ಪ್ರಾಂತೀಯ ಹೆಸರಿನಲ್ಲಿ ಬಡಿದಾಟ ಬೇಡ: ನಾಗರಾಜ್ ಇಂಗಳಗಿ
ಪತ್ರಕರ್ತರಿಂದ ಪತ್ರಿಕಾಭವನದಲ್ಲಿ ಗಣರಾಜ್ಯೋತ್ಸವ

ಗಂಗಾವತಿ: ಅನೇಕರ ತ್ಯಾಗ ಬಲಿದಾನಗಳಿಂದಾಗಿ ಸ್ವಾತಂತ್ರ್ಯ ದೊರೆತ ನಂತರ ದೇಶದ ಭಾಷಾವಾರು ಪ್ರಾಂತಗಳನ್ನು ವಿಭಜಿಸಿ ರಾಜ್ಯಗಳನ್ನಾಗಿ ಮಾರ್ಪಾಡು ಮಾಡಲಾಗಿದ್ದು, ಭಾರತೀಯರಾದ ನಾವು ಒಂದೇ ತಾಯಿಯ ಮಕ್ಕಳು ಗಡಿ, ಭಾಷೆ, ಆಚಾರ ವಿಚಾರ, ಧರ್ಮ, ಜಾತಿಯ ಹೆಸರಿನಲ್ಲಿ ಬಡಿದಾಡುವುದು ನಿಲ್ಲಿಸಿ ಸೌಹರ್ದಯುತವಾಗಿ ಬದುಕಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಅಧ್ಯಕ್ಷ ನಾಗರಾಜ್ ಇಂಗಳಗಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವೈಜ್ಞಾನಿಕ ಯುಗದಲ್ಲು ಕಂದಾಚಾರಗಳಿಗೆ ಸಮಾಜ ಬಲಿಯಾಗುತ್ತಿರುವ ವಿಪರ್ಯಾಸ, ನಾವು ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವುದ ಅರಿವು ನಮ್ಮಲ್ಲಿಲ್ಲ, ವಿನಾಕಾರಣ ಸಮಯ ಹಾಳುಮಾಡಿಕೊಳ್ಳುತ್ತಿದ್ದೇವೆ, ಯುವ ಸಮುದಾಯ ಮೊಬೈಲ್, ಇತರೆ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ, ಪಾರದರ್ಶಕ ಸುದ್ದಿ ಮಾದ್ಯಮಗಳ ಕುರಿತು ಕೆಲ ಸಮಾಜ ಘಾತುಕ ಶಕ್ತಿಗಳು ತೇಜೋವಧೆ ಮಾಡುತ್ತಿರುವುದು ದುರಂತ, ಹಲ್ಲೆ ಇತರೆ ಕಿರುಕುಳ ಪತ್ರಕರ್ತರಿಗೆ ನೀಡಲಾಗುತ್ತಿದ್ದು ಸರಕಾರ ಗಂಭೀರವಾಗಿ ಪರಿಗಣಿಸಿ ರಕ್ಷಣೆ ನೀಡಬೇಕು, ಪತ್ರಕರ್ತರು ಸಹ ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು, ಆತ್ಮ ವಂಚನೆ ಮಾಡಿಕೊಳ್ಳುವ ಮೂಲಕ ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಪತ್ರಕರ್ತರಿಗೆ, ಪತ್ರಿಕೆಗಳಿಗೆ ಇರುವ ಗೌರವ ಹಾಳುಮಾಡಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವೀರಾಪುರ ಕೃಷ್ಣ, ಎಂ.ಜೆ.ಶ್ರೀನಿವಾಸ್, ದಶರಥ, ಹರಿಷ್ ಕುಲಕರ್ಣಿ, ದೇವರಾಜ್, ವಸಂತಕುಮಾರ್, ಶರಣಯ್ಯಸ್ವಾಮಿ, ಸುದರ್ಶನ ವೈದ್ಯ, ಮಂಜುನಾಥ್ ಹೊಸಕೇರಿ, ಚಂದ್ರಶೇಖರ್ ಮುಕ್ಕುಂದಿ, ರಮೇಶ್ ಜೋಗಿನ್, ವೆಂಕಟೇಶ್ ಉಪ್ಪಾರ್, ಮಂಜುನಾಥ ಗುಡ್ಲಾನೂರು, ಟಾಕಪ್ಪ ವಿಶ್ವಕರ್ಮ ಸೇರಿದಂತೆ ಇತರರಿದ್ದರು.
Comments are closed.