ಒಂದೂವರೆ ವರ್ಷದಲ್ಲಿ ಸಂಡೂರಿಗೆ 1200 ಕೋಟಿ ಅನುದಾನ: ಡಿಸಿಎಂ ಡಿ.ಕೆ. ಶಿವಕುಮಾರ್
ಸಂಡೂರು ತಾಲೂಕಿನಲ್ಲಿ ಸೋಮವಾರ ನಡೆದ ಸಾಧನಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು:
ಸಂಡೂರು ಕ್ಷೇತ್ರದ ಜನ ಸದಾ ನಮಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದೀರಿ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಕಳೆದ ಒಂದೂವರೆ ವರ್ಷದಲ್ಲಿ 1200 ಕೋಟಿ ಅನುದಾನವನ್ನು ಈ ಕ್ಷೇತ್ರಕ್ಕೆ ನೀಡಿದ್ದಾರೆ. ಆಮೂಲಕ ಸಂಡೂರಿನ ಬಡ ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿದ್ದೇವೆ. ಅದರ ಭಾಗವಾಗಿ ಇಂದು ಹಲವು ಯೋಜನೆಗಳ ಶಂಕುಸ್ಥಾಪನೆ ಮಾಡಿದ್ದೇವೆ. 200 ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ಇಲ್ಲಿರುವ ವಸತಿ ಯೋಜನೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ಕನಕಪುರದಲ್ಲಿಯೂ ಆಗಿಲ್ಲ. ಬದಲಿಗೆ ಸಂಡೂರಿನಲ್ಲಿ ಆಗಿವೆ.
ಕಳೆದ ಒಂದೂವರೆ ವರ್ಷದಲ್ಲಿ ನಾನು ಕನಕಪುರಕ್ಕೆ ತೆಗೆದುಕೊಂಡು ಹೋಗಿರುವುದಕ್ಕಿಂತ ಹೆಚ್ಚಿನ ಅನುದಾನವನ್ನು ತುಕಾರಾಂ ಅವರು ಸಂಡೂರಿಗೆ ತಂದಿದ್ದಾರೆ. ಆಮೂಲಕ ಅವರು ನಿಮ್ಮ ಋಣ ತೀರಿಸುತ್ತಿದ್ದಾರೆ. 30 ಕೋಟಿ ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಾಣ ಮಾಡಲಾಗುತ್ತಿದೆ.
ನಮ್ಮ ಸರ್ಕಾರ ನುಡಿದಂತೆ ನಡೆದಿದೆ
ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನುಡಿದಂತೆ ನಡೆದು, ಕೊಟ್ಟ ಮಾತು ಉಳಿಸಿಕೊಂಡಿದೆ. ಈ ತಾಲೂಕಿನಲ್ಲಿ ಕೇವಲ 1,200 ಮನೆಗಳು ಮಾತ್ರ ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ. ಉಳಿದ ಎಲ್ಲಾ ಮನೆಗಳಿಗೆ ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ. ಇನ್ನು ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆ ಮೂಲಕ 1.21 ಕೋಟಿ ಮಹಿಳೆಯರಿಗೆ 2 ಸಾವಿರ ಹಣ ನೀಡಲಾಗುತ್ತಿದೆ. ಒಂದೆರಡು ತಿಂಗಳು ಹೆಚ್ಚುಕಮ್ಮಿಯಾದರೂ ಕಳೆದ ಒಂದುವರೆ ವರ್ಷದಿಂದ ನೀಡಲಾಗುತ್ತಿದೆ. ಇಂತಹ ಯಾವುದಾದರೂ ಒಂದು ಕಾರ್ಯಕ್ರಮವನ್ನು ಬಿಜೆಪಿಯ ಯಡಿಯೂರಪ್ಪ, ಬೊಮ್ಮಾಯಿ ಅವರು ನೀಡಿದ್ದಾರಾ? ಈ ಎಲ್ಲಾ ಕಾರ್ಯಕ್ರಮವನ್ನು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ನೀಡಿದ್ದಾರೆ.
ಬಿಜೆಪಿಯವರು ಕೇವಲ ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ನಿನ್ನೆ ನಾವು ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯಕ್ಕೆ ಹೋಗಿ, ನೂರಾರು ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿದ್ದೇವೆ. ನಾವು ಎಲ್ಲಾ ದೇವರು, ಧರ್ಮವನ್ನು ಗೌರವಿಸುತ್ತೇವೆ. ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ.
ಮಹಾತ್ಮಾ ಗಾಂಧಿಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷಗಳು ಪೂರೈಸಲಾಗಿದೆ. ಗಾಂಧಿಜಿ ಅವರು ಸಂಡೂರಿಗೂ ಆಗಮಿಸಿ ದಕ್ಷಿಣದ ಕಾಶ್ಮೀರ ಎಂದು ಹೇಳಿದ್ದರು. ನಾವು ಉಪಚುನಾವಣೆಗಾಗಿ ಬಂದಿಲ್ಲ. ನಮಗೆ ನಿಮ್ಮ ಮೇಲೆ ವಿಶ್ವಾಸವಿದೆ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಲು ಬಂದಿದ್ದೇವೆ.
ತುಕಾರಾಂ ಅವರ ಕೈ ಬಲಪಡಿಸಿ:
ಉಪಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಸಿದ್ದರಾಮಯ್ಯ, ತುಕಾರಾಂ ಅವರ ಕೈ ಬಲಪಡಿಸುತ್ತೀರಿ ಎಂಬ ಆತ್ಮವಿಶ್ವಾಸ ನಮಗಿದೆ. ನೀವು ಸರಳ, ಸಜ್ಜನ, ಅಭಿವೃದ್ಧಿಗೆ ಹೆಸರಾದ ನನ್ನ ಸಹೋದರನನ್ನು ವಿಧಾನಸಭೆಗೂ ಕಳಿಸಿದ್ದೀರಿ, ಮಂತ್ರಿ ಮಾಡಿದ್ದೀರಿ, ಈಗ ಲೋಕಸಭೆಗೆ ಕಳುಹಿಸಿದ್ದೀರಿ. ಮುಂದೆ ಅವರೇ ಈ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡು ಮುಂದಿನ ಕೆಲಸ ಮಾಡಲಿದ್ದಾರೆ. ಸರ್ಕಾರದ ವಿವಿಧ ಕಾರ್ಯಕ್ರಮವನ್ನು ಅಖಂಡ ಬಳ್ಳಾರಿಗೆ ತಲುಪಿಸಿ ಶಕ್ತಿ ತುಂಬುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಅವರು ನಗುತ್ತಾ ಒಡನಾಟ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.
ಬಳ್ಳಾರಿಯಲ್ಲಿ ಆಗುತ್ತಿದ್ದ ಲೂಟಿಯನ್ನು ತಡೆಯಲು ನಾವು ಪಾದಯಾತ್ರೆ ಮಾಡಿದ್ದೆವು. ಈಗ ನೀವು ಶಾಂತಿಯಿಂದ ಬದುಕುತ್ತಿದ್ದೀರಿ. ಈಗ ಮತ್ತೆ ಕೆಲವರು ಪ್ರಯತ್ನ ಪಡುತ್ತಿದ್ದಾರೆ ಎಂಬ ವಿಚಾರ ತಿಳಿಯಿತು. ಯಾರೇ ಬರಲಿ, ನಾನು ಸಿದ್ದರಾಮಯ್ಯ ಹಾಗೂ ಸಚಿವರು ನಿಮ್ಮ ಜತೆ ನಿಂತು, ನಿಮಗೆ ಶಕ್ತಿಯಾಗಿ ನಿಮ್ಮ ಋಣ ತೀರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನು ಹತ್ತು ಹಲವು ಕಾರ್ಯಕ್ರಮ ರೂಪಿಸುತ್ತೇವೆ.
ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆ ಈಡೇರಿಸುತ್ತೇವೆ:
ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಯಾರೂ ಹೆದರುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆಯಲಿದೆ. ಚಿತ್ರದುರ್ಗದಲ್ಲಿ ನಾವು ಘೋಷಿಸಿರುವುದನ್ನು, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನು ಜಾರಿಗೊಳಿಸಲು ನಾವು ಬದ್ಧವಾಗಿದ್ದೇವೆ. ಬಿಜೆಪಿಯವರು ರಾಜಕೀಯಕ್ಕಾಗಿ ಸುಳ್ಳು ಪ್ರಚಾರ ಮಾಡುತ್ತಾರೆ. ನೀವು ಅದರಿಂದ ಮೋಸ ಹೋಗಬೇಡಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲಾ ಜನಾಂಗದವರಿಗೂ ನ್ಯಾಯ ಒದಗಿಸಿಕೊಡುತ್ತೇವೆ. ನಿಮ್ಮ ಸೇವೆ ಮಾಡುವುದು ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ಮಾತ್ರ.
ನೀವೆಲ್ಲರೂ ಸೇರಿ ಬಿಜೆಪಿಗೆ ದೊಡ್ಡ ಸಂದೇಶ ಕಳುಹಿಸಿದ್ದೀರಿ. ಹೀಗಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನೀವೆಲ್ಲರೂ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಿದ್ದೀರಿ. ತುಕಾರಾಂ ಅವರಿಗೆ ಶಕ್ತಿ ನೀಡಿ ಅವರನ್ನು ಲೋಕಸಭೆಗೆ ಕಳುಹಿಸಿದ್ದೀರಿ.