ಹಿರಿಯ ನಾಗರಿಕರ ಕೊಡುಗೆ ಸ್ಮರಿಸಿ, ಗೌರವಿಸಿ: ಮಲ್ಲಿಕಾರ್ಜುನ ತೊದಲಬಾಗಿ

Get real time updates directly on you device, subscribe now.

 : ಹಿರಿಯ ನಾಗರಿಕರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರನ್ನು ಗೌರವಿಸಬೇಕು. ಸಮಾಜಕ್ಕೆ ಗುಣಮಟ್ಟದ ಮೌಲ್ಯವನ್ನು ನೀಡುವುದರ ಜೊತೆಗೆ ಸಮಾಜದ ಸಮತೋಲನದಲ್ಲಿ ಹಿರಿಯ ನಾಗರಿಕರ ಸಹಭಾಗಿತ್ವ ಅತೀ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತನ ಉಪ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ತೊದಲಬಾಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಅಕ್ಟೋಬರ್ 01 ರಂದು ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2024 ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆ ಅಪಾರವಾಗಿದೆ. ಸಮಾಜದ ಒಳಿತಿಗಾಗಿ ಹಿರಿಯ ನಾಗರಿಕರ ಸೇವೆ ಶ್ಲಾಘನೀಯವಾದದ್ದು. ಇಂದಿನ ಯುವಜನಾಂಗಕ್ಕೆ ಹಿರಿಯರನ್ನು ಗೌರವಿಸುವ, ತಂದೆ-ತಾಯಿಯರನ್ನು ಪ್ರೀತಿಸಿ ಮತ್ತು ಅವರ ಕಾಳಜಿವಹಿಸುವ ನಿಟ್ಟಿನಲ್ಲಿ ಅವರಿಗೆ ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ತಿಳಿಸುವುದರ ಜೊತೆಗೆ ಅವುಗಳನ್ನು ಪಾಲಿಸುವಂತೆ ತಿಳಿಸಬೇಕು ಎಂದರು.
ಕೊಪ್ಪಳದ ಹಿರಿಯ ನ್ಯಾಯವಾದಿಗಳಾದ ವ್ಹಿ.ಎಮ್ ಭೂಸನೂರಮಠ ಅವರು ವಿಶೇಷ ಉಪನ್ಯಾಸ ನೀಡಿ, ಪಾಲಕರ ಪೋಷಣೆ, ಸಂರಕ್ಷಣೆ ಹಾಗು ಹಿರಿಯ ನಾಗರೀಕರ ರಕ್ಷಣಾ ಕಾಯ್ದೆ-2007 ಮತ್ತು ಅಧಿನಿಯಮ 2009 ಆಗಿದ್ದು, ಈ ಕಾಯ್ದೆಯು ವಯಸ್ಕರ ಆರ್ಥಿಕ, ಸಾಮಾಜಿಕ ಪ್ರಮುಖ್ಯತೆಯ ಸಾಂಸ್ಕೃತಿಕ ಪಾತ್ರಗಳ ಘೋಷಣೆಗಳನ್ನು ಮಾನವ ಹಕ್ಕುಗಳಿಗೆ ಸಂಬAಧಿಸಿದAತೆ ಅರ್ಥ ಪೂರ್ಣವಾಗಿ ನಿರೂಪಿಸಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲ ನಾಗರಿಕರಿಗೆ ಅದರಲ್ಲೂ ರೋಗಗ್ಯಸ್ಥರು ನಿರುದ್ಯೋಗಿಗಳು, ಅಂಗವಿಕಲರು ಹಾಗೂ ವೃದ್ಧರು, ಇವರೆಲ್ಲರ ಜೀವನ ಗೌರವಯುತವಾಗಿರಲು ಮತ್ತು ಅವರಿಗೆ ಆರ್ಥಿಕ, ಸಾಮಾಜಿಕ ಸುರಕ್ಷತೆ ಅತ್ಯಗತ್ಯವಾಗಿದೆ. ನಮ್ಮದೇಶದಲ್ಲಿ ಇತ್ತೀಚೆಗೆ ವೃದ್ಧರ, ಅತಿವೃದ್ಧರ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಸಣ್ಣ ಕುಟುಂಬಗಳಾಗಿ ಪರಿವರ್ತಿತವಾಗಿರುವುದು ಎದ್ದು ಕಾಣುತ್ತಿದೆ. ವೃದ್ಧರ ಮೇಲೆ ದೌರ್ಜನ್ಯ ಅಪರಾಧಗಳು ಹೆಚ್ಚಾಗುತ್ತಿವೆ. ಇವರಿಗೆ ರಕ್ಷಣೆ ಇಲ್ಲದೆ ಅನಾಥಾಶ್ರಮ, ವೃದ್ಧಾಶ್ರಮ ಸೇರುವಂತಾಗಿದ್ದು, ಗಗನಕ್ಕೇರಿದ ನಿತ್ಯ ವಸ್ತುಗಳ ಬೆಲೆಗಳು ಹಾಗೂ ಆರೋಗ್ಯ ವೆಚ್ಚ ಇವೆಲ್ಲವು ಹಿರಿಯರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು. ಈ ಎಲ್ಲ ಘನ ಉದ್ದೇಶಗಳಿಂದ ಹಿರಿಯ ನಾಗರೀಕರ ರಕ್ಷಣೆಗೆ ಕಾನೂನನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆ ಜಾರಿಯಿಂದಾಗಿ ಹಿರಿಯರ ಯೋಗ ಕ್ಷೇಮ ಸಾಧ್ಯವಾಗಿದೆ. ಸರಕಾರ ತೆಗೆದುಕೊಂಡಿರುವ ದಿಟ್ಟ ಹೆಜ್ಜೆ ಇದಾಗಿದೆ. ಇಂತಹ ಕಾನೂನುಗಳನ್ನು ಅರಿತು ಅವುಗಳ ಸದ್ಭಳಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಹಾಗೂ ಜವಾಬ್ದಾರಿಯು ಕೂಡ ಆಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಹಿರಿಯ ನಾಗರಿಕರ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ.ನಂದಕುಮಾರ್ ಮಾತನಾಡಿ, ಹಿರಿಯ ಜೀವಿಗಳಲ್ಲಿ ವಯಸ್ಸಾದ ಮೇಲೆ ಹಲವಾರು ಬದಲಾವಣೆಗಳಾಗುವುದು ಸರ್ವೆ ಸಾಮಾನ್ಯ. ಆದರೆ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಿ. ಒತ್ತಡದಿಂದಲೇ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ವಯೋವೃದ್ದರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೇವಲ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ವಯಸ್ಕರು ಸಂಬAಧಗಳಿಗೆ ಬೆಲೆಕೊಟ್ಟು ಬದುಕು ನಡೆಸಿಕೊಂಡು ಹೋಗಬೇಕು. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪಿ.ತಿಪ್ಪಣ್ಣ ಸರಸಗಿ, ಇರುವಷ್ಟು ದಿನ ಸಂತೋಷದಿAದಿರೋಣ. ಕಹಿ ಘಟನೆಗಳನ್ನೋಡಿಸಿ ಸಿಹಿ ಕ್ಷಣಗಳನ್ನ ಅನುಭವಿಸುತ್ತಾ ಮುನ್ನಡೆಯೋಣ, ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ದೂಷಿಸುವುದು ಸರ್ವೇ ಸಾಮಾನ್ಯವಾಗಿದೆ. ಇಂತಹ ಹಿರಿಯರ ನಿಂದನೆ, ದೂಷಣೆ, ಹಿಂಸಿಸುವಿಕೆ ಮುಂತಾದ ಕೃತ್ಯಗಳ ನಿರ್ವಹಣೆಗಾಗಿಯೇ ‘ನಿರ್ವಹಣಾ ನ್ಯಾಯ ಮಂಡಳಿ’ ರಚನೆಯಾಗಿದೆ ಎಂದರು.
ಜಿಲ್ಲೆಯ ಹಿರಿಯ ಸಾಹಿತಿ, ಪತ್ರಕರ್ತರಾದ ಕೊಟ್ರಪ್ಪ ತೋಟದ ಅವರು ಮಾತನಾಡಿದರು.
ಸನ್ಮಾನ: ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಾದ ಶಾಂತಯ್ಯ ಹಿರೇಮಠ, ವೀರಪ್ಪ, ಸಿದ್ದಪ್ಪ ದುರುಗಪ್ಪ, ವಾಸಣ್ಣ ಬಿಳೇಗುಡ್ಡ, ಕಾಶಿಪತಿ ಕಮ್ಮಾರ, ಪಾಲಾಕ್ಷಪ್ಪ ಷಣ್ಮುಕಪ್ಪ,
ಡಾ.ಕಲಿಗಣಿನಾಥ, ರವೀಂದ್ರ, ಶೇಖರಯ್ಯ, ನಾಗಪ್ಪ, ಸಿದ್ದಪ್ಪ, ಜಿ.ವಿ.ಜಹಾಗೀರದಾರ, ಚಂದ್ರಾರೆಡ್ಡಿ, ಸುಶೀಲಮ್ಮ ಇರಕಲ್‌ಗಡ, ತಿರುಮಲರಾವ್ ದೇಶಪಾಂಡೆ ಹಾಗೂ ಇತರ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು.
ಪುಸ್ತಕ ಬಿಡುಗಡೆ: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಿಂದ ಹೊರತಂದ ‘ಹಿರಿಯ ನಾಗರೀಕರ ದೈಹಿಕ ಆರೋಗ್ಯಕ್ಕಾಗಿ ಮಾರ್ಗದರ್ಶಿ’ ಎಂಬ ಪುಸ್ತಕವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಆರೋಗ್ಯ ತಪಾಸಣೆ: ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಿರಿಯ ನಾಗರಿಕರ ಆರೋಗ್ಯ ತಪಾಸಣೆಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಶಾಂತಯ್ಯ ಅಂಗಡಿ, ಬಿರನಾಯಕ ಸೇರಿದಂತೆ ಹಲವು ಗಣ್ಯರು, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸುರೇಶ್ ಅವರು ಸ್ವಾಗತಿಸಿದರು. ಮುದಿಯಪ್ಪ ಮೇಟಿ ಅವರು ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!