26ರಂದು ನಡೆಯುವ ಯುವಜನ ಆಗ್ರಹ ದಿನದ ಬಿತ್ತಿ ಪತ್ರ ಬಿಡುಗಡೆ.

aidyo koppal
‘ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ರಾಜ್ಯ ಮಟ್ಟದ ಯುವಜನರ ಆಗ್ರಹ ದಿನವನ್ನು ಜೂನ್ 26ರಂದು ಬೆಂಗಳೂರಿನ ಫ್ರೀಡಂ ಪಾಕ್ರ್ನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣಬಸವ ಪಾಟೀಲ್ ತಿಳಿಸಿದರು.
ನಗರದಲ್ಲಿ ಸೋಮವಾರ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಎಐಡಿವೈಒ ಸಂಘಟನೆಯು ಕೋಲ್ಕತ್ತಾದಲ್ಲಿ 1966 ಜೂನ್ 26ರಂದು ಸ್ಥಾಪನೆಯಾಗಿ 59 ವಸಂತಗಳನ್ನು ಪೂರೈಸಿ ಜೂನ್ 26ಕ್ಕೆ 60ನೇ ವರ್ಷಕ್ಕೆ ಕಾಲಿಡುತ್ತಿದೆ’ ಎಂದರು.
‘ಯುವಜನರ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ರೂಪಿಸುತ್ತಾ, ಇಂದು ದೇಶದ 24 ರಾಜ್ಯಗಳಲ್ಲಿ ಸಂಘಟನೆ ವಿಸ್ತಾರಗೊಂಡಿದೆ. ನಮ್ಮ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಘಟನೆ ಸಕ್ರಿಯವಾಗಿದೆ’ ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದರೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿಮಾಡುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಎರಡು ವರ್ಷಗತಿಸಿದರೂ ಯಾವುದೇ ನೇಮಕಾತಿ ಮಾಡಿಲ್ಲ ಎಂದು ದೂರಿದರು.
‘ಇಂದು ದೇಶದಲ್ಲಿ ನಿರುದ್ಯೋಗಿ ಯುವಪಡೆಯೇ ಸೃಷ್ಟಿಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವುದೇ ಪಕ್ಷಗಳು ಯುವ ಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿಲ್ಲ. ಬದಲಿಗೆ ತಮ್ಮ ವೋಟ್ ಬ್ಯಾಂಕ್ ಮಾಡಿಕೊಳ್ಳಲು ಪ್ರಯತ್ನಿಸಿವೆ’ ಎಂದು ಆರೋಪಿಸಿದರು.
ಕೊಪ್ಪಳ ನಗರದಲ್ಲಿ ಮಂಗಳವಾರ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣುಬಸವ ಪಾಟೀಲ್ ಭಿತ್ತಿಪತ್ರ ಬಿಡುಗಡೆ ಮಾಡಿ, ಮಾತನಾಡಿದರು
‘ರಾಜ್ಯದ 44 ಇಲಾಖೆಗಳಲ್ಲಿ 2.75 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಕಿಂಚಿತ್ತು ಪ್ರಯತ್ನ ನಡೆಯುತ್ತಿಲ್ಲ. ಕೆಲವು ಕುಂಟು ನೆಪಗಳನ್ನು ಹೇಳುತ್ತಾ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ಇನ್ನೊಂದೆಡೆ ಕೆಪಿಎಸ್ಸಿ ಅಧ್ಯಕ್ಷರು-ಸದಸ್ಯರ ಒಳಜಗಳ, ಭ್ರಷ್ಟಾಚಾರವು ನೇಮಕಾತಿಗಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಬೇಸರತರಿಸಿದೆ’ ಎಂದರು.
‘ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59,454 ಶಿಕ್ಷಕ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಎಸ್.ಎಸ್. ಎಲ್.ಸಿ ಫಲಿತಾಂಶ ಅಧೋಗತಿಗೆ ಇಳಿದಿದೆ. ಕೇವಲ ಶಿಕ್ಷಕರ ಮೇಲೆ ಗೂಬೆ ಕೂರಿಸುತ್ತಾ, ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಕ ಮಾಡದೆ ಇರುವುದು ಇಂತಹ ಕೆಟ್ಟ ಫಲಿತಾಂಶಕ್ಕೆ ಕಾರಣವಾಗಿದೆ’ ಎಂದು ಹೇಳಿದರು.
‘ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇರುವುದು. ಶಾಲೆಗಳಲ್ಲಿ ಮೂಲ ಸೌಲಭ್ಯಗಳಿಲ್ಲದಿರುವುದು. ಆ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಆಡಚಣೆಯಾಗಿವೆ’ ಎಂದರು.
ಎಐಡಿವೈಒ ಜಿಲ್ಲಾ ನಾಯಕರುಗಳಾದ, ಸುಭಾನ್, ನಾಗರಾಜ್, ಶಿವು, ಮತ್ತಿತರರು ಇದ್ದರು.
Comments are closed.