ಕಷ್ಟ ಗೊತ್ತಿರುವ, ಹಳ್ಳಿಗಾಡಿನ ಮಕ್ಕಳು ಕೂಡ ವೈದ್ಯರಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Get real time updates directly on you device, subscribe now.

ರಾಜ್ಯದ ಏಳು ಕೋಟಿ ಜನರೂ ಆರೋಗ್ಯವಾಗಿರಬೇಕು

ಬೆಂಗಳೂರು, ಡಿಸೆಂಬರ್ 04: ಕಷ್ಟ ಗೊತ್ತಿರುವ ಹಳ್ಳಿಗಾಡಿನ ಮಕ್ಕಳು ಕೂಡ ವೈದ್ಯರಾಗಬೇಕು ಎಂಬಾ ಆಶಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು.

ಅವರು ಇಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ 500 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ವೈದ್ಯರು ಕಾಯಿಲೆ ವಾಸಿ ಮಾಡಿದರೆ ಜನ ಸದಾ ನೆನೆಯುತ್ತಾರೆ. ಯಾವುದೇ ಕಾರಣಕ್ಕೂ ವೈದ್ಯರು ರೋಗಿಗಳನ್ನು ನಿರ್ಲಕ್ಷö್ಯ ಮಾಡದೇ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ವೈದ್ಯರಿಗೆ ಕರೆ ನೀಡಿದರು.

ಬೌರಿಂಗ್ ಆಸ್ಪತ್ರೆ ಸುದೀರ್ಘ ಇತಿಹಾಸವನ್ನು ಹೊಂದಿರುವ ಆಸ್ಪತ್ರೆ. ಸಾವಿರಾರು ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಮತ್ತೊಂದು ವೈದ್ಯಕೀಯ ಕಾಲೇಜಿನ ಅಗತ್ಯವನ್ನು ಮನಗಂಡು ಮತ್ತೊಂದು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದೆ ಎಂದರು. ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ಮತ್ತೊಂದು ವೈದ್ಯಕೀಯ ಕಾಲೇಜು ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೂ ಆಗಿ, ಸಾಮಾನ್ಯ ಜನರಿಗೆ, ಬಡವರಿಗೆ, ದಲಿತರಿಗೆ ಬಹಳಷ್ಟು ಉಪಯೋಗವಾಗುತ್ತದೆ ಎಂದು ಮನಗಂಡು ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದೆ. ಈಗ ಸುಸಜ್ಜಿತವಾದ ವೈದ್ಯಕೀಯ ಕಾಲೇಜು ನಿರ್ಮಾಣವಾಗಿದೆ ಎಂದರು.

ಎಲ್ಲರಿಗೂ ಬದುಕುವ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಾಗಿ ಬರುವವರು ಶ್ರೀಮಂತ ವರ್ಗದವರಲ್ಲ. ಸಾಮಾನ್ಯವಾಗಿ ಬಡವರು, ಕೆಳವರ್ಗದವರು ಮಾತ್ರ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಬಡವರು ದುಬಾರಿ ವೆಚ್ಚವನ್ನು ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸರ್ಕಾರಿ ಆಸ್ಪತ್ರೆಗಳು ಅಗತ್ಯವಿದೆ. ನನ್ನನ್ನೂ ಒಳಗೊಂಡಂತೆ ಬಹುತೇಕ ರಾಜಕಾರಣಿಗಳು ಸರ್ಕಾರಿ ಆಸ್ಪತ್ರೆಗೆ ಹೋಗುವುದಿಲ್ಲ ಎಂದ ಮುಖ್ಯಮಂತ್ರಿಗಳು ಹಣವಿರುವವರು ಎಲ್ಲಿಗೆ ಬೇಕಾದರೂ ಹೋಗಿ ಚಿಕಿತ್ಸೆ ಪಡೆಯಬಹುದು. ಆದರೆ ಬಡವರು ಎಲ್ಲಿಗೆ ಹೋಗಲು ಸಾಧ್ಯ? ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಜೀವಿಸುವ ಹಕ್ಕಿದೆ ಎಂದು ಸ್ಪಷ್ಟವಾಗಿ ತಿಳಸಲಾಗಿದೆ. ರಾಜ್ಯದ ಏಳು ಕೋಟಿ ಜನರೂ ಆರೋಗ್ಯವಾಗಿರಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು
ಹಿಂದೆಲ್ಲಾ ಸಕ್ಕರೆ ಕಾಯಿಲೆ, ರಕ್ತದೊತ್ತಡ ಶ್ರೀಮಂತರ ಕಾಯಿಲೆ ಎನ್ನುತ್ತಿದ್ದರು. ಈಗ ಬಡವರಿಗೆ ಹಾಗೂ ಸಣ್ಣ ವಯಸ್ಸನವರಿಗೂ ಬರಲು ಶುರುವಾಗಿದೆ. ಊಟದ ಕ್ರಮದಲ್ಲಿ ಬದಲಾವಣೆಯಾಗಿದ್ದು ದೈಹಿಕ ವ್ಯಾಯಾಮ ಕೂಡ ಇಲ್ಲವಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಇರಲೇಬೆಕು. ಕ್ರೀಡಾಪಟುಗಳಿಗೂ ಸಾಮಾನ್ಯ ಜನರಿಗೂ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಆರೋಗ್ಯ ಬಹಳ ಮುಖ್ಯ. ವಯಸ್ಸಿಗೆ ಎಂದು ವ್ಯಾಯಾಮವಿಲ್ಲದೇ, ಆಹಾರ ಪದ್ದತಿಯನ್ನು ಉತ್ತಮವಾಗಿಟ್ಟುಕೊಳ್ಳದೇ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದರು.

ನನ್ನನ್ನು ವೈದ್ಯನಾಗಿ ನೋಡಬೇಕೆಂದು ನನ್ನ ತಂದೆಗೆ ಆಸೆಯಿತ್ತು. ಆದರೆ ನನಗೆ ಉತ್ತಮ ಅಂಕಗಳು ಬರದ ಕಾರಣ ನಾನು ವಕೀಲನಾದೆ. ನನಗೆ ವೈದ್ಯಕೀಯ ಸೀಟು ಸಿಕ್ಕಿದ್ದಿದ್ದರೆ ನಾನು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಯ ಗುರಿ

ಹಿಂದೆ ಹಣಕಾಸು ಮಂತ್ರಿಯಾಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ತೀರ್ಮಾನ ಮಾಡಲಾಗಿತ್ತು. ಈಗ ಪ್ರಸ್ತುತ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವುದರಿಂದ ಹಾಗೂ ಎಲ್ಲ ಸಮುದಾಯದವರಿಗೂ ಪ್ರಾತಿನಿಧ್ಯ ದೊರಕಲು ಇಂತಹ ಆಸ್ಪತ್ರೆಗಳಲ್ಲಿ ವೈದ್ಯರು ಕಾರ್ಯನಿರ್ವಹಿಸಲು ಮೀಸಲಾತಿ ವ್ಯವಸ್ಥೆಯಾಗುತ್ತದೆ. ಸೂಕ್ತ ಅವಕಾಶ ದೊರೆತರೆ, ಎಲ್ಲರೂ ಜೀವನದಲ್ಲಿ ಅಭಿವೃದ್ಧಿ ಹೊಂದಬಹುದಾಗಿದೆ. ಸಮಾಜದಲ್ಲಿ ಅಶಕ್ತರಿಗೆ ಬದುಕುವ ಅವಕಾಶವನ್ನು ಸರ್ಕಾರ ಕಲ್ಪಿಸುತ್ತಿದೆ ಎಂದರು.

ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯಬೇಕು

300 ಕೋಟಿ ರೂ. ವೆಚ್ಚದಲ್ಲಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಶಂಕುಸ್ಥಾಪನೆ ಮಾಡಿ, ನಮ್ಮ ಅವಧಿಯಲ್ಲಿಯೇ ಉದ್ಘಾಟನೆಯನ್ನೂ ನೆರವೇರಿಸಲಾಗುವುದು. ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಪಾಲಿಸುವುದರಿಂದ ಸದೃಢ ಆರೋಗ್ಯವನ್ನು ಪಡೆಯಬಹುದಾಗಿದೆ. ಕ್ಯಾನ್ಸರ್ ರೋಗಕ್ಕೆ ಆರಂಭಿಕ ಹಂತದಲ್ಲಿದ್ದರೆ ಗುಣಪಡಿಸಬಹುದಾಗಿದೆ. ವೈಜ್ಞಾನಿಕ ಸಂಶೋಧನೆಗಳಿಂದ ಅನೇಕ ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲಾಗುತ್ತಿದೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ವಹಣೆ, ಸ್ವಚ್ಛತೆ ಉತ್ತಮವಾಗಿರಬೇಕು, ಉತ್ತಮ ಆರೋಗ್ಯ ಸೇವೆ ದೊರೆಯುವಂತಾಗಬೇಕು. ಉತ್ತಮ ಜನಸಂಪರ್ಕ ಹೊಂದುವುದರಿಂದ ಆಸ್ಪತ್ರೆಗೆ ಸಾರ್ವಜನಿಕರಿಂದ ದೇಣಿಗೆಯೂ ದೊರೆತಾಗ, ಗುಣಮಟ್ಟದ ಸೇವೆಗಳನ್ನು ಆಸ್ಪತ್ರೆ ನೀಡಲು ಸಹಾಯವಾಗುತ್ತದೆ ಎಂದರು.

ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜಸೀರ್ ಅಹ್ಮದ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಮೊಹಮ್ಮದ್ ಮೊಹಶೀನ್,ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ರಮೇಶ್ , ನಿರ್ದೇಶಕರಾದ ಮನೋಜ್ ಮೊದಲಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!