ಡಾ|| ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೆ. ಬಿ.ಸಿ.ಐಗೋಳರಿಂದ ಭಾವಚಿತ್ರಕ್ಕೆ ಪಷ್ಪಾರ್ಚನೆ
ಗಂಗಾವತಿ.
ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಸಂಗೀತ ಕಲಾವಿದರಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಸಿ.ಐಗೋಳ ಸ್ಮರಿಸಿದರು.
ನಗರದ ಆನೆಗೊಂದಿ ರಸ್ತೆಯ ಗದಿಗೆಪ್ಪ ಕಾಲೋನಿಯ ಗಣೇಶ ದೇವಸ್ಥಾನದ ಸಮುದಾಯದಲ್ಲಿ ಡಾ|| ಎಫ್.ಎಂ,ಮುದ್ದಾಬಳ್ಳಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಪಾಠ ಶಾಲೆಯಲ್ಲಿ ಆಯೋಜಿಸಿದ್ದ ಪಂಡಿತ ಪುಟ್ಟರಾಜ್ ಗವಾಯಿಗಳ ೧೪ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಅಂಧರ ಬಾಳಿಗೆ ಬೆಳಕಾಗಿದ್ದ ಪಂಡಿತ ಪುಟ್ಟರಾಜರು ಸಂಗೀತ ಕ್ಷೇತ್ರದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರು. ಅವರ ಗುರು ಪಂಚಾಕ್ಷರ ಗವಾಯಿಗಳ ಮಾರ್ಗದರ್ಶನದಂತೆ ಗದಗಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಸೇವೆ ನೀಡಿದ ಸಂತರು. ಅಂತವಹರ ಸ್ಮರಣೆ ಸದಾ ಮಾಡಬೇಕು. ಪುಣ್ಯ ಸ್ಮರಣೆಯಂದು ಅವರನ್ನು ಸ್ಮರಿಸುವ ಪ್ರತಿಯೊಬ್ಬರಿಗೂ ಅವರ ಆಶೀರ್ವಾದ ಸಿಗುತ್ತದೆ. ವಿಶೇಷವಾಗಿ ಸಂಗೀತ ಪಾಠ ಶಾಲೆಯ ಮಕ್ಕಳಿಗೆ ಪುಟ್ಟರಾಜರ ಕೃಪೆ ಇರುತ್ತದೆ. ಸಂಗೀತ ಕಲೆ ಪ್ರತಿಯೊಬ್ಬರಲ್ಲಿ ಇರುತ್ತದೆ. ಅದನ್ನು ಗುರುತಿಸುವ ಕೆಲಸವಾಗಬೇಕು ಎಂದರು.
ಸರ್ವೇಯರ್ ಚನ್ನಬಸವಯ್ಯ ಬಿ.ಟಿ ಮಾತನಾಡಿ, ಪಂಡಿತ ಪುಟ್ಟರಾಜ ಗವಾಯಿಗಳ ಸಾಧನೆ ಕುರಿತು ಕಲಾವಿದರಿಗೆ ತಿಳಿಸಿದರು. ಪುಣ್ಯ ಸ್ಮರಣೆ ಅಂಗವಾಗಿ ಸಂಗೀತ ಶಿಕ್ಷಕ ಪಂಚಾಕ್ಷರಿ ಬೊಮ್ಮಲಾಪುರ ಅವರು ಸಂಗೀತ ಸೇವೆ ಸಲ್ಲಿಸಿದರು. ರಿಜ್ವಾನ್ ಮುದ್ದಾಬಳ್ಳಿ ತಬಲಾ ಸಾತ್, ಯುವರಾಜ ಕುರುಗೋಡ ಹಾರ್ಮೋನಿಯಂ ಸಾತ್ ನೀಡಿದರು. ಈ ಸಂದರ್ಭದಲ್ಲಿ ಸುಮಂಗಳಾ ಐಗೋಳ, ರೇಣುಕಮ್ಮ ಹಾಲಸಮುದ್ರ, ಕಲಾವಿದ ರಾಜಾಸಾಬ್ ಮುದ್ದಾಬಳ್ಳಿ ಸೇರಿದಂತೆ ಪಾಠ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಇದ್ದರು.