ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ವಕೀಲರ ಕಾರ್ಯ ಮಹತ್ವದ್ದಾಗಿದೆ – ಉಪಲೋಕಾಯುಕ್ತ ಬಿ.ವೀರಪ್ಪ

0

Get real time updates directly on you device, subscribe now.

 : ಸಾಮಾಜಿಕ ಜೀವನದಲ್ಲಿ ತೊಂದರೆಗೊಳಗಾದ ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ವಕೀಲರ ಕಾರ್ಯ ಮಹತ್ವದ್ದಾಗಿದೆ ಎಂದು ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
 ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿರುವ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ-1988 ರಡಿಯಲ್ಲಿ ವಕೀಲರ ಪಾತ್ರದ ಕುರಿತು ಉಪನ್ಯಾಸ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯದಲ್ಲಿ ಯಾವುದೇ ಧರ್ಮ, ಜಾತಿ ಬೇಧವಿಲ್ಲ. ಇದು ನ್ಯಾಯ ಮಂದಿರವಾಗಿದ್ದು, ಇಡೀ ಪ್ರಪಂಚದಲ್ಲಿ ಪವಿತ್ರವಾದ ಮಂದಿರ ನ್ಯಾಯ ಮಂದಿರವಾಗಿದೆ. ನ್ಯಾಯ ಎಂದರೇ ಎಲ್ಲರೂ ತಲೆ ಬಾಗಿಸಲೇಬೇಕು. ಈ ದಿಶೇಯಲ್ಲಿ ಜನರು ತಮಗೆ ನ್ಯಾಯ ಸಿಗುತ್ತದೆ ಎಂಬ ಆಶಯವನ್ನಿಟ್ಟುಕೊಂಡು ನ್ಯಾಯಾಲಯಕ್ಕೆ ಬರುತ್ತಾರೆ. ನ್ಯಾಯಾಧೀಶರು, ನ್ಯಾಯವಾದಿಗಳು, ಸಿಬ್ಬಂದಿಗಳು ಮತ್ತು ನ್ಯಾಯಾಲಯದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಸಂಕಲ್ಪ ನ್ಯಾಯ ಒದಗಿಸುವುದಾಗಿದೆ. ಇದರಲ್ಲಿ ವಕೀಲರ ಪಾತ್ರವೂ ಅಮೋಘವಾಗಿದೆ. ನ್ಯಾಯಲಯದಲ್ಲಿ ಯಾವುದೇ ಒಂದು ಪ್ರಕರಣವನ್ನು ಇತ್ಯರ್ಥಪಡಿಸಬೇಕಾದರೆ ವಕೀಲರ ಪಾತ್ರ ಅಷ್ಟೇ ಅಲ್ಲದೇ ನ್ಯಾಯಾಧೀಶರ ಮತ್ತು ನ್ಯಾಯಾಂಗ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳ ಪಾತ್ರವು ಬಹು ಮುಖ್ಯವಾಗಿದೆ. ಎಲ್ಲರೂ ಕಾಯ, ವಾಚ ಮತ್ತು ಮನಸ್ಸಿನಿಂದ ಕೆಲಸ ಮಾಡಿದರೆ ಎಲ್ಲಾ ಪ್ರಕರಣಗಳನ್ನು ಬೇಗ, ಬೇಗ ಇತ್ಯರ್ಥಪಡಿಸಲು ಅವಕಾಶವಾಗುತ್ತದೆ ಎಂದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವಾರು ಮಹನೀಯರು ಶ್ರಮಿಸಿದ್ದಾರೆ. ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಸರ್ದಾರ ವಲ್ಲಬ ಬಾಯ್ ಪಟೇಲ್ ಹಾಗೂ ಲಕ್ಷ್ಯಾಂತರ ಜನರು ಹೋರಾಡಿ ಈ ದೇಶಕ್ಕೆ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಮಹಾತ್ಮ ಗಾಂಧೀಜಿಯವರು ಓರ್ವ ವಕೀಲರಾಗಿದ್ದರು. ಸ್ವಾತಂತ್ರ‍್ಯ ಹೋರಾಟ ಸಂದರ್ಭದಿಂದಲು ವಕೀಲರಿಂದ ದೇಶ ಕಟ್ಟುವ ಕೆಲಸವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಪವಿತ್ರವಾದ ಸಂವಿಧಾನವನ್ನು ನೀಡಿದ್ದಾರೆ. ಎಲ್ಲಾ ಮಹನೀಯರ ತ್ಯಾಗ ಬಲಿದಾನದಿಂದ ನಾವೆಲ್ಲರೂ ಇಂದು ನೆಮ್ಮದಿಯಿಂದ ಬಧುಕುದಿದ್ದೇವೆ ಎಂದು ಹೇಳಿದರು.
ಸರ್ಕಾರದ ಸೇವೆ, ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಅಥವಾ ತೊಂದರೆ ಉಂಟಾದಲ್ಲಿ ಅವರಿಗೆ ನ್ಯಾಯ ದೊರಕಿಸಿಕೊಡಲು ವಕೀಲರು ಅತ್ಯಂತ ಪ್ರಮುಖ ಪಾತ್ರವಹಿಸುತ್ತಾರೆ. ಜನರಿಗೆ ಅನ್ಯಾಯ ಆದಾಗ ಸುಮ್ಮನಿರಬೇಡಿ, ಅವರ ನ್ಯಾಯ ಒದಗಿಸಲು ವಕೀಲರು ಮುಂದೆ ಬರಬೇಕು. ನಿಮ್ಮ ಸಮವಸ್ತ್ರವೇ ನಿಮ್ಮ ಹೋರಾಟದ ಅಸ್ತ್ರವಾಗಿದೆ. ಹಾಸ್ಟೆಲ್, ಎಪಿಎಂಸಿ ಹಾಗೂ ಕಾರಾಗೃಹಗಳಿಗೆ ಆಗಾಗ ಭೇಟಿ ನೀಡಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದರೆ ಮತ್ತು ಕೆರೆ ಒತ್ತವರಿಯಂತಹ ಇತರೆ ಯಾವುದೇ ಸಾರ್ವಜನಿಕ ಪ್ರಕರಣಗಳ ಬಗ್ಗೆ ವಕೀಲರು ಧ್ವನಿ ಎತ್ತಬೇಕು ಮತ್ತು ಸ್ವಯಂ ದೂರು ದಾಖಲಿಸಬೇಕು. ಫಾಲ್ಸ್ ಕೇಸ್‌ಗಳಿಗೆ ಯಾವುದೇ ರೀತಿಯ ಅವಕಾಶ ಕೊಡಬಾರದು. ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ-1988 ರಡಿಯಲ್ಲಿ ವಕೀಲರ ಪಾತ್ರದ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಈ ವಿಷಯವಾಗಿ ಮಾತನಾಡಲು ಒಂದು ದಿನ ಪೂರ್ತಿಯಾಗಿದ್ದರು ಸಾಲದು ಎಂದರು.

The work of lawyers is important in providing justice to the public – Upalokayukta B. Veerappa

ನಮ್ಮ ದೇಶದ ರಕ್ಷಣೆಗಾಗಿ ಸೈನಿಕರು ಗಡಿಯಲ್ಲಿ ಪ್ರತಿನಿತ್ಯ ತಮ್ಮ ಪ್ರಾಣಾರ್ಪಣೆ ಮಾಡುತ್ತಿದ್ದಾರೆ. ಗಡಿಯಲ್ಲಿ ಹಗಲಿರುಳು, ಚಳಿ, ಮಳೆ, ಗಾಳಿ, ಬಿಸಿಲು ಎನ್ನದೇ ತಮ್ಮ ಜೀವದ ಹಂಗನ್ನು ತೊರೆದು ಅವರು ನಮಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯದಿಂದ ಬಂದಂತಹ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಪಡಿಸಲು ನ್ಯಾಯಾಂಗದ ಪೆನ್ನು ಗಟ್ಟಿಯಾಗಿರಬೇಕು. ಅಂದಾಗ ಮಾತ್ರ ಎಲ್ಲಾ ನಾಗರಿಕರಿಗೆ ನ್ಯಾಯ ಒದಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಚಂದ್ರಶೇಖರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ ಕಣವಿ, ಕರ್ನಾಟಕ ಲೋಕಾಯುಕ್ತದ ವಿಚಾರಣೆ ಅಪರ ನಿಬಂಧಕರುಗಳಾದ ಡಾ. ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ, ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಎಸ್. ಚಿಟಾಗುಬ್ಬಿ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಬಿ.ವಿ. ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ನ್ಯಾಯಾಧೀಶರುಗಳಾದ ಸರಸ್ವತಿ, ಕುಮಾರ್ ಡಿ.ಕೆ. ಹಾಗೂ ಮಲಕರಿ ರಾಮಮಪ್ಪ ಒಡಿಯರ್, ಹಿರಿಯ ವಕೀಲರಾದ ಆಸೀಫ್ ಅಲಿ, ವಿ.ಎಂ ಬೋಸನೂರಮಠ ಸೇರಿದಂತೆ ಮತ್ತಿತರೆ ವಕೀಲರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!