ಜನರ ಆರೋಗ್ಯದ ಮೇಲೆ ದುಷ್ಪರಿಣಾಮ — ರಾಜ್ಯ ಸರಕಾರದ ನಡೆಗೆ ವೈದ್ಯ ಬಸವರಾಜ ಕ್ಯಾವಟರ ಬೇಸರ

Get real time updates directly on you device, subscribe now.

ಈಗಿರುವ ಕಾರ್ಖಾನೆಗಳಿಂದ ಸಿಕ್ಕಿದ್ದಾದರೂ ಏನು…?

ಕೊಪ್ಪಳ: ಜಿಲ್ಲಾ ಕೇಂದ್ರದ ಹಿರಿಮೆ ಹೊಂದಿರುವ ನಗರದ ಜನರ ಆರೋಗ್ಯದ ಬದುಕನ್ನು ಕಿತ್ತುಕೊಳ್ಳಲು ರಾಜ್ಯ ಕಾಂಗ್ರೆಸ್ ಹೊರಟಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊಪ್ಪಳ ನಗರಕ್ಕೆ ಹೊಂದಿಕೊಂಡು ಖಾಸಗಿ ಉಕ್ಕು ಕಂಪನಿ ಸ್ಥಾಪಿಸುವ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ  ರಾಜ್ಯ ಸರಕಾರ ಸಹಿ ಹಾಕಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ನಗರ ಪ್ರದೇಶ ದಾಟಿ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿದ್ದರೇ ಸಮಸ್ಯೆ ಅಷ್ಟೊಂದು ಕಾಡುತ್ತಿರಲಿಲ್ಲ.
ಈಗಾಗಲೇ ಕೊಪ್ಪಳ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯ ಕೈಗಾರಿಕಾ ಘಟಕಗಳು ಆರಂಭವಾಗಿದ್ದರಿಂದ ಈ ಭಾಗದ ಜನರ ಆರ್ಥಿಕ ಬದುಕು ಸುಧಾರಿಸಿದ್ದಕ್ಕಿಂತ ಹಾಳಾಗಿದ್ದೆ ಹೆಚ್ಚು‌.ಪ್ರಮುಖವಾಗಿ ಜನ- ಸಾಮಾನ್ಯರ ಆರೋಗ್ಯವಂತು ತೀರಾ ಹದಗೆಟ್ಟಿದೆ. ಕೊಪ್ಪಳ ತಾಲೂಕಿನ ಗಿಣಿಗೇರಾ, ಚಿಕ್ಕಬಗನಾಳ, ಹ್ಯಾಟಿ, ಗೊಂಡಬಾಳ ಸೇರಿದಂತೆ ಈ ಭಾಗದ ಜನರ ಆರೋಗ್ಯ ಪರಿಸ್ಥಿತಿ ನೋಡಲಾಗುತ್ತಿಲ್ಲ.
ಸ್ಥಳೀಯರಿಗೆ ಉದ್ಯೋಗ ಕೊಡುತ್ತೇವೆ ಎಂದು ಆರಂಭವಾದ ಕಾರ್ಖಾನೆಗಳು ವಾಸ್ತವದಲ್ಲಿ ಕೊಪ್ಪಳ ಜಿಲ್ಲೆಯ ಜನರಿಗೆ ಉದ್ಯೋಗ ಕೊಡದೇ ಅನ್ಯ ರಾಜ್ಯದವರಿಗೆ ಉದ್ಯೋಗ ಕೊಟ್ಟು ಅವರನ್ನು ಪೋಷಣೆ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಈ ಭಾಗದ ಜನರು ನೆಲ ಕಳೆದುಕೊಂಡು ಕಾರ್ಖಾನೆಗಳಿಗೆ ಭೂಮಿ ಬಿಟ್ಟು ಬಳಿಕ ಕನಿಷ್ಠ ಭೂಮಿ ಕಳೆದುಕೊಂಡ ರೈತರ ಕುಟುಂಬಗಳಿಗೆ ಉದ್ಯೋಗ ಕೊಟ್ಟಿಲ್ಲ.

ಅಲ್ಲದೆ, ಭೂಮಿ ಕಳೆದುಕೊಂಡಿದ್ದಲ್ಲದೇ ಕಾರ್ಖಾನೆ ಹೊರಸುಸುವ‌ ವಿಷ ಗಾಳಿ ಕುಡಿದು ಕೊಪ್ಪಳ ತಾಲೂಕಿನ ಗ್ರಾಮಸ್ಥರು ಪಡಬಾರದ ಯಮಯಾತನೆ ಪಡುತ್ತಿದ್ದಾರೆ.

ಜನರ ಆರೋಗ್ಯದ ಪರಿಸ್ಥಿತಿಯೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಉಸಿರಾಟ ಸಮಸ್ಯೆ, ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್, ಕೈ- ಕಾಲು ನೋವು ಸೇರಿದಂತೆ ವಿವಿಧ ಸಮಸ್ಯೆಗಳು ಈಗಾಗಲೇ ಕಾರ್ಖಾನೆ ಸಮೀಪವಿರುವ ಕೊಪ್ಪಳ ತಾಲೂಕಿನ ಗ್ರಾಮಗಳಲ್ಲಿ ಜನರನ್ನು ಬಾಧಿಸುತ್ತಿವೆ.
ಇಂತಹ ಸಮಯದಲ್ಲಿ ಕೊಪ್ಪಳ ನಗರಕ್ಕೆ ಹೊಂದಿಕೊಂಡು 980 ಎಕರೆ ಪ್ರದೇಶದಲ್ಲಿ ನೂತನ ಸ್ಟಿಲ್ ಕಾರ್ಖಾನೆ ಆರಂಭಿಸಿದರೇ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿರುವ ಜನರ ಪರಿಸ್ಥಿತಿ ಏನಾಗಬೇಡ…?

ಮುಂದಿನ ದಿನಗಳಲ್ಲಿ ಕೊಪ್ಪಳ ನಗರದ ಜನರು ಜಿಲ್ಲಾ ಕೇಂದ್ರ ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬೇಕಾಗುತ್ತದೆ.

ಹೀಗಾಗಿ ಕೂಡಲೇ ಕಾರ್ಖಾನೆ ಆರಂಭವನ್ನು ಕೊಪ್ಪಳ ನಗರಕ್ಕೆ ಹೊಂದಿಕೊಂಡು ಕೈ ಬಿಡಬೇಕು ಇಲ್ಲವೇ ಜನವಸತಿ ಪ್ರದೇಶದಿಂದ ದೂರದಲ್ಲಿ ಆರಂಭಿಸಬೇಕೆಂದು ಬಸವರಾಜ ಕ್ಯಾವಟರ್ ಅವರು ಒತ್ತಾಯಿಸಿದ್ದಾರೆ.

ಬಾಕ್ಸ್..
ಈ ಕಾರ್ಖಾನೆಗೆ ತುಂಗಭದ್ರಾ ನೀರು: ಪ್ರಮುಖವಾಗಿ ಸದರಿ ಸ್ಟಿಲ್ ಕಂಪನಿ ಹಿನ್ನಿರಿನಿಂದ ತುಂಗಭದ್ರಾ ನದಿ ನೀರನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ.ಈಗಾಗಲೇ ಕೊಪ್ಪಳ ತಾಲೂಕಿನಲ್ಲಿರುವ ಕಾರ್ಖಾನೆಗಳು ತುಂಗಭದ್ರಾ ಜಲಾಶಯದ ನೀರು ಬಳಸಿಕೊಳ್ಳುತ್ತಿವೆ.ಇದರಿಂದ ರೈತರಿಗೆ ಎರಡು ಬೆಳೆ ಬೆಳೆಯಲಾಗುತ್ತಿಲ್ಲ‌. ಇದೀಗ ಸ್ಟಿಲ್ ಕಂಪನಿಯು ತುಂಗಭದ್ರಾ ಜಲಾಶಯದ ನೀರು ಬಳಸಿಕೊಳ್ಳಲು ಮುಂದಾದರೇ ರೈತರಿಗೆ ಮತ್ತಷ್ಟು ಸಮಸ್ಯೆಯಾಗಲಿದೆ. ಕೂಡಲೇ ಈ ಕಾರ್ಖಾನೆಯನ್ನು ವಸತಿ ಕೇಂದ್ರ ಬಿಟ್ಟು ದೂರ ಇರುವಂತೆ ಮಾಡಬೇಕು ಎಂದು ವೈದ್ಯ ಡಾ.ಬಸವರಾಜ ಕ್ಯಾವಟರ್ ಇದೇ ವೇಳೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!