ಉದ್ಯೋಗ ಸೃಷ್ಟಿಗಾಗಿ ಆರೋಗ್ಯ ಬಲಿ ಕೊಡಬೇಡಿ- ಸುರೇಶ್ ಭೂಮರೆಡ್ಡಿ

ಕೊಪ್ಪಳ: ಬಲ್ದೋಟ ಸಮೂಹದ ಉದ್ದೇಶಿತ ಉಕ್ಕು ಕೈಗಾರಿಕಾ ಘಟಕದ ವಿರುದ್ಧ ಜೆ ಡಿ (ಎಸ್) ಪಕ್ಷ ಎಲ್ಲಾ ಸಂಘಟನೆಗಳು, ಮುಖಂಡರುಗಳು ಹಾಗೂ ಪ್ರತಿನಿಧಿಗಳನ್ನು ಒಳಗೊಂಡ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು
ಪಕ್ಷದ ಜಿಲ್ಲಾಧ್ಯಕ್ಷರಾದ ಸುರೇಶ್ ಭೂಮರೆಡ್ಡಿ ರೆಡ್ಡಿ ಹೇಳಿದ್ದಾರೆ.
“ಕೇವಲ 15,000 ಜನರಿಗೆ ಉದ್ಯೋಗ ಒದಗಿಸಲು ಒಂದೂವರೆ ಲಕ್ಷ ಜನರ ಆರೋಗ್ಯವನ್ನು ಪಣಕ್ಕಿಡುವುದು ಯಾವ ನ್ಯಾಯ? ಕೊಪ್ಪಳವನ್ನು ನರಕವನ್ನಾಗಿಸುವ ಈ ಯೋಜನೆ ಯಾವ ಕಾರಣಕ್ಕೂ ನಮಗೆ ಬೇಡ. ಈ ಕೂಡಲೇ ಸರಕಾರ ಎಚ್ಚೆತ್ತುಕೊಳ್ಳಬೇಕು,” ಎಂದು ಅವರು ಪತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೈಗಾರಿಕಾ ಘಟಕ ಸ್ಥಾಪನೆಗೆ ಉದ್ದೇಶಿತ ಭೂಮಿ ಕೊಪ್ಪಳ ನಗರಕ್ಕೆ ಹತ್ತಿಕೊಂಡಿದೆ. ಹತ್ತಿರದಲ್ಲಿಯೇ ಮೆಡಿಕಲ್ ಕಾಲೇಜು, ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ಕಛೇರಿ ಇದೆ. ಈಗಾಗಲೇ ಉತ್ಪಾದನೆಯಲ್ಲಿ ನಿರತವಾಗಿರುವ ಘಟಕಗಳಿಂದ ಹೊರ ಬರುತ್ತಿರುವ ಧೂಳಿನಿಂದ ಕೊಪ್ಪಳದ ಜನತೆ ತತ್ತರಿಸಿ ಹೋಗಿದ್ದಾರೆ ಸಮುದಾಯದ ಆರೋಗ್ಯ ಹಾಗೂ ಕೃಷಿ ಚಟುವಟಿಕೆಗಳು ಸಂಕಷ್ಟದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಕೈಗಾರಿಕಾ ಘಟಕ ಸ್ಥಾಪನೆ ವೈಜ್ಞಾನಿಕವಲ್ಲ ಎಂದು ಹೇಳಿದ್ದಾರೆ.
ಜೆ ಡಿ (ಎಸ್) ಕೈಗಾರಿಕೆಗಳ ವಿರೋಧಿಯಲ್ಲ. ಸಮುದಾಯಗಳಿಗೆ, ನಿಸರ್ಗಕ್ಕೆ ಹಾಗೂ ಕೃಷಿಗೆ ಚಟುವಟಿಕೆಗಳಿಗೆ ಹಾನಿ ಮಾಡದ ಯಾವುದೇ ಕೈಗಾರಿಕೆಯನ್ನು ಪಕ್ಷ ಬೆಂಬಲಿಸುತ್ತದೆ. ಅಂತಹ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಸರಕಾರ ಒತ್ತು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಉದ್ದೇಶತ ಉಕ್ಕು ಕೈಗಾರಿಕಾ ಘಟಕದ ಸ್ಥಾಪನೆಯ ವಿರುದ್ಧ ಪಕ್ಷದ ನಾಯಕರಾದ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಹೇಳಿದ್ದಾರೆ.
Comments are closed.