ಡಬಲ್ ಪಿಹೆಚ್.ಡಿ ಯ ಡಾ.ತಿಮ್ಮಪ್ಪ ವಡ್ಡೆಪಲ್ಲಿಯವರಿಗೆ ಹಸಿವು ಕಲಿಸಿದ ಯೋಗ    

Get real time updates directly on you device, subscribe now.

ಯೋಗ ಮತ್ತು ಧ್ಯಾನದಿಂದ ಜನರು ಕ್ರಿಯಾಶೀಲರಾಗುತ್ತಾರೆ. ದೇಹ ಮತ್ತು ಮನಸ್ಸಿನ ಸಮ್ಮಿಲನವೇ ಯೋಗ. ಇದು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಕ್ತಿತ್ವದ ನಿರ್ಮಾಣದಲ್ಲಿ ಯೋಗ ಬಹಳ ಸಹಕಾರಿಯಾಗಿದೆ. ಯೋಗದಿಂದ ಅರೋಗ್ಯ  ವೃದ್ಧಿಯಾಗುತ್ತದೆ. ಮನಸ್ಸುನ್ನು ಸದೃಡಗೊಳಿಸುವ ಕ್ರಿಯೆ ಯೋಗದಲ್ಲಿದೆ.
ಸಾಮಾನ್ಯವಾಗಿ ಯೋಗವು ಹೊಟ್ಟೆ ತುಂಬಿದವರನ್ನು ಹುಡುಕಿಕೊಂಡು ಹೊಗುತ್ತದೆ ಎನ್ನುವ ಮಾತಿದೆ. ಆದರೆ ಇಲ್ಲಿ ಹಸಿವಿನ ಹೊಟ್ಟೆಯೇ ಯೋಗವನ್ನು ಹುಡುಕಿಕೊಂಡು ಹೋಗಿದೆ. ಅಂದರೆ ಇಲ್ಲೊಬ್ಬರು ಬಡತನದಲ್ಲಿ ಯೋಗವನ್ನು ತಾನೂ ಕಲಿತು ಮತ್ತು  ಕಲಿಸುವ ಹವ್ಯಾಸ ಬೆಳಸಿಕೊಂಡಿರುವ ಮತ್ತು ಎರಡು ಪಿಹೆಚ್.ಡಿ ಪದವಿ ಪಡೆದಿರುವ ಡಾ.ತಿಮ್ಮಪ್ಪ ಎನ್. ವಡ್ಡೆಪಲ್ಲಿಯವರು.
ಇವರು ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ವಡ್ಡೆಪಲ್ಲಿ ಗ್ರಾಮದಲ್ಲಿ ದೊಡ್ಡ ನರಸಪ್ಪ ಮತ್ತು ಬಸಮ್ಮ ದಂಪತಿಗಳ ಅನಕ್ಷರಸ್ಥ ಮತ್ತು ಬಡತನ ಕುಟುಂಬದಲ್ಲಿ ಜನಿಸಿದ್ದಾರೆ. ಇವರು ಬಾಲ್ಯದಲ್ಲಿ ಆಕಳು, ಎಮ್ಮೆ  ಇತರ ಸಾಕು ಪ್ರಾಣಿಗಳನ್ನು ಮೇಯಿಸಲು ತಮ್ಮ ಊರಿನ ಗೌಡರ ಮನೆಯಲ್ಲಿ ಜೀತ ಮಾಡುತ್ತಿದ್ದರು. ವಡ್ಡೆಪಲ್ಲಿ ಗ್ರಾಮದ ಸರಕಾರಿ ಶಾಲಾ ಮಾಸ್ಟರ್ ಅವರು ನಿಮ್ಮ ಮಗನನ್ನು ಶಾಲೆಗೆ ಸೇರಿಸಿ ಎನ್ನುವ ಒತ್ತಡಕ್ಕೆ ಅವರ ತಂದೆಯವರು ತಿಮ್ಮಪ್ಪರವರನ್ನು ಶಾಲೆಗೆ ದಾಖಲಿಸಿದ್ದರು. ಊರಿನ ಗೌಡರ ಮನೆಯಲ್ಲಿ ಹಸು, ಎಮ್ಮೆಗಳನ್ನು ಕಾಯುತ್ತಲೇ ತಿಮ್ಮಪ್ಪನವರು ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಇವರು ತಮ್ಮ ಮಾಧ್ಯಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ರಾಯಚೂರು ತಾಲೂಕಿನ  ಯಾಪಲದಿನ್ನಿ ಗ್ರಾಮದಲ್ಲಿ ಮುಗಿಸಿ ತಮ್ಮ ಕಾಲೇಜು ಶಿಕ್ಷಣವನ್ನು ರಾಯಚೂರಿನಲ್ಲಿ ಪೂರೈಸಿ ಪದವಿ ಪಡೆದರು. ಗುಲಬರ್ಗಾ  ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಸ್ನಾತಕೋತ್ತರ ಪದವಿಯ ನಂತರ ೨೦೦೩ ರಲ್ಲಿ ಸಂಶೋಧನೆಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೇರಿಕೊಂಡು ಸಂಶೋಧನೆ ಮಾಡಿ ೨೦೦೭ ರಲ್ಲಿ ಪಿಹೆಚ್.ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಸಂಶೋಧನೆ ಜೊತೆಗೆ ಯೋಗ ಹವ್ಯಾಸವನ್ನು ಬೆಳೆಸಿಕೊಂಡು ಯೋಗದಲ್ಲಿ ಡಿಪ್ಲೋಮ ಅಧ್ಯಯನ ಆರಂಭಿಸಿ ೨೦೦೭ ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಯೋಗದಲ್ಲಿ ಡಿಪ್ಲೋಮದಲ್ಲಿ ಉಚ್ಚ ಶ್ರೇಣಿಯಲ್ಲಿ ಪಾಸಾಗಿ ಚಿನ್ನದ ಪದಕ ಪಡೆದುಕೊಂಡರು.
ಇದರಿಂದ ಉತ್ತೇಜನಗೊಂಡು ಧಾರವಾಡದಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಹಾಗೆಯೇ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರು ೨೦೧೧ ರಲ್ಲಿ ರಾಯಚೂರಿನಲ್ಲಿ ಬಿ.ಎನ್.ಡಬ್ಲ್ಯೂ ಪತಂಜಲಿ ಯೋಗ ಪ್ರತಿಷ್ಠಾನ ಟ್ರಸ್ಟ್‌ನ್ನು ಸ್ಥಾಪಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ, ಆಯುಷ್ ಇಲಾಖೆಯ ಸಿಬ್ಬಂದಿಗಳಿಗೆ ಸೇರಿದಂತೆ ಜಿಲ್ಲೆಯಾದ್ಯಂತ ಉಚಿತ ಯೋಗ ಶಿಬಿರಗಳನ್ನು ನಡೆಸುತ್ತಾ ಪ್ರತಿ ವರ್ಷ ಅಯುಷ್ ಇಲಾಖೆ ಮತ್ತು  ಕ್ರೀಡಾ ಇಲಾಖೆವತಿಯಿಂದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗಳನ್ನು ನಡೆಸಿ ರಾಯಚೂರು ಜಿಲ್ಲೆಯ ಸುಪ್ತ ಪ್ರತಿಬೆಗಳನ್ನು ಗುರುತಿಸಿದ್ದಾರೆ. ಡಾ. ತಿಮ್ಮಪ್ಪ ಅವರಿಂದ  ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಜಯಗಳಿಸಿದ್ದಾರೆ.
ಯೋಗ ಸೇವೆಗೆ ಸಂದ ಪ್ರಶಸ್ತಿಗಳು :
ಇವರ ಸೇವೆಯನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಮತ್ತು ಸರಕಾರವು ಜಿಲ್ಲಾ, ರಾಜ್ಯ ಹಾಗೂ  ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ರಾಯಚೂರು ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಜ್ಯೋತಿ ಬಾ ಪುಲೆ ಫೆಲೋಶಿಪ್ ಪ್ರಶಸ್ತಿ, ದಕ್ಷಿಣ ಭಾರತ ಯೋಗ ಫೆಡರೇಷನ್ ವತಿಯಿಂದ ಯೋಗಶ್ರೀ ಪ್ರಶಸ್ತಿಗಳು ಲಭಿಸಿವೆ. ದಕ್ಷಿಣ ಭಾರತ ಯೋಗ ಚಾಂಪಿಯನ್ ನಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದ ನಂತರ ಅವರಿಗೆ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ೨೦೦೯ ರಲ್ಲಿ ಪಾಂಡಿಚೇರಿಯ ಪ್ರವಾಸೋದ್ಯಮ ಇಲಾಖೆಯಿಂದ ನಡೆದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಐದು ಬಹುಮಾನಗಳನ್ನು ಪಡೆದರು.
ಬೆಂಗಳೂರಿನಲ್ಲಿ ನಡೆದ ೨೦೧೨ ರಲ್ಲಿ ಅಂತರಾಷ್ಟ್ರೀಯ ಕಾಂಬಿನೇಷನ್ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಬ್ಯಾಕ್ ಬೆಂಡಿಂಗ್, ಫ್ರಂಟ್ ಬೆಂಡಿಂಗ್ ಹಾರ್ಡ್ ಹಾಗೂ ಲೆಗ್ ಬ್ಯಾಲೆನ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ೨೦೦೯ ರಲ್ಲಿ ಎಸ್ ಜಿ ಎಸ್ ಅಂತರಾಷ್ಟ್ರೀಯ ಪ್ರತಿಷ್ಠಾನವು ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ತಿಮ್ಮಪ್ಪ ಅವರಿಗೆ ಯೋಗ ಸಂಸ್ಥಾಪಕ ಪತಂಜಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
 ಇವರು ತಮಿಳುನಾಡಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯದಿಂದ ಯೋಗದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದಾರೆ.  ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನ ವಿಭಾಗದಲ್ಲಿ ಪ್ರೊ. ಕೃಷ್ಣ ಶರ್ಮಾ ರವರ ಮಾರ್ಗದರ್ಶನದಲ್ಲಿ ಎಫೆಕ್ಟ್ ಆಫ್ ಯೋಗಿಕ್ ಪ್ರಾಕ್ಟಿಸಸ್ ವಿತ್ ಆಂಡ್ ವಿತ್‌ಔಟ್ ಡಯಟ್ ಮೋಡಿಫಿಕೇಶನ್ ಆನ್ ಸೆಲೆಕ್ಟಡ್ ರಿಸ್ಕ ಫಾಕ್ಟರಸ್ ಆಮಾಂಗ್ ಅಸ್ತಮಾಟಿಕ್ ಮಿಡ್ಲ್ ಏಜ್ ಮೆನ್ ವಿಷಯದಲ್ಲಿ ೨೦೨೨ ರಲ್ಲಿ ಯೋಗ ವಿಜ್ಞಾನದಲ್ಲಿ ಪಿಹೆಚ್.ಡಿ ಪದವಿ ಪಡೆದಿದ್ದಾರೆ.
ಇವರು ಹಲವಾರು ಯು.ಜಿ.ಸಿ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಸಮ್ಮೆಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯಗಳಲ್ಲಿ ಯೋಗ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಈ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಸೂಚಿ ಮಂಡಳಿ ಮತ್ತು  ಪರಿಕ್ಷಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ..
ಜೈಲುಗಳಲ್ಲಿ ಯೋಗ ತರಬೇತಿ ಶಿಬಿರಗಳು
ಯೋಗವು ದೈಹಿಕವಾಗಿ ಬಲಿಷ್ಠತೆ ಮತ್ತು ಮಾನಸಿಕವಾಗಿ ಸಮತೋಲನವನ್ನು ಕಾಪಾಡುತ್ತದೆ ಮತ್ತು ಯೋಗವು ಜೈಲುವಾಸಿಗಳ ಮನೋಬಲವರ್ಧಕವಾಗಿದೆ. ಜೈಲುವಾಸಿಗಳು ದೈಹಿಕ ಅಥವಾ ಮಾನಸಿಕ  ಒತ್ತಡಗಳಿಂದ ಬಾವೋದ್ವೇಗಕ್ಕೆ ಒಳಗಾಗಿರುತ್ತಾರೆ. ಇಂತಹ ನೊಂದವರ ಮನಸ್ಸಿನಲ್ಲಿ ಹೊಸ ಚೈತನ್ಯವನ್ನು ಮೂಡಿಸಲು ಯೋಗ ಪರಿಹಾರವಾಗಬಲ್ಲದು ಎಂದು ಮೊದಲು ಬಾರಿಗೆ ಧಾರವಾಡ ಕೇಂದ್ರ ಕಾರಗೃಹದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಯೋಗ ಆಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಡಾ. ಬಸವರಾಜ ಸಿದ್ಧಾಶ್ರಮ ಅವರ ಮಾರ್ಗದರ್ಶನದಲ್ಲಿ ಡಾ. ತಿಮ್ಮಪ್ಪ ಎನ್. ವಡ್ಡೆಪಲ್ಲಿ ಯವರು ೨೦೦೭ ರಿಂದ ಯೋಗ ತರಬೇತಿ ಶಿಬಿರಗಳನ್ನು ಪ್ರಾರಂಭಿಸಿದರು. ಯೋಗ ತರಬೇತಿಯನ್ನು ಪಡೆದ ಹಲವಾರು ಜೈಲಿನ ಬಂಧಿಗಳು ಯೋಗವು ಒಂದು ತುಂಬಾ ಪ್ರಯೋಜನಕಾರಿಯಾದ ಮನೋ-ದೈಹಿಕ ನೋವುಗಳನ್ನು ನಿವಾರಿಸುವ ವ್ಯಾಯಾಮವಾಗಿದೆ ಎಂದು ಉತ್ತಮ ಪ್ರತಿಕ್ರಿಯೆ ನೀಡಿದ್ದರು.  ಜೈಲು ಅಧಿಕಾರಿಗಳು ಇಂತಹ ಉತ್ತಮ, ನಿಸ್ವಾರ್ಥ ಮತ್ತು ಉಚಿತವಾದ ಸೇವೆಯನ್ನು ಪ್ರಶಂಸಿಸಿದ್ದರು.
 ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನದಲ್ಲಿ ಪದವಿ ಮುಗಿಸಿದ ನಂತರ ೨೦೦೮ ರಿಂದ ತಮ್ಮ ತವರು ಜಿಲ್ಲೆಯಾದ ರಾಯಚೂರ ಜಿಲ್ಲಾ ಕಾರಗೃಹದಲ್ಲಿ ಯೋಗ ತರಬೇತಿಯನ್ನು ಆಗಿನ ಜಿಲ್ಲಾ ಕಾರಗೃಹದ ಅಧಿಕ್ಷಕ ಮ್ಯಾಗೇರಿಯವರ ಅನುಮತಿಯೊಂದಿಗೆ ಯೋಗ ತರಬೇತಿಯನ್ನು ಪ್ರಾರಂಭಿಸಿದರು.  ಪ್ರತಿಯೊಂದು ಯೋಗ ಶಿಬಿರಕ್ಕೆ ಒಬ್ಬ ಪ್ರಾಚಾರ್ಯ, ಸಾಹಿತಿ, ಅಧಿಕಾರಿಗಳನ್ನು ಸೇರಿಸಿಕೊಂಡು ವಿಚಾರವಾದಿಗಳಿಂದ ಮೌಲ್ಯ ಶಿಕ್ಷಣ ಕುರಿತು ಉಪನ್ಯಾಸ ನೀಡಿ ಯೋಗ ತರಬೇತಿಯನ್ನು ಪ್ರಾರಂಭ ಮಾಡುತ್ತಾರೆ.
೨೦೦೯ ರಲ್ಲಿ ರಾಯಚೂರಿನ ಸೀತಾ ಸುಬ್ಬರಾಜು ಕಾಲೇಜಿನ ಪ್ರಾಚಾರ್ಯ ಶಿವಬಸಪ್ಪ ಮಾಲಿ ಪಾಟೀಲ್ ಅವರು ಡಾ. ತಿಮ್ಮಪ್ಪ ವಡ್ಡೆಪಲ್ಲಿಯವರ ನಿಸ್ವಾರ್ಥ ಮತ್ತು ಉಚಿತ ಯೋಗದ ಸೇವೆಯನ್ನು ಶ್ಲಾಘನೀಯ ಎಂದಿದ್ದರು. ೨೦೨೨ ರಲ್ಲಿ ರಾಯಚೂರಿನ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸಿಕ್ಕಮ್ ಪ್ರಕಾಶ ಅವರು ಯೋಗ ಶಿಬಿರವನ್ನು ಉದ್ಘಾಟಿಸಿ ಇಂತಹ ಯೋಗ ಶಿಬಿರಗಳು ಜೈಲಿನ ಬಂಧಿಗಳಲ್ಲಿ ಅಪರಾಧಿ ಮನೋಭಾವನೆಯನ್ನು ಕಡಿಮೆ ಮಾಡುತ್ತದೆ. ಡಾ. ತಿಮ್ಮಪ್ಪ ವಡ್ಡೆಪಲ್ಲಿಯವರ ಯೋಗ ಸೇವೆ ಉತ್ತಮವಾದದ್ದು. ಇಂತಹ ಸೇವೆ ಮುಂದುವರೆಯಲಿ ಎಂದು ಸಲಹೆ ನೀಡಿದ್ದರು.
ಜೈಲುಗಳಲ್ಲಿ ಯೋಗ ತರಬೇತಿ ಪಡೆದವರು ಜೈಲಿನಿಂದ ಬಿಡುಗಡೆಯಾದ ನಂತರ ಬೇರೆ ಬೇರೆ ಊರುಗಳಲ್ಲಿ ಸಿಗುತ್ತಾರೆ. ನಾನು ಜೈಲಿನಲ್ಲಿದ್ದಾಗ ನೀವು ಯೋಗ ಕಲಿಸಲು ಬರುತ್ತಿದ್ದಿರಿ, ನಿಮ್ಮ ಯೋಗ ಅಭ್ಯಾಸದಿಂದ ನಮ್ಮ ಬಂಧನದ ನೋವನ್ನು ಮರೆತು ಬಾಳಲು ತುಂಬಾ ಸಹಕಾರಿಯಾಗಿತ್ತು ಎಂದು ಧನ್ಯವಾದ ತಿಳಿಸಿ ಡಾ. ತಿಮ್ಮಪ್ಪ ವಡ್ಡೆಪಲ್ಲಿಯವರನ್ನು ಗೌರವಿಸುತ್ತಾರೆ.
೨೧ ನೇ ಜೂನ್ ಪ್ರತಿ ಯೋಗ ದಿನಾಚರಣೆಯನ್ನು ಜೈಲಿನ ಸಿಬ್ಬಂದಿಗಳ ಸಹಕಾರದಲ್ಲಿ ಜೈಲುವಾಸಿಗಳಿಗೆ ಕನಿಷ್ಠ ಹದಿನೈದು ದಿನಗಳ ಪೂರ್ವಭಾವಿ ಯೋಗದ ತರಬೇತಿಯನ್ನು ನೀಡಿ ಆಚರಿಸುತ್ತಾರೆ.  ಜೈಲುವಾಸಿಗಳಿಗೆ ಯೋಗ ಸ್ಪರ್ಧೆಯನ್ನು ನಡೆಸಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡುತ್ತಾರೆ.
ರಾಯಚೂರು ಜಿಲ್ಲಾ ಆಯುಷ್ ಇಲಾಖೆಯು ಯೋಗ ಶಿಬಿರದಲ್ಲಿ ಬಾಗವಹಿಸಿ ಪ್ರೋತ್ಸಾಹಿಸುತ್ತಾರೆ. ಆಯುರ್ವೇದ, ಯೋಗ ನಾಚುರೋಪತಿ ವೈದ್ಯರು ಈ ಯೋಗ ಶಿಬಿರಗಳಲ್ಲಿ ಬಾಗವಹಿಸಿ ಭಾರತೀಯ ಐದು ಆಯುಷ್ ಚಿಕಿತ್ಸಾ ಪದ್ದತಿಗಳನ್ನು ತಿಳಿಸಿ ಜೈಲುಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸುತ್ತಾರೆ. ಇತರೆ ಇಲಾಖೆಗಳ, ಸಂಸ್ಥೆಗಳ ಯೋಗ ಕಾರ್ಯಕ್ರಮಗಳಲ್ಲಿ ಡಾ. ತಿಮ್ಮಪ್ಪ ವಡ್ಡೆಪಲ್ಲಿಯವರ ಯೋಗ ಪ್ರದರ್ಶನ ಮತ್ತು ಉಪನ್ಯಾಸಗಳು ಇರುತ್ತವೆ.
ಪ್ರಸ್ತುತ ಡಾ.ತಿಮ್ಮಪ್ಪ ಎನ್. ವಡ್ಡೆಪಲಿಯವರು ರಾಯಚೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಯೋಗವನ್ನು ಕಲಿಸುತ್ತಿದ್ದಾರೆ. ಜೂನ್ ೨೧ ರ  ಯೋಗ ದಿನಾಚರಣೆ ರಾಯಚೂರು ಜಿಲ್ಲಾಡಳಿತದಿಮದ ಕ್ರೀಡಾಂಗಣದಲ್ಲಿ, ಜಿಲ್ಲಾ ಕಾರಗೃಹದಲ್ಲಿ ವಿವಿಧ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಪಾಲ್ಗೊಂಡು ಯೋಗ ಪ್ರದರ್ಶನ ನೀಡುತ್ತಿದ್ದಾರೆ. ಇವರ ಯೋಗದ ಪ್ರಯಾಣ ಇನ್ನಷ್ಟು ಮುಂದೆ ಸಾಗಲಿ ಎಂದು ಆಶಿಸೋಣ. ಡಾ. ತಿಮ್ಮಪ್ಪ ಎನ್. ವಡ್ಡೆಪಲಿಯವರ ಮೋಬೈಲ್ ನಂಬರ್ : ೯೯೦೦೭೭೮೦೪೯.
-ಡಾ. ನರಸಿಂಹ ಗುಂಜಹಳ್ಳಿ
ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ವಿಭಾಗ
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ
                                        ಮೋಬೈಲ್ ; ೯೯೦೨೯೨೭೯೪೫.

Get real time updates directly on you device, subscribe now.

Comments are closed.

error: Content is protected !!
%d bloggers like this: