
ಗಂಗಾವತಿ: ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಾ ಕ್ರೀಡಾಂಗಣದಲ್ಲಿ ಇಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಾಸಕರು ಶೀಘ್ರದಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಮಿತಿಯ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದರು.
ನಂತರ ಮಾತನಾಡಿದ ಅವರು ಪ್ರಮುಖ ಬೇಡಿಕೆಗಳಾದ ಗಂಗಾವತಿ ನಗರದ ೨೭ನೇ ವಾರ್ಡಿನ ಅಲೆಮಾರಿ ಜನಾಂಗದವರು ಸುಮಾರು ೩೦೦ ಕ್ಕಿಂತ ಹೆಚ್ಚಿನ ಕುಟುಂಬಗಳು ಚಿಕ್ಕದಾದ ಟೆಂಟ್ಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ. ಇವರಿಗೆ ವಸತಿ ಸೌಲಭ್ಯ ಕಲ್ಪಿಸುವುದು, ನಗರದಲ್ಲಿ ಸುಮಾರು ೧೦ ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಮಾರುಕಟ್ಟೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದೇ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕೂಡಲೇ ಮಾರುಕಟ್ಟೆ ಪ್ರಾರಂಭಿಸುವುದು, ಸರಕಾರಿ ಬಾಲಕರ (ಜೂನಿಯರ್) ಪ್ರೌಢಶಾಲೆಗೆ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು, ಇಲ್ಲಿ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಬೋಧನೆ ಕೇವಲ ೪ ಕೊಠಡಿಗಳು ಮಾತ್ರ ಇದ್ದು, ಪ್ರಸ್ತುತ ರಿಪೇರಿಯಾಗಿರುವ ಕೊಠಡಿಗಳು ಕಳಪೆಯಾಗಿದ್ದು, ಕೂಡಲೇ ಪ್ರೌಢಶಾಲೆಯನ್ನು ಅಭಿವೃದ್ಧಿಪಡಿಸಿ, ಮೂಲಸೌಲಭ್ಯಗಳನ್ನು ಕಲ್ಪಿಸುವುದು, ಜೂನಿಯರ್ ಕಾಲೇಜು ಮೈದಾನವು ಹಿರಿಯರು, ಮಹಿಳೆಯರಿಗೆ ವಾಕಿಂಗ್ ಮಾಡಲು ಈ ಭಾಗದಲ್ಲಿರುವ ಜನರಿಗೆ ಅನುಕೂಲವಾಗಿದೆ. ಅದೇ ರೀತಿ ಯುವಕರು, ಮಕ್ಕಳು ಆಟವಾಡಲು ತಾಲೂಕು ಕ್ರೀಡಾಂಗಣ ದೂರವಾಗುತ್ತಿರುವುದರಿಂದ ಇದೇ ಮೈದಾನದಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಆಟಗಳನ್ನು ಆಡುತ್ತಿದ್ದಾರೆ. ಕ್ರಿಕೆಟ್ ಆಡುತ್ತಿರುವಾಗ ವಾಕಿಂಗ್ ಮಾಡುವವರಿಗೆ ಚೆಂಡು ಬಡಿದ ಉದಾಹರಣೆಗಳಿವೆ. ಹೀಗಾಗಿ ವೃದ್ಧರು, ಮಹಿಳೆಯರು ಹಾಗೂ ಗರ್ಭಿಣಿಯರು ಆತಂಕದಿಂದಲೇ ವಾಕಿಂಗ್ ಮಾಡುತ್ತಿದ್ದಾರೆ. ಇವರಿಗೆ ತೊಂದರೆಯಾಗಬಾರದು ಹಾಗೂ ಯುವಕರು ಆಟವಾಡಲು ಅನುಕೂಲವಾಗಬೇಕಾಗಿದೆ ಆದ್ದರಿಂದ ಸರಕಾರಿ ಬಾಲಕರ ಜೂನಿಯರ್ ಪದವಿಪೂರ್ವ ಕಾಲೇಜು ಮೈದಾನಕ್ಕೆ ತಂತಿ ಜಾಲರಿ ನಿರ್ಮಿಸುವುದು ಇವುಗಳು ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಮೆಟ್ರಿ, ದುರುಗೇಶ ಹೊಸಳ್ಳಿ, ಪಂಪಾಪತಿ ಕುರಿ, ಆಂಜನೇಯ ಮಾವಿನಗಿಡ, ತಿಪ್ಪಯ್ಯಸ್ವಾಮಿ, ಜಡಿಯಪ್ಪ ಹಂಚಿನಾಳ, ಕನಕಪ್ಪ ಬಾವುಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.