ಫೆ.27 ರಿಂದ ಮಾರ್ಚ್ 3 ರವರೆಗೆ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ-ಯು.ಟಿ.ಖಾದರ್

0

Get real time updates directly on you device, subscribe now.

 ಬೆಂಗಳೂರು  ಫೆ.04:  ಇದೇ ಮೊದಲ ಬಾರಿಗೆ ವಿಧಾನಸೌಧ ಆವರಣದಲ್ಲಿ ಫೆ.27 ರಿಂದ ಮಾರ್ಚ್ 3 ರವರೆಗೆ ಪುಸ್ತಕ ಮೇಳ ಆಯೋಜಿಸಲಾಗುತ್ತಿದ್ದು,ಸಾಹಿತ್ಯಾಸಕ್ತರು,ಪ್ರಕಾಶಕರು ,ಓದುಗರು,ಶಾಸಕರು,ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಒಂದೆಡೆ ಬೃಹತ್ ಪುಸ್ತಕ ಮೇಳಕ್ಕೆ ಸಾಕ್ಷಿಯಾಗಲಿದ್ದಾರೆ.ಸುಮಾರು 175 ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.

ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,

ಇತ್ತೀಚಿಗೆ ಕೇರಳ ವಿಧಾನಸಭೆ ಆವರಣದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳ ಉದ್ಘಾಟನೆ ಆಹ್ವಾನಿಸಿದ್ದ ಸಂದರ್ಭದಲ್ಲಿ ಅದನ್ನು ನೋಡಿ ಸ್ಫೂರ್ತಿ ಪಡೆದು ಈ ಮೇಳ ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಪುಸ್ತಕಗಳ ಬಿಡುಗಡೆ,ಚರ್ಚೆ,ಸಂವಾದ ಕಾರ್ಯಕ್ರಮಗಳು ನಡೆಯಲಿವೆ.ಶಾಸಕರು ತಮ್ಮ ನಿಧಿಯಿಂದ 2 ರಿಂದ 3 ಲಕ್ಷ ರೂ.ಗಳವರೆಗೆ ಪುಸ್ತಕಗಳನ್ನು ಖರೀದಿಸಿ ತಮ್ಮ ಕ್ಷೇತ್ರದ ಸಾರ್ವಜನಿಕ ಗ್ರಂಥಾಲಯ ಹಾಗೂ ಶಾಲೆಗಳಿಗೆ ಪೂರೈಸಲು ಅವಕಾಶವಿದೆ.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಜನರನ್ನು ಸಜ್ಜುಗೊಳಿಸಲು ಅಗತ್ಯವಿರುವ ಪಠ್ಯಪುಸ್ತಕಗಳು ಇರಲಿವೆ.ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಮೇಳಕ್ಕೆ ಪೂರಕವಾಗಿ ಆಹಾರಮೇಳ ಆಯೋಜಿಸಲಾಗುವುದು.ಗೌರವಾನ್ವಿತ ರಾಜ್ಯಪಾಲರು ಕೂಡ ಈ ಹೊಸ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಪುಸ್ತಕ ಮಳಿಗೆಗಳಿಗೆ ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿವೆ.ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.ಇಲ್ಲಿ ಅನೇಕ ಸೌಕರ್ಯಗಳು ದೊರೆಯುವುದರಿಂದ ಸಾಧ್ಯವಾದಷ್ಟು ರಿಯಾಯಿತಿ ದರದಲ್ಲಿ ಪ್ರಕಾಶಕರು ಪುಸ್ತಕಗಳನ್ನು ಮಾರಾಟ ಮಾಡಬೇಕು ಎಂದು ಕೋರಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ,ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖರೀದಿಗೆ ಆಯ್ಕೆಯಾಗಿರುವ ಪುಸ್ತಕಗಳ ಪಟ್ಟಿಯನ್ನು ತ್ವರಿತವಾಗಿ ಪ್ರಕಟಿಸಿ ಪ್ರಕಾಶಕರು,ಲೇಖಕರಿಗೆ ಪ್ರೋತ್ಸಾಹಿಸಬೇಕು ಎಂದರು‌.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ,ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ,ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ,ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ.ಧರಣಿದೇವಿ ಮಾಲಗತ್ತಿ,ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಜಯವಿಭವಸ್ವಾಮಿ ಸೇರಿದಂತೆ ಅನೇಕ ಪ್ರಕಾಶಕರು ಸಭೆಯಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!