ಹನುಮಂತಿ, ಕೆ.ದಿಲೀಪ್ಕುಮಾರ್ ಮತ್ತಿತ ರರು ಉಪಸ್ಥಿತರಿದ್ದರು.
Comments are closed.