ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್:ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

Get real time updates directly on you device, subscribe now.

ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ೋಷಣೆ ಮಾಡುವ ಮೂಲಕ ಬೇಡಿಕೆ ಈಡೇರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಯುಡಬ್ಲೂೃಜೆ ಅಭಿನಂದನೆ ಸಲ್ಲಿಸಿದೆ.
ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರುಗಳನ್ನೊಳಗೊಂಡ ನಿಯೋಗ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಧನ್ಯವಾದ ತಿಳಿಸಿತು.
ಬಹು ವರ್ಷಗಳ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತು ಕೊಟ್ಟಂತೆ ನಡೆದುಕೊಂಡಿರುವುದನ್ನು ನೆನಪಿಸಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯದ ಸಾವಿರಾರು ಗ್ರಾಮೀಣ ಪತ್ರಕರ್ತರಿಗೆ ಇದರಿಂದ ಅನುಕುಲ ಆಗಲಿದ್ದು, ನಿಮ್ಮ ಈ ಉದಾರತೆಗೆ ಪತ್ರಕರ್ತರ ಸಂಘ ಸದಾ ಚಿರರುಣಿಯಾಗಿರುತ್ತದೆ ಎಂದರು. ಇದಕ್ಕೆ ಮುಖ್ಯಮಂತ್ರಿಗಳು ನಗುತ್ತಲೇ ಕೈ ಜೋಡಿಸಿ, ನಿಯೋಗಕ್ಕೆ ಪ್ರತಿ ಧನ್ಯವಾದ ತಿಳಿಸಿದರು.
ತಮಗೆ ಅಭಿನಂದನಾ ಕಾರ್ಯಕ್ರಮಕ್ಕೆ ದಿನಾಂಕ ನೀಡುವಂತೆ ವಿನಂತಿಸಿದಾಗ, ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ದಿನಾಂಕ ನೀಡುವೆ ಎಂದು ಸಿಎಂ ತಿಳಿಸಿದರು.
ಸಂಘದ ನಿಯೋಗದೊಂದಿಗೆ ಮುಖ್ಯಮಂತ್ರಿಗಳು ಬಹಳ ಪ್ರೀತಿ ಮತ್ತು ವಿಶ್ವಾಸದಿಂದ ಮನದುಂಬಿ ಮಾತನಾಡಿದರು.
ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲಿಕ ಬಾಳೋಜಿ, ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಮಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ ಇಂಡಾಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬೀದರ್‌ನ ಶಿವಕುಮಾರ ಸ್ವಾಮಿ, ರಾಯಚೂರಿನ ಮೊಹಮದ್ ಪಾಷ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಹುಬ್ಬಳ್ಳಿಯ ಗಣಪತಿ ಗಂಗೊಳ್ಳಿ, ಹಾಸನದ ಎಚ್.ಬಿ.ಮದನಗೌಡ, ರಾಯಚೂರಿನ ಶಿವಮೂರ್ತಿ, ಮಂಗಳೂರು ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಖಜಾಂಚಿ ಪುಷ್ಪರಾಜ್ ಮುಂತಾದವರು ನಿಯೋಗದಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: